ಹೊಸ ನೋಟುಗಳಿಲ್ಲದೆ ಎಟಿಎಂಗಳಿಗೆ ಬೀಗ, ಹುಬ್ಬಳ್ಳಿಯಲ್ಲೂ ಪರದಾಟ
ಹೊಸ ನೋಟುಗಳನ್ನು ಶುಕ್ರವಾರದಿಂದ ಎಟಿಎಂ ನಿಂದ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿತ್ತು, ಆದರೆ ಹುಬ್ಬಳ್ಳಿ ನಗರದ ಎಟಿಎಂಗಳಲ್ಲಿ ಹೊಸ ನೋಟುಗಳಿಲ್ಲದೆ ಎಟಿಎಂಗಳಿಗೆ ಬೀಗ ಹಾಕಲಾಗಿದೆ.ಇದರಿಂದ ಜನ ಪರದಾಡುವಂತಾಗಿದೆ.
ಹುಬ್ಬಳ್ಳಿ, ನವೆಂಬರ್. 11: ಹೊಸ ನೋಟುಗಳನ್ನು ಶುಕ್ರವಾರದಿಂದ ಎಟಿಎಂನಿಂದ ಪಡೆದುಕೊಳ್ಳಬಹುದು ಎಂದು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿತ್ತು, ಆದರೆ ಇಂದು ಯಾವುದೇ ಎಟಿಎಂಗಳಲ್ಲೂ ಹೊಸ ನೋಟುಗಳು ಲಭ್ಯವಾಗಲಿಲ್ಲ. ಕೇವಲ ಹುಬ್ಬಳ್ಳಿ ಮಾತ್ರವಲ್ಲದೆ ದೇಶದೆಲ್ಲೆಡೆ ಇದೇ ಪರಿಸ್ಥಿತಿ ಇದೆ. ಇದರಿಂದ ಖರ್ಚಿಗೆ ಹಣವಿಲ್ಲದೆ ಜನರು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
ಬಹುತೇಕ ಖಾಸಗಿ ಮತ್ತು ಸರಕಾರಿ ಎಟಿಎಂಗಳಿಗೆ ಬೀಗ ಹಾಕಿ ಮುಚ್ಚಲಾಗಿತ್ತು. ಹಾಗೂ ಎಟಿಎಂಗಳ ಮುಂದೆ ಮಶೀನ್ ಚಾಲನೆಯಲ್ಲಿಲ್ಲ ಎಂದು ಬೋರ್ಡ್ ಹಾಕಲಾಗಿದೆ. ಕೆಲವೆಡೆ ಬ್ಯಾಂಕ್ ಗಳಲ್ಲಿ ಜನರು ಹೊಸ ನೋಟುಗಳನ್ನು ತಮ್ಮ ಹಳೆಯ ನೋಟುಗಳೊಂದಿಗೆ ಬದಲಾಯಿಸಿಕೊಂಡರು. [ಹೊಸ ನೋಟ್ ಬದಲಾವಣೆಗೆ ಎಡತಾಕಿದ ಹುಬ್ಬಳ್ಳಿ ಮಂದಿ]
ಕೆಲವು ಪೆಟ್ರೋಲ್ ಪಂಪ್ ಗಳಲ್ಲಿ ಹೊಸ ನೋಟುಗಳನ್ನು ತೆಗೆದುಕೊಳ್ಳಲಿಲ್ಲ. ಕೇಳಿದರೆ ಚಿಲ್ಲರೆ ಇಲ್ಲ ಎಂದು ಹೇಳಿ ದಬಾಯಿಸಿ ಕಳುಹಿಸುತ್ತಿದ್ದರು. ಶಾಲೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಆಟೋ ಹಾಗೂ ಟಂಟಂ ವಾಹನಗಳ ಚಾಲಕರು ಪೆಟ್ರೋಲ್ ಮತ್ತು ಗ್ಯಾಸ್ ಹಾಕಿಸಿಕೊಳ್ಳಲು ಚಿಲ್ಲರೆ ಕೊಡಲು ಹೆಣಗಾಡುತ್ತಿದ್ದರು. [500, 1000 ನೋಟು ಬದಲಾವಣೆಗೆ ಹೊರಟ್ರಾ, ಈ ಅಂಶ ಗಮನಿಸಿ]
ಇನ್ನು ಕೆಲವರು ಪೆಟ್ರೋಲ್ ಬಂಕ್ ನವರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹತ್ತಿರದ ಪಾನ್ ಶಾಪ್ ಗಳಲ್ಲಿ ಜನರಿಗೆ ಕಮೀಷನ್ ಆಧಾರದ ಮೇಲೆ 500, 1000 ರೂ. ನೋಟಿಗೆ ಚಿಲ್ಲರೆ ಕೊಡುತ್ತಿದ್ದರು.
500 ಕೊಟ್ಟರೆ 350, 250 ವಾಪಸ್ ಕೊಡುತ್ತಿದ್ದರು. ಜನ ಬ್ಯಾಂಕಿಗೆ ಹೋಗುವ ಬದಲು ಇಂತಹ ಕಮೀಷನ್ ದಂಧೆ ಮಾಡುತ್ತಿದ್ದವರ ಬಳಿ ಚಿಲ್ಲರೆ ತೆಗೆದುಕೊಂಡು ಹೋಗುತ್ತಿರುವುದು ನಗರದಲ್ಲಿ ಸಾಮಾನ್ಯ ದೃಶ್ಯವಾಗಿದೆ.
ವದಂತಿ: ಹಳೇಹುಬ್ಬಳ್ಳಿ ಭಾಗದಲ್ಲಿ 500 ಮತ್ತು 1000 ರೂ . ನೋಟುಗಳನ್ನು ಚೀಲದಲ್ಲಿ ಯಾರೋ ರಾತ್ರೋ ರಾತ್ರಿ ಬಿಸಾಕಿ ಹೋಗುದ್ದಾರೆ. ಜನರು ತಮಗೆಷ್ಟು ಬೇಕೋ ಅಷ್ಟು ನೋಟುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂಬ ವದಂತಿ ನಗರದಲ್ಲಿ ಹಬ್ಬಿದೆ.
ವದಂತಿಗೆ ಕಾರಣ: ಕೆಲವೇ ಕೆಲವು ದಿನಗಳ ಹಿಂದೆ ನಗರದ ಸಿದ್ಧಾರೂಢಮಠದ ಹತ್ತಿರ ಎಟಿಎಂ ನಲ್ಲಿದ್ದ 18 ಲಕ್ಷ ರುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು. ಆ ಹಳೆ ದುಡ್ಡನ್ನು ಬಿಸಾಡಿರಬಹುದು ಎಂದು ಈ ವದಂತಿಗೆ ಕಾರಣವಾಗಿದೆ.