'ಹುಬ್ಬಳ್ಳಿ-ಅಂಕೋಲಾ ರೈಲ್ವೆ ಮಾರ್ಗಕ್ಕೆ ಕೇಂದ್ರ ಒಪ್ಪಿಗೆ'
ಹುಬ್ಬಳ್ಳಿ, ಜನವರಿ, 17 : ಉತ್ತರ ಕರ್ನಾಟಕ ಮತ್ತು ಕರಾವಳಿ ಭಾಗದ ಜನರ ಬೇಡಿಕೆಯಾಗಿದ್ದ ಹುಬ್ಬಳ್ಳಿ-ಅಂಕೋಲಾ ನಡುವಿನ ಹೊಸ ರೈಲ್ವೆ ಮಾರ್ಗಕ್ಕೆ ಕೇಂದ್ರದ ಸರಕಾರ ಒಪ್ಪಿಗೆ ಸಿಕ್ಕಿದೆ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.
ಸ್ಥಳೀಯ ಖಾಸಗಿ ಹೋಟೆಲ್ ವೊಂದರಲ್ಲಿ ಜರುಗಿದ ಬಜೆಟ್ ಪೂರ್ವಭಾವಿ ಸಂವಾದದಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಮತ್ತು ಅಂಕೋಲಾ ಹೊಸ ರೈಲ್ವೆ ಮಾರ್ಗಕ್ಕೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ ಎಂದರು.
2004 ರಲ್ಲಿ ಹೊಸ ರೈಲ್ವೆ ಮಾರ್ಗದಿಂದ ಪರಿಸರ ಹಾನಿಯಾಗುತ್ತದೆ ಎಂದು ಕೇಂದ್ರ ಮತ್ತು ರಾಜ್ಯ ಸರಕಾರಗಳು ತಿರಸ್ಕೃತ ಮಾಡಿದ್ದವು. ಇದು ಆ ಸಮಯದಲ್ಲಿನ ಸರಕಾರಗಳು ತಪ್ಪಿನಿಂದ ಹೀಗಾಗಿತ್ತು.
ಈಗ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿವೆ. ರಾಜ್ಯ ಸರಕಾರವು ಸಲ್ಲಿಸಿದ ಪ್ರಸ್ತಾವನೆಗೆ ಹಸಿರು ನ್ಯಾಯಾಧೀಕರಣ ಒಪ್ಪಿಗೆ ಸೂಚಿಸಿದೆ. ಹುಬ್ಬಳ್ಳಿ- ವಾರಣಾಸಿ ಮತ್ತು ಹುಬ್ಬಳ್ಳಿ- ಮಂಗಳೂರು ನೂತನ ರೈಲೊಂದನ್ನು ಆರಂಭಿಸುವಂತೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದರು.
ಕೇಂದ್ರ ಸರಕಾರವು ಹುಬ್ಬಳ್ಳಿ- ವಾರಣಾಸಿ ರೈಲು ಸೇವೆ ಆರಂಭಿಸಲು ಒಪ್ಪಿಗೆ ಸೂಚಿಸಿದೆ. ಮತ್ತು ಎರಡೂ ರೈಲುಗಳಿಗೆ ಮೈಲಾರ ಮಹದೇವಪ್ಪ ಮತ್ತು ಸಿದ್ಧಾರೂಢರ ಹೆಸರಿಡುವುದು ಮತ್ತು ಧಾರವಾಡ ರೈಲು ನಿಲ್ದಾಣವನ್ನು ಆಧುನೀಕರಣಗೊಳಿಸಲು ಮನವಿ ಸಲ್ಲಿಸಲಾಗಿದೆ.
ರಾಜ್ಯ ಸರಕಾರದ ನಿರ್ಲಕ್ದ್ಯದಿಂದ ಹುಬ್ಬಳ್ಳಿ- ಬೆಂಗಳೂರು ನಡುವೆ ಜೋಡಿ ಮಾರ್ಗ ವಿಳಂಬವಾಗುತ್ತದೆ. ಕೂಡಲೇ ರಾಜ್ಯ ಸರಕಾರ ಡಬ್ಲಿಂಗ್ ಯೋಜನೆ ಜಾರಿಗೆ ತಂದು ಭೂ ಸ್ವಾಧೀನ ಮಾಡಿ ಕೊಟ್ಟರೆ ರೈಲ್ವೆ ಇಲಾಖೆ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಆಶ್ವಾಸನೆ ನೀಡಿದ್ದಾರೆ ಎಂದರು.