ಹುಬ್ಬಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ, ಹೆಸ್ಕಾಂ ವಿರುದ್ಧ ಆಕ್ರೋಶ
ಹುಬ್ಬಳ್ಳಿ, ನವೆಂಬರ್, 26 : ನಗರದಲ್ಲಿ ಶನಿವಾರ ಬೆಳ್ಳಗ್ಗೆಯಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯದಿಂದಾಗಿ ಎಟಿಎಂ, ಬ್ಯಾಂಕ್ ಗಳು ಬಂದ್ ಆಗಿದ್ದರಿಂದ ನಾಗರಿಕರು ಪರದಾಡವಂತಾಯಿತು.
ಕರೆಂಟ್ ಇಲ್ಲದ್ದರಿಂದ ನಗರದ ಹಲವಾರು ಎಟಿಎಂ ಗಳು ಬಾಗಿಲು ಮುಚ್ಚಿದ್ದವು. ಮೊದಲೇ ದುಡ್ಡಿನ ಕೊರತೆ ಇರುವುದರಿಂದ ಇಂಥಹದರಲ್ಲಿ ವಿದ್ಯುತ್ ಕಡಿತಗೊಳಿಸಿದ್ದಕ್ಕೆ ಹೆಸ್ಕಾಂ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ನಗರದ ಕಾರವಾರ ರಸ್ತೆಯಲ್ಲಿ ಶರಾವತಿ ವಿದ್ಯುತ್ ವಿತರಣಾ ಕೇಂದ್ರ, ಆನಂದನಗರ, ಹಾಗೂ ಅಕ್ಷಯ ಕಾಲೋನಿಯ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನವೀಕರಣ ಹಾಗೂ ಆಧುನಿಕ ಕಾಮಗಾರಿ ನಿಮಿತ್ತ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಿರುವುದಿಲ್ಲ ಎಂದು ಹೆಸ್ಕಾಂ ಪ್ರಕಟಣೆಯನ್ನು ಮೊದಲೇ ನೀಡಿತ್ತು.
ಇಂಥಹ ದುರಸ್ತಿ ಕಾರ್ಯಗಳನ್ನು ರವಿವಾರ ಕೈಗೆತ್ತಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ದುರಸ್ತಿ ಕಾರ್ಯವನ್ನು ಶನಿವಾರ ಕೈಗೆತ್ತಿಕೊಂಡಿದ್ದಕ್ಕೆ ಮತಷ್ಟು ಜನರ ಆಕ್ರೊಶಕ್ಕೆ ಕಾರಣವಾಯಿತು.
ಇನ್ನು ನಗರದ ಗೋಕುಲ ರಸ್ತೆಯ ಕೈಗಾರಿಕಾ ವಸಾಹತು ಪ್ರದೇಶವಂತೂ ಸಂಪೂರ್ಣ ಸ್ಥಭ್ದಗೊಂಡಿತ್ತು. ಕೆಲವೊಂದು ಅಂಗಡಿಕಾರರು ಮೊದಲೇ ವ್ಯಾಪಾರವಿಲ್ಲ, ಸುಮ್ಮನೆ ಯಾಕೆ ಜನರೇಟರ್ ಹಚ್ಚಿಕೊಂಡು ಕುಳಿತುಕೊಳ್ಳಬೇಕು ಎಂದು ಅಂಗಡಿಗಳನ್ನು ಬಂದ್ ಮಾಡಿದ್ದರು.
ಕೆಲವೊಂದು ಪೆಟ್ರೋಲ್ ಬಂಕ್ ಗಳು ಕೂಡ ಕರೆಂಟ್ ಇಲ್ಲ ಎಂದು ಬೋರ್ಡ್ ಹಾಕಿದ್ದವು. ಒಟ್ಟಿನಲ್ಲಿ ಶನಿವಾರ ನಗರದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದರಿಂದ ವ್ಯಾಪಾರಸ್ಥರು, ಸಾರ್ವಜನಿಕರು ಪರದಾಡುವಂತಾಯಿತು.