ಉತ್ತರ ಕರ್ನಾಟಕದಿಂದ ಚುನಾವಣೆಗೆ ಸ್ಪರ್ಧಿಸ್ತೀನಿ: ಎಚ್ ಡಿಕೆ
ಹುಬ್ಬಳ್ಳಿ, ಸೆಪ್ಟೆಂಬರ್ 9: ಈ ಭಾಗದ ಜನರು ನನ್ನನ್ನು ಇಲ್ಲಿಂದಲೇ ಆರಿಸಿ ತರಬೇಕು ಎಂದು ಇಷ್ಟಪಟ್ಟರೆ ಉತ್ತರ ಕರ್ನಾಟಕದಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್. ಡಿ.ಕುಮಾರಸ್ವಾಮಿ ಅವರು ಹೇಳಿದರು.
ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಜನರು ನನ್ನ ಮೇಲೆ ಬಹಳ ನಂಬಿಕೆ, ವಿಶ್ವಾಸವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಕರ್ನಾಟಕದಿಂದಲೇ ಸ್ಪರ್ಧೆ ಮಾಡಬೇಕು ಎಂದುಕೊಂಡಿದ್ದೇನೆ ಎಂದರು.[ಹುಬ್ಬಳ್ಳಿಯಲ್ಲಿ ಕುಮಾರಸ್ವಾಮಿ 2ನೇ ಮನೆ ಮಾಡ್ತಿರೋದು ಯಾಕೆ?]
ಈ ಭಾಗದ ಜನರ ಕಷ್ಟ-ಸುಖಗಳಿಗೆ ನಾನು ಸಾಕಷ್ಟು ಬಾರಿ ಸ್ಪಂದಿಸಿದ್ದೇನೆ, ಜನರ ವಿಶ್ವಾಸ ನನ್ನ ಮೇಲೆ ಹೆಚ್ಚಿದೆ. ಆದ್ದರಿಂದ ಹುಬ್ಬಳ್ಳಿಯಲ್ಲಿ ಮನೆ ಮಾಡುತ್ತಿದ್ದೇನೆ. ಇಲ್ಲಿದ್ದರೆ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಅನುಕೂಲವಾಗುತ್ತದೆ. ಜೊತೆಗೆ ಇಬ್ಬರು ಸಹಾಯಕರನ್ನು ನೇಮಿಸಿಕೊಳ್ಳುವ ಉದ್ದೇಶವಿಟ್ಟುಕೊಂಡಿದ್ದೇನೆ. ತಿಂಗಳಿನಲ್ಲಿ 10 ದಿನ ಹುಬ್ಬಳ್ಳಿಯಲ್ಲಿ ವಾಸ ಮಾಡುತ್ತೇನೆ ಎಂದು ಅವರು ಹೇಳಿದರು.