ಉತ್ತರ ಕರ್ನಾಟಕದಲ್ಲಿ ನವಜಾತ ಶಿಶುಗಳಿಗೆ ಉಷ್ಣಾಂಶದ ಬಿಸಿ
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿದಿನ ಉಷ್ಣಾಂಶ 41 ರಿಂದ 43 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇದೇ ವೇಳೆಗೆ ನವಜಾತ ಶಿಶುಗಳು ವೈದ್ಯರ ಬಳಿ ಬರುತ್ತಿದ್ದು ಹೆಚ್ಚಿನ ಮಕ್ಕಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿವೆ.
ಹುಬ್ಬಳ್ಳಿ, ಏಪ್ರಿಲ್ 14: ಉತ್ತರ ಕರ್ನಾಟಕದಲ್ಲಿ ಉಷ್ಣಾಂಶ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಇದು ಅಲ್ಲಿನ ನಿವಾಸಿಗಳಿಗೆ ಬಿಸಿ ಮುಟ್ಟಿಸಿದ್ದರೆ, ನವಜಾತ ಶಿಶುಗಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುವಂತಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರತಿದಿನ ಉಷ್ಣಾಂಶ 41 ರಿಂದ 43 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಇದೇ ವೇಳೆಗೆ ನವಜಾತ ಶಿಶುಗಳು ವೈದ್ಯರ ಬಳಿ ಬರುತ್ತಿದ್ದು ಹೆಚ್ಚಿನ ಮಕ್ಕಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿವೆ.[ಹುಬ್ಬಳ್ಳಿಯ ಕಟುಗರ ಓಣಿಯಲ್ಲಿ 2 ಚೀಲದಲ್ಲಿ ಮನುಷ್ಯರ ತಲೆಬುರುಡೆ ಪತ್ತೆ]
ಮುಖ್ಯವಾಗಿ ಉತ್ತರ ಕರ್ನಾಟಕದ ಬಳ್ಳಾರಿ ಮತ್ತು ರಾಯಚೂರಿನಲ್ಲಿ ಉಷ್ಣಾಂಶ 43 ಡಿಗ್ರಿ ದಾಖಲಾಗುತ್ತಿದೆ. ಇನ್ನು ಕಲಬುರ್ಗಿಯಲ್ಲಿ 41 ರಿಂದ 42 ಡಿಗ್ರಿಯ ನಡುವೆ ತಾಪಮಾನ ಇದೆ. ಇದರಿಂದ ಈಗ ತಾನೆ ಹುಟ್ಟುವ ಮಕ್ಕಳ ದೇಹದಲ್ಲಿ ನೀರಿನಂಶದ ಕೊರತೆ ಹೆಚ್ಚಾಗಿ ಕಾಣಿಸಿಕೊಂಡಿದೆ.
ಗುಲ್ಬರ್ಗ (ಕಲಬುರ್ಗಿ) ವೈದ್ಯ ವಿಜ್ಞಾನ ಸಂಸ್ಥೆಯ ದಾಖಲೆಗಳ ಪ್ರಕಾರ ನವಜಾತ ಶಿಶುಗಳ ನಿರ್ಜಲೀಕರಣ ಸಮಸ್ಯೆ ಶೇಕಡಾ 30ರಷ್ಟು ಹೆಚ್ಚಾಗಿದೆ. ಇನ್ನು ಬಳ್ಳಾರಿಯಲ್ಲಿರುವ ವಿಮ್ಸ್ ಆಸ್ಪತ್ರೆ ತುಂಬಿ ತುಳುಕುತ್ತಿದ್ದು ಹೆಚ್ಚಿನ ಮಕ್ಕಳು ನಿರ್ಜಲೀಕರಣ ಸಮಸ್ಯೆಯಿಂದ ಬಳಲುತ್ತಿದ್ದಾರೆ.[ತಿಮ್ಮಾಪುರ ಕ್ರಾಸ್ ನಲ್ಲಿ ಟ್ಯಾಂಕರ್ ಗೆ ಡಿಕ್ಕಿಯಾಗಿ ಪಲ್ಟಿಯಾದ ಬಸ್]
ನಿರ್ಜಲೀಕರಣ ಸಮಸ್ಯೆಯಿಂದ ಉತ್ತರ ಕರ್ನಾಟಕದಲ್ಲಿ ದಿನಂಪ್ರತಿ ಅಂದಾಜು 50 ಮಕ್ಕಳು ಹೊರ ರೋಗಿಗಳಾಗಿ ದಾಖಲಾಗುತ್ತಿದ್ದಾರೆ. ವಿಮ್ಸ್ ನಲ್ಲಿ ಈಗಾಲೇ 80 ಮಕ್ಕಳು ದಾಖಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಬಳ್ಳಾರಿಯಲ್ಲಿರುವ ಇತರ ಆಸ್ಪತ್ರೆಗಳಲ್ಲಿ ಕನಿಷ್ಠ 200 ಇಂತಹ 200 ಪ್ರಕರಣಗಳು ದಾಖಲಾಗಿವೆ. ಕಲಬುರ್ಗಿಯಲ್ಲಿ 200 ನವಜಾತ ಶಿಶುಗಳು ಆಸ್ಪತ್ರೆಗೆ ದಾಖಲಾಗಿದ್ದರೆ ಇದರಲ್ಲಿ 60 ಮಕ್ಕಳಿಗೆ ನಿರ್ಜಲೀಕರಣ ಸಮಸ್ಯೆ ಇದೆ.
ಕೆಲವು ಮಕ್ಕಳ ಸಮಸ್ಯೆ ಯಾವ ಮಟ್ಟಕ್ಕೆ ಇದೆ ಎಂದರೆ ಒಂದೊಮ್ಮೆ ರಾತ್ರಿ ಹೊತ್ತು ಚಿಕಿತ್ಸೆ ನೀಡದೇ ಇದ್ದಲ್ಲಿ ಬಹುಅಂಗಾಂಗ ವೈಫಲ್ಯ ಸಂಭವಿಸುವ ಅಪಾಯ ಇದೆ.
ಇನ್ನು ಬಡ ಕುಟುಂಬಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೆಂಚಿನ ಮನೆ ಮತ್ತು ಸಿಮೆಂಟು ಶೀಟಿನ ಮನೆಗಳಲ್ಲಿ ಬಡ ಕುಟುಂಬಗಳು ಹೆಚ್ಚಾಗಿ ವಾಸಿಸುತ್ತಿದ್ದು ಮಕ್ಕಳ ದೇಹದಲ್ಲಿನ ನೀರಿನ ಅಂಶ ಕುಸಿತವಾಗುತ್ತಿದೆ.
ಸದ್ಯ ಸರಕಾರಿ ಆಸ್ಪತ್ರೆಗಳು ದೊಡ್ಡ ಪ್ರಮಾಣದಲ್ಲಿ ನವಜಾತ ಶಿಶುಗಳಿಗೆ ಚಿಕಿತ್ಸೆ ನೀಡುತ್ತಿವೆ. ಜತೆಗೆ ಮಕ್ಕಳಿಗೆ ನಿರಂತರ ಎದೆಹಾಲು ಕುಡಿಸುವಂತೆ ತಾಯಂದಿರಿಗೆ ಜಾಗೃತಿ ಮೂಡಿಸುವಲ್ಲಿಯೂ ನಿರತವಾಗಿವೆ.