ರೈಲ್ವೆ ಕ್ಯಾಟರಿಂಗ್ಗೆ ನೈರುತ್ಯ ರೈಲ್ವೆ ಜಿಎಂ ದಿಢೀರ್ ಭೇಟಿ
ಹುಬ್ಬಳ್ಳಿ, ಜುಲೈ 30: ರೈಲು ಮತ್ತು ರೈಲ್ವೆ ನಿಲ್ದಾಣಗಳಲ್ಲಿ ಕಳಪೆ ಆಹಾರ ಪೂರೈಕೆಯಾಗುತ್ತಿದೆ ಎಂಬ ಪ್ರಯಾಣಿಕರ ದೂರಿನ ಹಿನ್ನೆಲೆಯಲ್ಲಿ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಶೋಕ್ ಗುಪ್ತಾ ಶನಿವಾರ (ಜುಲೈ 29) ರಂದು ಹುಬ್ಬಳ್ಳಿ ನಗರದ ಕೇಂದ್ರ ರೈಲ್ವೆ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪ್ರಯಾಣಿಕರಿಗೆ ಸಿದ್ಧಪಡಿಸುವ ಆಹಾರ ತಯಾರಿಕಾ ಘಟಕ (ಕ್ಯಾಟರಿಂಗ್ ವಿಭಾಗ), ಬೇಕರಿ ಹಾಗೂ ಲಾಂಡ್ರಿ ವಿಭಾಗಗಳನ್ನು ಪರಿಶೀಲಿಸಿದರು.
ಅಡುಗೆ ಕೆಂದ್ರಗಳಲ್ಲಿ ನೈರ್ಮಲ್ಯ ಕಾಪಾಡುವ ರೈಲ್ವೆ ಮಂಡಳಿ ಸಲಹೆಯಂತೆ ವಾಣಿಜ್ಯ, ಇಂಜಿನಿಯರಿಂಗ್, ಮೆಡಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ವಿಭಾಗಗಳ ಅಧಿಕಾರಿಗಳ ತಂಡದೊಂದಿಗೆ ನಿಲ್ದಾಣದಲ್ಲಿರುವ ಹಾಗೂ ಮೊಬೈಲ್ ಅಡುಗೆ ಘಟಕಗಳ ಮತ್ತು ಮಾರಾಟ ಮಳಿಗೆಗಳನ್ನು ಗುಪ್ತಾ ಪರಿಶೀಲನೆ ನಡೆಸಿದರು. ಪ್ರಯಾಣಿಕರಿಗೆ ಪೂರೈಕೆ ಮಾಡುವ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವುದು, ರೈಲ್ವೆ ನಿಲ್ದಾಣ ಮತ್ತು ರೈಲ್ವೆ ಭೋಗಿಗಳನ್ನು ಸ್ವಚ್ಛತೆಯಿಂದ ಇಟ್ಟುಕೊಳ್ಳುವಂತೆ ಅವರು ಈ ಸಂದರ್ಭದಲ್ಲಿ ಸೂಚನೆ ನೀಡಿದರು.
ರೈಲ್ವೆ ಇಲಾಖೆಯಿಂದ ಮೂರು ವಾರಗಳ ಕಾಲ ಕಾರ್ಯಾಚರಣೆ ಕೈಗೊಳ್ಳಲಿದ್ದು, ಕುಡಿಯುವ ನೀರನ್ನು ಬಳಸಿ ಅಡುಗೆ ತಯಾರಿಸುವುದು ಮತ್ತು ಆಹಾರವನ್ನು ಸಂಗ್ರಹಿಸುವಲ್ಲಿ ಆರೋಗ್ಯಕರ ವಿಧಾನಗಳನ್ನು ಅನುಸರಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ವಾಣಿಜ್ಯ ವಿಭಾಗದ ಅಧಿಕಾರಿಗಳು ಮತ್ತು ಆರ್ಪಿಎಫ್ ಸಿಬ್ಬಂದಿ ಜಂಟಿಯಾಗಿ ಆಹಾರ ಮತ್ತು ನೀರಿನ ಮಾದರಿಯನ್ನು ಪರಿಶೀಲಿಸುತ್ತಾರೆ ಎಂದು ಹೇಳಿದರು.
ಪ್ರಯಾಣಿಕರಿಗೆ ಪೂರೈಸುವ ಹೊದಿಕೆಗಳನ್ನು ಶುಚಿಯಾಗಿಡಬೇಕು. ಇದಕ್ಕಾಗಿ ಲಾಂಡ್ರಿಗಳಲ್ಲಿ ನಿರಂತರ ಸ್ವಚ್ಛತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಜಿಎಂ ಆದೇಶಿಸಿದರು.
ಹುಬ್ಬಳ್ಳಿ ವಿಭಾಗೀಯ ರೈಲ್ವೆ ಮ್ಯಾನೇಜರ್ ಅರುಣ್ಕುಮಾರ್ ಜೈನ್, ಕಮರ್ಶಿಯಲ್ ಮ್ಯಾನೇಜರ್ ಎಸ್.ಎಸ್.ಶಾಸ್ತ್ರಿ, ರೈಲ್ವೆ ಮುಖ್ಯ ವೈದ್ಯಕೀಯ ನಿರ್ದೇಶಕ ಡಾ.ಎಚ್.ಪ್ರದೀಪ್ಕುಮಾರ್, ಸೀನಿಯರ್ ಡಿವಿಜನ್ ಕಮರ್ಷಿಯಲ್ ಮ್ಯಾನೇಜರ್ ಐ.ಸೆಂಥಿಲ್ಕುಮಾರ್ ಇದ್ದರು.