ಪುಟ್ಪಾತ್ ಮೇಲಿನ ಗೂಡಂಗಡಿ ತೆರವಿಗೆ ವಿನೂತನ ಪ್ರತಿಭಟನೆ
ಹುಬ್ಬಳ್ಳಿ, ಜುಲೈ 17: ಹುಬ್ಬಳ್ಳಿ-ಧಾರವಾಡ ಮಹಾನಗರದಾದ್ಯಂತ ಪುಟ್ಪಾತ್ ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿರುವ ಗೂಡಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಇಂದು ವಿನೂತನ ಪ್ರತಿಭಟನೆ ನಡೆಯಿತು.
ಗೂಡಂಗಡಿ ತೆರವು ಮಾಡದ ಮಹಾನಗರ ಪಾಲಿಕೆ ವಿರುದ್ಧ ಕರ್ನಾಟಕ ಸಂಗ್ರಾಮ ಸೇನೆಯ ಕಾರ್ಯಕರ್ತರು ತಳ್ಳುವ ಗಾಡಿಯಲ್ಲಿ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ಇಲ್ಲಿನ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಪಾಲಿಕೆ ವಿರುದ್ಧ ಘೋಷಣೆ ಕೂಗಿದ ನೂರಾರು ಕಾರ್ಯಕರ್ತರು ಪಾದಾಚಾರಿಗಳಿಗೆ ಅನಾನುಕೂಲವಾಗಿರುವ ಆಕ್ರಮಿತ ಗೂಡಂಗಡಿಗಳನ್ನು ತೆರವುಗೊಳಿಸುವುದು ಯಾವಾಗ ಎಂದು ಪ್ರಶ್ನಿಸಿದರು.
ರಸ್ತೆ ಪಕ್ಕದಲ್ಲಿ ನಡೆದಾಡಲು ಪಾದಾಚಾರಿಗಳಿಗೆ ಜಾಗವಿಲ್ಲದಂತೆ ಪುಟ್ಪಾತನ್ನು ಆಕ್ರಮಿಸಿಕೊಳ್ಳಲಾಗಿದೆ. ಅದರಲ್ಲೂ ವೃದ್ಧರು, ಮಹಿಳೆಯರು, ಮಕ್ಕಳಿಗೆ ಇದರಿಂದ ದೊಡ್ಡ ಸಮಸ್ಯೆಯಾಗಿದೆ. ಹೀಗಿದ್ದರೂ ಸ್ಥಳೀಯ ಆಡಳಿತ ಕಣ್ಣು ಮುಚ್ಚಿ ಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆಯನ್ನು ಪರಿಹರಿಸುವಂತೆ ಮೆಯರ್ ಡಿ.ಕೆ.ಚೌವ್ಹಾಣ ಅವರಿಗೆ ಇದೇ ಸಂದರ್ಭದಲ್ಲಿ ಮನವಿ ಸಲ್ಲಿಸಿದರು.