ಹುಬ್ಬಳ್ಳಿಯಲ್ಲಿ ಮರು ಉಸಿರು ಪಡೆದ ನವಜಾತು ಶಿಶು
ಹುಬ್ಬಳ್ಳಿ, ಜನವರಿ 20: ಧಾರವಾಡದ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಆಸ್ಪತ್ರೆಯಲ್ಲಿ ಮೃತವಾಗಿದೆ ಎಂದು ಹೇಳಲಾದ ನವಜಾತು ಶಿಶುವೊಂದು ಅಂತ್ಯ ಸಂಸ್ಕಾರದ ವೇಳೆ ಉಸಿರಾಡಿ ಬದುಕುಳಿದು ಪಾಲಕರಿಗೆ ಆಶ್ಚರ್ಯ ಮೂಡಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.
ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ನೇತ್ರಾವತಿ ಜಾಲಗಾರ ಎಂಬುವವರು ನಗರದ ಕಿಮ್ಸ್ ನಲ್ಲಿ ಜ.12 ಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಜನ್ಮದಾರಂಭದಿಂದಲೇ ಶಿಶು ಉಸಿರಾಟದ ತೊಂದರೆ ಅನುಭವಿಸುತ್ತಿತ್ತು. ಕಿಮ್ಸ್ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡದ ಎಸ್ಡಿಎಂ ಆಸ್ಪತ್ರೆಗೆ ಕೊಂಡೊಯ್ಯಲು ಪಾಲಕರಿಗೆ ಸೂಚಿಸಿದ್ದರು. ಅಲ್ಲಿಯೂ ಶಿಶುವಿಗೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.[ಮದ್ಯದ ಅಮಲಿನಲ್ಲಿ ಹೆತ್ತಕೂಸನ್ನೇ ಬೆಂಕಿಗೆಸೆದ ತಾಯಿ!]
ಶಿಶುವಿನ ಉಸಿರಾಟ ನಿಂತು ಮಗು ಮೃತಪಟ್ಟಿದೆ ಎಂದು ಖಚಿತಪಡಿಸಿದ ಆಸ್ಪತ್ರೆ ವೈದ್ಯರು ಅಂತ್ಯಸಂಸ್ಕಾರ ನೆರವೇರಿಸಲು ಪಾಲಕರಿಗೆ ಸೂಚಿಸಿದ್ದರು. ಅಂತೆಯೇ ಮೃತ ಶಿಶುವನ್ನು ದೇವಿಕೊಪ್ಪ ಗ್ರಾಮಕ್ಕೆ ಕೊಂಡೊಯ್ದು ಅಲ್ಲಿ ಅಂತ್ಯಸಂಸ್ಕಾರ ಮಾಡುವಾಗ ಮಗು ಮತ್ತೆ ಉಸಿರಾಟ ಆರಂಭಿಸಿದೆ. ತಕ್ಷಣ ಶಿಶುವಿನ ಪಾಲಕರು ಗಮನಿಸಿದಾಗ ಶಿಶು ಕಣ್ಣು ಬಿಟ್ಟು ಮಿಸುಕಾಡಲಾರಂಭಿಸಿದೆ.
ಇದರಿಂದ ಆಶ್ಚರ್ಯಗೊಂಡ ಪಾಲಕರು ಕೂಡಲೇ ಶಿಶುವನ್ನು ನಗರದ ಕಿಮ್ಸ್ ಆಸ್ಪತ್ರೆಗೆ ತಂದಿದ್ದಾರೆ. ತಕ್ಷಣವೇ ಮಗುವನ್ನು ಐಸಿಯು ಘಟಕದಲ್ಲಿ ಇಟ್ಟು ಚಿಕಿತ್ಸೆ ನೀಢಲಾಗುತ್ತಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ದತ್ತಾತ್ರೇಯ ಬಂಟ್ ಒನ್ ಇಂಡಿಯಾಕ್ಕೆ ತಿಳಿಸಿದರು.