ಹುಬ್ಬಳ್ಳಿಯಲ್ಲಿ ಪ್ರೇಮಿಗಳು ಸಿಕ್ಕರೆ ಶ್ರೀರಾಮ ಸೇನೆಯವರು ಮದುವೆ ಮಾಡಿಸ್ತಾರಂತೆ!
ಪ್ರೇಮಿಗಳ ಮದುವೆಗೆ ಯಾರಾದರೂ ಅಡ್ಡಿಯಾಗಿದ್ದರೆ ನಾವು ಮುಂದೆ ನಿಂತು ವಿವಾಹಕ್ಕೆ ಏರ್ಪಾಟು ಮಾಡ್ತೀವಿ. ಆ ಜೋಡಿಗಳ ತಂದೆ-ತಾಯಿ ಜತೆ ನಾವು ಮಾತಾಡ್ತೀವಿ ಎಂದು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ ಶ್ರೀರಾಮ ಸೇನೆಯವರು ಹೇಳಿದ್ದಾರೆ
ಹುಬ್ಬಳ್ಳಿ, ಫೆಬ್ರವರಿ 13: ಫೆಬ್ರವರಿ 14ರಂದು ಹುಬ್ಬಳ್ಳಿಯಲ್ಲಿ ಯಾರಾದರೂ ಪ್ರೇಮಿಗಳ ದಿನ ಆಚರಣೆಗೆ ಬಂದರೆ ಅವರಿಗೆ ಸೀರೆ, ಪಂಚೆ ಮತ್ತು ತಾಳಿ ನೀಡಿ ಮದುವೆ ಮಾಡಿಸಲಾಗುತ್ತದೆ ಎಂದು ಶ್ರೀರಾಮ ಸೇನೆ ಸಂಘಟನಾ ಕಾರ್ಯದರ್ಶಿ ಗಣೇಶ ಕದಂಡ ಹೇಳಿದರು.
ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿ, ಪ್ರೇಮಿಗಳ ದಿನಾಚರಣೆಗೆ ಹಿಂದೂ ಸಂಪ್ರದಾಯದ ವಿರೋಧವಿದೆ. ಹೀಗಾಗಿ ಶ್ರೀರಾಮ ಸೇನೆ ಪ್ರೇಮಿಗಳ ದಿನಾಚರಣೆಯನ್ನು ಖಂಡಿಸುತ್ತದೆ ಎಂದರು.
ಪ್ರೇಮಿಗಳ ದಿನಾಚರಣೆ ವಿರುದ್ಧ ಜನಜಾಗೃತಿಗಾಗಿ ಶ್ರೀರಾಮ ಸೇನೆಯ 60 ಜನರ ತಂಡ ರಚನೆ ಮಾಡಲಾಗಿದೆ. ಈ ತಂಡವು ಅವಳಿ ನಗರದ ಶಾಲೆ, ಕಾಲೇಜು ಮತ್ತು ಪಾರ್ಕ್ ಗಳಲ್ಲಿ ಅಡ್ಡಾಡಿ ಪ್ರೇಮಿಗಳ ದಿನದಂದು ಯುವಕರು ಹಾಗೂ ಯುವತಿಯರಿಗೆ ಜಾಗೃತಿ ಮೂಡಿಸುತ್ತದೆ ಎಂದರು.[ಪ್ರೇಮಿಗಳ ದಿನಕ್ಕೆ ಸಜ್ಜಾದ ಸಾಂಸ್ಕೃತಿಕ ನಗರಿ...!]
ಪ್ರೇಮಿಗಳ ದಿನದ ಬದಲು ಮಾತಾ -ಪಿತೃ ದಿನ ಆಚರಿಸಿ ಎಂದು ಯುವಕ- ಯುವತಿಯರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರೇಮಿಗಳ ದಿನಾಚರಣೆಯಂದು ಯಾರಾದರೂ ಜೋಡಿ ಪರಸ್ಪರ ಒಪ್ಪಿಕೊಂಡು ಮದುವೆಯಾಗಲು ಮುಂದೆ ಬಂದರೆ ಸೇನೆ ವತಿಯಿಂದ ಮದುವೆ ಮಾಡಿ ಕೊಡಲಾಗುವುದು ಎಂದು ಹೇಳಿದರು.
ಯಾವುದೇ ಪ್ರೇಮಿಗಳು ನಮ್ಮ ತಂಡದವರ ಕೈಗೆ ಸಿಕ್ಕಿಬಿದ್ದಲ್ಲಿ, ಯುವಕ ಮತ್ತು ಯುವತಿಯರ ಪಾಲಕರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಎರಡೂ ಕುಟುಂಬಗಳಲ್ಲಿ ಮದುವೆಗೆ ವಿರೋಧವಿದ್ದರೆ ಆ ಜೋಡಿಯ ಮದುವೆಯನ್ನು ಸೇನೆಯೇ ಮಾಡಿಸುತ್ತದೆ. ಆ ಜೋಡಿಗೆ ಸೀರೆ, ಪಂಚೆ ಮತ್ತು ಮಾಂಗಲ್ಯ ಸರವನ್ನು ಉಡುಗೊರೆಯಾಗಿ ನೀಡಲಾಗುವುದು ಎಂದರು.[ಪ್ರೇಮಿಗಳ ದಿನಕ್ಕೆ ಫೆ.13ರಂದು ಕಿಸ್ ದಿನದ ರಿಹರ್ಸಲ್]
ಧಾರವಾಡದಲ್ಲಿ ಮಾತಾ ಪಿತೃ ದಿನ: ಪ್ರೇಮಿಗಳ ದಿನದ ಬದಲಿಗೆ ಬದಲಿಗೆ ಶ್ರೀರಾಮಸೇನೆಯು ನಗರದ ಎಲ್ಲ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಮಾತಾ-ಪಿತೃ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಶ್ರೀರಾಮಸೇನೆ ಜಿಲ್ಲಾ ಸಂಚಾಲಕ ಮಂಜುನಾಥ ಗೌಳಿ ಹೇಳಿದ್ದಾರೆ.
ಪ್ರೇಮಿಗಳ ದಿನದಂದು ಶಾಲಾ, ಕಾಲೇಜು ಆವರಣ, ವಿವಿಧ ಪಾರ್ಕ್ ಗಳಲ್ಲಿ ಸೇರುವ ಪ್ರೇಮಿಗಳನ್ನು ಪೊಲೀಸರು ವಶಕ್ಕೆ ಪಡೆದು ಅವರಿಗೆ ಈ ತಪ್ಪು ಆಚರಣೆ ಬಗ್ಗೆ ತಿಳಿಹೇಳಬೇಕು. ಈ ಸಂಬಂಧವಾಗಿಯೇ ಪೊಲೀಸ್ ಇಲಾಖೆಯೇ ಖುದ್ದಾಗಿ ಒಂದು ವಿಶೇಷ ದಳವನ್ನು ರಚಿಸಬೇಕು ಎಂದು ಆಗ್ರಹಿಸಿದ್ದಾರೆ.