ಕೇಂದ್ರ ಸರಕಾರದಿಂದ ರಾಜಕೀಯ ಭಯೋತ್ಪಾದನೆ: ಕುಮಾರಸ್ವಾಮಿ
ಹುಬ್ಬಳ್ಳಿ, ಮೇ 29: ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ರಾಜಕೀಯ ಭಯೋತ್ಪಾದನೆ ಮಾಡುತ್ತಿದೆ ಎನ್ನುವ ಮೂಲಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸೋಮವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿಪಕ್ಷ ನಾಯಕರ ಮೇಲೆ ಆದಾಯ ತೆರಿಗೆ ದಾಳಿ ನಡೆಸುವ ಮೂಲಕ ಬೆದರಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಳಗಾವಿ ವಿಭಾಗದ ಬೂತ್ ಸಮಿತಿ ಸಭೆ ನಡೆಸುವುದಕ್ಕೂ ಮುಂಚೆ ಪತ್ರಿಕಾಗೋಷ್ಠಿ ನಡೆಸಿದ ಅವರು ಗೋಹತ್ಯೆ ನಿಷೇಧ ಕಾನೂನಿನ ಬಗ್ಗೆ ಕೂಡ ಮಾತನಾಡಿದರು. ಸರಕಾರವು ಕಾನೂನು ಜಾರಿಗೆ ತರುವ ಮೊದಲು ವಯಸ್ಸಾದ ಗೋವುಗಳನ್ನು ಸಲಹುವುದಕ್ಕಾಗಿಯೇ ಗೋಶಾಲೆಗಳನ್ನು ತೆರೆಯಬೇಕು ಹಾಗೂ ಇದಕ್ಕಾಗಿ ಹಣವನ್ನು ಮೀಸಲಿಡಬೇಕು ಎಂದು ಒತ್ತಾಯ ಮಾಡಿದರು.[ನನ್ನಿಂದ ತಪ್ಪಾಗಿದೆ ಎಂದು ಸಾಬೀತಾದರೆ ಎಚ್ ಡಿಕೆ ಮನೆಗೆ ಹೋಗಿ ಕ್ಷಮೆ ಕೇಳ್ತೀನಿ]
ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ವಿರುದ್ಧ ಕೂಡ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಾಲ ಮನ್ನಾ ಮಾಡುವುದಕ್ಕೆ ಒಪ್ಪದ ಯಡಿಯೂರಪ್ಪ, ಈಗ ಹೋದ ಕಡೆಯಲ್ಲೆಲ್ಲಾ ಸಾಲ ಮನ್ನಾ ಮಾಡುವ ಭರವಸೆ ನೀಡುತ್ತಿರುವುದು ತಮಾಷೆಯಾಗಿದೆ. ಇನ್ನು ನಾನು ಮುಖ್ಯಮಂತ್ರಿಯಾಗಿದ್ದಾಗ ಸಾಲ ಮನ್ನಾ ಮಾಡುವಾಗಲೂ ಯಡಿಯೂರಪ್ಪ ಅಡ್ಡಪಡಿಸಿದ್ದರು ಎಂದರು.