ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಸಂಭ್ರಮ
ಹುಬ್ಬಳ್ಳಿ, ಜುಲೈ 25: ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ನಾಗರಪಂಚಮಿ ಆಚರಣೆಯ ಮೊದಲ ದಿನವಾದ ಮಂಗಳವಾರ ರೊಟ್ಟಿ ಪಂಚಮಿಯನ್ನು ಭಕ್ತಾದಿಗಳು ಭಕ್ತಿ ಶ್ರದ್ಧೆಯಿಂದ ಆಚರಿಸಿದರು.
ನಾಗನನ್ನು ಪೂಜಿಸುವುದು ಮೂಢನಂಬಿಕೆಯಾಗಲು ಸಾಧ್ಯವೇ?
ರೊಟ್ಟಿ ಪಂಚಮಿ, ನಾಗರ ಪಂಚಮಿ ಹಾಗೂ ನಾಗರ ಚೌತಿ (ಕರಿಕಟಂಬ್ಲಿ) ಎಂದು ಮೂರು ದಿನ ಆಚರಿಸುವ ನಾಗರ ಪಂಚಮಿ ಹಬ್ಬದಲ್ಲಿ ಪ್ರತಿಯೊಂದು ದಿನವೂ ವಿಶೇಷತೆಯಿಂದ ಕೂಡಿರುತ್ತದೆ.
ಈ ಪೈಕಿ ರೊಟ್ಟಿ ಪಂಚಮಿ ದಿನ ಮಹಿಳೆಯರು ಎಳ್ಳು ಹಚ್ಚಿ ತಯಾರಿಸಿದ ರೊಟ್ಟಿ, ಚಪಾತಿ, ಕಡ್ಲೆಕಾಳು ಪಲ್ಯ, ಬದನೆಕಾಯಿ ಎಣ್ಣೆಗಾಯಿ ಪಲ್ಯ, ತಂಬಿಟ್ಟು, ಶೇಂಗಾ, ಕಡ್ಲೆ ಚಟ್ನಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು, ಬಂಧು ಬಳಗ ಸ್ನೇಹಿತರು, ಮನೆಯವರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಾರೆ.
ಸರ್ಪದೋಷ ಪರಿಹಾರ ಪೂಜೆ ಯಾವ ದೇವಾಲಯಗಳಲ್ಲಿ?
ಬುಧವಾರ ನಾಗರ ಪಂಚಮಿ. ಮಹಿಳೆಯರು, ಮಕ್ಕಳು ಸೇರಿ ಹೊಸ ಬಟ್ಟೆ ಧರಿಸಿ ಬೆಲ್ಲ, ಕಡ್ಲೆಕಾಳು, ಕೊಕ್ಕಬತ್ತಿ (ಹತ್ತಿ ನೂಲಿನ ಬತ್ತಿ), ಕೋಡಬತ್ತಿ (ದಾರದಿಂದ ತಯಾರಿಸಿದ್ದು) ಮತ್ತು ತುಪ್ಪದೊಂದಿಗೆ ಕಲ್ಲಿನ ನಾಗನ ಮೂರ್ತಿಗಳಿಗೆ ಹಾಲು ಎರೆಯುತ್ತಾರೆ. ಇನ್ನೂ ಕೆಲವರು ನಾಗರ ಹುತ್ತಗಳಿಗೆ ಪೂಜೆ ಸಲ್ಲಿಸಿದರೆ, ದೇವಸ್ಥಾನಗಳಲ್ಲಿನ ನಾಗರ ಮೂರ್ತಿಗಳಿಗೂ ಹಾಲೆರೆಯುತ್ತಾರೆ.
ಗುರುವಾರ ಹುತ್ತದ ಮಣ್ಣಿನಿಂದ ತಯಾರಿಸಿದ ನಾಗರ ಮೂರ್ತಿಗಳಿಗೆ ಹಾಲೆರೆದು ಭಕ್ತಿ ಮೆರೆಯುವುದು ವಿಶೇಷ. ವಿವಿಧ ಜಿಲ್ಲೆಗಳ ದೇವಸ್ಥಾನಗಳಲ್ಲಿ ನಾಗಪೂಜೆಗೆ ಭಕ್ತಾದಿಗಳ ದಂಡು ಬೀಡುಬಿಟ್ಟಿರುತ್ತದೆ. ನಂತರ ಮನೆಯಲ್ಲಿ ಶೇಂಗಾ, ಎಳ್ಳು, ರವೆ, ಅರಳು ಹಿಟ್ಟು, ಧಾನ್ಯ, ಅರಳು ಉಂಡೆಗಳನ್ನು ಸಿದ್ಧಪಡಿಸಿ, ಪಂಚಮಿ ಹಬ್ಬದ ಸಂತಸ ಹಂಚಿಕೊಳ್ಳುತ್ತಾರೆ.
ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳು ದೊಡ್ಡ ದೊಡ್ಡ ಮರಗಳಿಗೆ ಹಗ್ಗಗಳಿಂದ ಜೋಕಾಲಿ ಕಟ್ಟಿ ಜೀಕುವ ಮೂಲಕ ಆಟವಾಡುತ್ತಾರೆ.
ಧಾರವಾಡ, ಗದಗ, ಹಾವೇರಿ, ಬಾಗಲಕೋಟ, ವಿಜಯಪುರ, ಬೆಳಗಾವಿ ಸೇರಿದಂತೆ ವಿವಿಧೆಡೆ ವಿವಿಧ ಆಟಗಳಲ್ಲಿ ಗ್ರಾಮೀಣ ಜನತೆ ಪಾಲ್ಗೊಳ್ಳುತ್ತಾರೆ. ಲಿಂಬೆಹಣ್ಣು ಎಸೆಯುವುದು, ಕಂಬ ಹತ್ತುವುದು, ತೆಂಗಿನ ಕಾಯಿ ಕುಟ್ಟುವುದು, ಕಾಯಿ ಒಡೆಯುವುದು, ಕಣ್ಣಮುಚ್ಚಾಲೆ ಸೇರಿದಂತೆ ಹಲವು ಆಟಗಳನ್ನು ಆಡುತ್ತಾರೆ.
ಶ್ರಾವಣ ಮಾಸದ ಆರಂಭದೊಂದಿಗೆ ತರಕಾರಿ ಹಾಗೂ ದಿನಸಿ ವಸ್ತುಗಳು, ಹೂವು ಬೆಲೆ ಏರಿಕೆಯೂ ಆಗಿದೆ. ಬೆಲೆಯೇರಿಕೆ ಬಿಸಿ ನಾಗರ ಪಂಚಮಿ ಹಬ್ಬಕ್ಕೆ ತಟ್ಟಿದೆ.