ಹರಿಹರ-ಗದಗ ರೈಲ್ವೆ ಮಾರ್ಗ ಶೀಘ್ರವಾಗಲಿ: ಶಿವಕುಮಾರ ಉದಾಸಿ
ಹುಬ್ಬಳ್ಳಿ, ಜನವರಿ, 11 : ಮುಂಡರಗಿ, ಹೂವಿನಹಡಗಲಿ, ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ಹೊಸ ರೈಲು ಮಾರ್ಗವನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಕೋರಿದರು.
ಅವರು ನಗರದ ರೈಲ್ವೆ ವಲಯ ಕಚೇರಿಯಲ್ಲಿ ಮಂಗಳವಾರ ನಡೆದ ನೈಋತ್ಯ ರೈಲ್ವೆ ವ್ಯಾಪ್ತಿಯ ಸಂಸದರು ಮತ್ತು ರಾಜ್ಯಸಭೆ ಸದಸ್ಯರ ಸಲಹೆ, ಸೂಚನೆ ಪಡೆಯಲು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ,
ಗದಗ-ಹರಿಹರ ಹೊಸ ರೈಲು ಮಾರ್ಗ, ಯಲವಿಗಿ ನಿಲ್ದಾಣದಲ್ಲಿ ರೈಲುಗಳ ನಿಲುಗಡೆ ಮತ್ತು ಗಜೇಂದ್ರಗಡ-ಬದಾಮಿ-ಯಲಬುರ್ಗಿ ಮಾರ್ಗದಲ್ಲಿನ ಪ್ರಯಾಣಿಕರ ದಟ್ಟಣೆಯ ಸಮೀಕ್ಷೆ ನಡೆಸಬೇಕು ಎಂದರು.
ಬೆಳಗಾವಿ ಸಂಸದ ಸುರೇಶ ಅಂಗಡಿ ಮಾತನಾಡಿ, ಬೆಳಗಾವಿ-ಬೆಂಗಳೂರು ಮಧ್ಯೆ ಇಂಟರ್ ಸಿಟಿ ರೈಲು ಮತ್ತು ಬೆಳಗಾವಿ ಮಾರ್ಗವಾಗಿ ಗರೀಬ್ ರಥ ಎಕ್ಸ್ ಪ್ರೆಸ್ ರೈಲು ಓಡಿಸಬೇಕು ಎಂದರು.
ರಾಮದುರ್ಗ, ಸವದತ್ತಿ ಮಾರ್ಗವಾಗಿ ಲೋಕಾಪುರ-ಧಾರವಾಡ ಮತ್ತು ಬೆಳಗಾವಿ-ಧಾರವಾಡ ಹೊಸ ರೈಲು ಮಾರ್ಗ ರಚನೆಗೆ ಬಜೆಟ್ ನಲ್ಲಿ ಪ್ರಸ್ತಾಪ ಸಲ್ಲಿಸಬೇಕು ಎಂದರು .
ಸಭೆಯಲ್ಲಿ ಪಾಲ್ಗೊಂಡಿದ್ದ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಪಕ ಅಶೋಕ ಗುಪ್ತಾ ಸಂಸದ ಸಲಹೆ, ಸೂಚನೆಗಳನ್ನು ಕೇಂದ್ರಕ್ಕೆ ತಿಳಿಸುವುದಾಗಿ ಹೇಳಿದರು.
ಸಂಸದ ಪ್ರತಾಪ ಸಿಂಹ, ಬಳ್ಳಾರಿ ಸಂಸದ ಶ್ರೀರಾಮುಲು ಸೇರಿದಂತೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಗೋವಾದಿಂದ ಒಟ್ಟು 45 ಸಂಸದರು ಪಾಲ್ಗೊಂಡಿದ್ದರು.
ರಾಜ್ಯಸಭೆ ಸದಸ್ಯರಲ್ಲಿ ಬೆಳಗಾವಿ ಮೈಸೂರು-ಕೊಡಗು, ಬಳ್ಳಾರಿ, ಬಾಗಲಕೋಟೆ, ಹಾವೇರಿ ಸಂಸದರು ಮಾತ್ರ ಪಾಲ್ಗೊಂಡಿದ್ದರು. ಸಂಸದ ಪ್ರಹ್ಲಾದ ಜೋಶಿ ಸೇರಿದಂತೆ 40 ಸಂಸದರು ಸಭೆಯಲ್ಲಿ ಪಾಲ್ಗೊಳ್ಳದೇ ಗೈರು ಹಾಜರಾಗಿದ್ದರು.