ಹುಬ್ಬಳ್ಳಿ ಗಲ್ಲಿ ಗಲ್ಲಿಗಳಲ್ಲಿ ಬೀದಿನಾಯಿಗಳ ಹಾವಳಿ, ಯಾಮಾರಿದ್ರೆ ಅಷ್ಟೇ..!
ಹುಬ್ಬಳ್ಳಿ, ಜೂನ್ 27 : ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಸದ್ಯ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ರಾತ್ರಿ ಒಬ್ಬಂಟಿಯಾಗಿ ತಿರುಗಾಡಲು ಜನ ಹೆದರುವ ಸ್ಥಿತಿ ಬಂದಿದೆ.
ಬೀದಿನಾಯಿಗಳು ಗಲ್ಲಿ ಗಲ್ಲಿಗಳಲ್ಲಿ ದ್ವಿಚಕ್ರ ವಾಹನಗಳನ್ನೂ ಬೆನ್ನಟ್ಟುತ್ತಿವೆ. ಅಷ್ಟೇ ಅಲ್ಲದೆ ರಸ್ತೆಗಳಲ್ಲಿ ಗುಂಪು, ಗುಂಪಾಗಿ ತಿರುಗಾಡುವ ಬೀದಿನಾಯಿಗಳು ಜನರ ಮೇಲೆ ಎರಗಿ, ಕಚ್ಚಿ ಗಾಯಗೊಳಿಸುವ ಘಟನೆಗಳು ಪ್ರತಿದಿನ ನಡೆಯುತ್ತಲೇ ಇವೆ.
ಆನಂದನಗರದ ಮಿಲನ ಕಾಲೋನಿಯ ಮನೆ ಕಟ್ಟೆ ಮೇಲೆ ಕುಳಿತ್ತಿದ್ದ ಎರಡು ವರ್ಷದ ಹೆಣ್ಣು ಮಗು ಸನಾ ರಾಯಬಾಗ ಮೇಲೆ ಏಳೆಂಟು ಬೀದಿನಾಯಿಗಳು ದಾಳಿ ನಡೆಸಿ ತೀವ್ರವಾಗಿ ಗಾಯಗೊಳಿಸಿರುವ ಪ್ರಕರಣ ಇತ್ತಿಚೆಗೆ ನಡೆದಿದ್ದನ್ನು ಸ್ಮರಿಸಿಕೊಳ್ಳಬಹುದು.
ಹುಬ್ಬಳ್ಳಿ: ಹಂದಿ ಮಾಲೀಕರು ಬೀದಿನಾಯಿಗಳ ಮಾರಣ ಹೋಮ ಮಾಡಿದ್ರಾ?
ನಗರದಲ್ಲಿರುವ ಹೋಟೆಲ್, ರೆಸ್ಟೋರೆಂಟ್ ಹಾಗೂ ಮನೆಗಳಲ್ಲಿ ಉಳಿದ ಆಹಾರ ಮತ್ತು ಕುರಿ, ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಪಾಲಿಕೆಯ ಕಂಟೈನರಗಳಲ್ಲಿ, ಖಾಲಿ ಜಾಗದಲ್ಲಿ ಎಸೆಯುತ್ತಿರುವುದರಿಂದ ಬೀದಿ ನಾಯಿಗಳಿಗೆ ಆಹಾರದ ಕೊರತೆ ಇಲ್ಲ. ಇದರಿಂದ ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ.
'ಅವಳಿ ನಗರಗಳಲ್ಲಿ ಅಂದಾಜು 15 ಸಾವಿರಕ್ಕೂ ಹೆಚ್ಚು ಬೀದಿನಾಯಿಗಳಿವೆ. ಈ ಬಗ್ಗೆ ತೊಂದರೆಗೆ ಒಳಗಾದ ಸಾರ್ವಜನಿಕರಿಂದ ನಿತ್ಯ ದೂರುಗಳು ಬರುತ್ತಿವೆ' ಎಂದು ಪಾಲಿಕೆ ಆರೋಗ್ಯ ಅಧಿಕಾರಿ ಡಾ.ಪ್ರಭು.ಎನ್.ಬಿರಾದಾರ ತಿಳಿಸಿದ್ದಾರೆ.
'ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಇನ್ನೊಂದು ವಾರದೊಳಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ' ಎಂದರು.
ಬಿಡಾಡಿ ಜಾನುವಾರಗಳ ಸಂಖ್ಯೆಯೂ ಅಧಿಕ: ಬೀದಿ ನಾಯಿಗಳೊಂದಿಗೆ ಬಿಡಾಡಿ ಜಾನುವಾರಗಳ ಹಾವಳಿಯೂ ಅಧಿಕವಾಗಿದೆ. ರಸ್ತೆ ಮಧ್ಯೆದಲ್ಲಿಯೇ ಮಲಗಿ ಸಂಚಾರಕ್ಕೆ ತೊಂದರೆ ನೀಡುವ ಈ ಬಿಡಾಡಿ ಜಾನುವಾರಗಳು ಜನರಿಗೆ ತಿವಿದು ಗಾಯಗೊಳಿಸಿದ್ದೂ ಉಂಟು.
ಜವಳಿಸಾಲ, ಅಳಗುಂಡಗಿ, ಹೀರೆಪೇಟೆ, ಸಿಂಪಿ ಸೇರಿದಂತೆ ಮತ್ತಿತರ ಪ್ರದೇಶಗಳು ಬಿಡಾಡಿ ಜಾನುವಾರಗಳ ಅಡ್ಡಾಗಳಾಗಿವೆ. 'ಅವಳಿ ನಗರದಲ್ಲಿ ಅಂದಾಜು 2000 ಬಿಡಾಡಿ ಜಾನುವಾರಗಳಿದ್ದು, ಇವುಗಳನ್ನು ಬೀದಿಗೆ ಬಿಡದಂತೆ ಜಾನುವಾರಗಳ ಮಾಲೀಕರಿಗೆ ಹಾಗೂ ಮಠಗಳಿಗೆ ಈಗಾಗಲೇ ನೋಟಿಸ್ ಸಹ ನೀಡಲಾಗಿದೆ.
ನೋಟಿಸ್ ನೀಡಿದ್ದರೂ ಸಹ ಇನ್ನೂ ಬೀದಿನಾಯಿ ಹಾಗೂ ಬಿಡಾಡಿ ಜಾನುವಾರಗಳ ಕಾಟ ಮಾತ್ರ ತಪ್ಪಿಲ್ಲ.