ಭೂಕಬಳಿಕೆಗೆ ಗೃಹಸಚಿವ ಪರಮೇಶ್ವರ್ ಬೆಂಬಲ: ಹಿರೇಮಠ್ ಆರೋಪ
ಚಿಕ್ಕಮಗಳೂರಿನ ಮೂಡಿಗೆರೆಯ ಕಂದೂರು ವ್ಯಾಪ್ತಿಗೆ ಸೇರುವ ಸುಮಾರು 15 ಎಕರೆ ಜಮೀನು ಒತ್ತುವರಿಗೆ ಮೋಟಮ್ಮ ಪ್ರಯತ್ನಿಸಿದ್ದರೆಂದು ಆರೋಪ
ಹುಬ್ಬಳ್ಳಿ, ಮಾರ್ಚ್ 8: ಕಂದೂರಿನಲ್ಲಿ ಭೂಮಿ ಕಬಳಿಕೆ ವಿಚಾರವಾಗಿ ಕಾಂಗ್ರೆಸ್ ನಾಯಕಿ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಅಕ್ರಮ ಎಸಗುವಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದರೆಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ್ ಆರೋಪಿಸಿದ್ದಾರೆ.
ಇದಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಅವರೂ ಬೆಂಬಲ ಕೊಟ್ಟಿದ್ದಾರೆ ಎಂದು ಹಿರೇಮಠ್ ಇದೇ ವೇಳೆ ಆರೋಪಿಸಿದರು.
ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪ್ರಕರಣಕ್ಕೆ ಸಂಬಂಧಪಟ್ಟ ದಾಖಲೆಗಳನ್ನೂ ಬಿಡುಗಡೆಗೊಳಿಸಿದರು.[ಎಸ್ಆರ್ ಹಿರೇಮಠ ಯಾರು? ಸಂಕ್ಷಿಪ್ತ ಪರಿಚಯ]
ತಹಶೀಲ್ದಾರ್ ಮೇಲೆ ಒತ್ತಡ
ಹಿರೇಮಠ್ ಅವರ ಆರೋಪಗಳ ಪ್ರಕಾರ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಂದೂರಿನ ಸರ್ವೇ ನಂಬರ್ 156ರಲ್ಲಿ ಬರುವ 15 ಎಕರೆ ಸರ್ಕಾರಿ ಜಮೀನನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದ ಮೋಟಮ್ಮ, ಅಲ್ಲಿನ ತಹಶೀಲ್ದಾರ್ ನಾಗೇಶ್ ಅವರಿಗೆ ತಮಗೆ ಈ ನಿಟ್ಟಿನಲ್ಲಿ ಸಹಕಾರ ನೀಡುವಂತೆ ಒತ್ತಾಯ ಹೇರಿದ್ದರು.
ಮುನಿದ ಮೋಟಮ್ಮ
ಮೋಟಮ್ಮ ಅವರ ಒತ್ತಡಕ್ಕೆ ತಹಶೀಲ್ದಾರ್ ನಾಗೇಶ್ ಸ್ಪಂದಿಸಿಲ್ಲ. ಪಟ್ಟುಬಿಡದ ಮೋಟಮ್ಮ ನಾಗೇಶ್ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು. ಇದಕ್ಕೂ ಕಿವಿಗೊಡದೇ ಇದ್ದಾಗ, ನಾಗೇಶ್ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದಾರೆಂದು ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ದೂರು ನೀಡಿ, ನಾಗೇಶ್ ಅವರನ್ನು ವರ್ಗಾವಣೆ ಮಾಡಬೇಕೆಂದು ಮನವಿ ಮಾಡಿದ್ದರು.
ವರ್ಗಾವಣೆಗೆ ಪರಮೇಶ್ವರ್ ಗೆ ಮನವಿ
ಕಂದಾಯ ಇಲಾಖೆಗೆ ಪತ್ರವನ್ನೂ ಬರೆದಿದ್ದ ಪರಮೇಶ್ವರ್, ತಹಸೀಲ್ದಾರ್ ನಾಗೇಶ್ ಅವರನ್ನು ಬೇರೆಡೆ ವರ್ಗಾವಣೆ ಮಾಡುವಂತ ಮನವಿ ಮಾಡಿದ್ದರು. ಈ ರೀತಿಯಲ್ಲಿ ಮೋಟಮ್ಮ ಅವರ ಅಕ್ರಮಕ್ಕೆ ಪರಮೇಶ್ವರ್ ಕೂಡ ಕೈಜೋಡಿಸಿದ್ದರು ಎಂದು ಹಿರೇಮಠ್ ಆಪಾದಿಸಿದ್ದಾರೆ.
ಕಂದಾಯ ಇಲಾಖೆಗೆ ಮನವಿ
ಮೋಟಮ್ಮ ಮಾತಿಗೆ ಸ್ಪಂದಿಸಿರುವ ಜಿ. ಪರಮೇಶ್ವರ್, ಕಂದಾಯ ಇಲಾಖೆಗೆ ನಾಗೇಶ್ ಅವರನ್ನು ವರ್ಗಾವಣೆ ಮಾಡುವಂತೆ ಮನವಿ ಮಾಡಿದ್ದರು ಎಂದು ಹಿರೇಮಠ್ ಹೇಳಿದರು.
ನಾಗೇಶ್ ವರ್ಗಾವಣೆ ರದ್ದು
ಈ ಪ್ರಕರಣದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ಮಧ್ಯ ಪ್ರವೇಶಿಸಿದ್ದರಿಂದಾಗಿ ನಾಗೇಶ್ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ಹಿಂಪಡೆಯುವಂತಾಯಿತು ಎಂದು ಹಿರೇಮಠ್ ಆರೋಪಿಸಿದ್ದಾರೆ.