ಮೊದಲ ನೀರು, ನಂತ್ರ ಧ್ವಜ – ಮಹಾದಾಯಿ ಹೋರಾಟಗಾರರ ಒಕ್ಕೊರಲ ಧ್ವನಿ
ಹುಬ್ಬಳ್ಳಿ, ಜುಲೈ 20: 'ನಮಗ ಯಾವ ಧ್ವಜದಿಂದಾನೂ ಕುಡ್ಯಾಕ ನೀರು ಬರೋದಿಲ್ಲ. ಬ್ಯಾಸಿಗ್ಯಾಗ ನೀರ-ಮೇವು ಇಲ್ಲದಕ್ಕ ದನ-ಕರಾ ಮಾರೇವಿ. ಮೂರ ವರ್ಷದಿಂದ ಮಳೆ ಇಲ್ಲ. ಮಳೆಗಾಲ ಅನ್ನೊ ಮಳೆಗಾಲದಾಗ ಟ್ಯಾಂಕರ್ ನೀರ ಕುಡಿಯೋ ಪರಿಸ್ಥಿತಿ ಬಂದೈತಿ. ಮಹದಾಯಿ ವಿವಾದ ಬಗೆ ಹರಿಸಿ, ಕಳಸಾ-ಬಂಡೂರಿ ಕಾಲುವೆ ಕಟ್ಟಿಸ್ರೀ ಅಂದ್ರ ಧ್ವಜಾ ಬೇಕಂತ ಇವ್ರಗಿ ಧ್ವಜಾ. ಧ್ವಜಾ ತಗೊಂಡ ಎಲ್ಲಿ ಇಟ್ಕೊತಿರೋ...' ಹೀಗೆ ಪ್ರಶ್ನೆ ಮಾಡಿದರು ಬೇರಾರು ಅಲ್ಲ ಮಹದಾಯಿ, ಕಳಸಾ-ಬಂಡೂರಿ ನಾಲಾ ಯೋಜನೆ ಅನುಷ್ಠಾನಕ್ಕಾಗಿ ಹೋರಾಟ ಮಾಡುತ್ತಿರುವ ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹೋರಾಟಗಾರರು.
ಮಹಾದಾಯಿ: ರಾಜ್ಯದ ಮನವಿ ತಿರಸ್ಕರಿಸಿದ ಗೋವಾ ಸರ್ಕಾರ
ಕ್ಷುಲ್ಲಕ ರಾಜಕಾರಣ
ಕಳೆದ ಎರಡು ವರ್ಷಗಳಿಂದ ಮನೆ ಮಠ ತೊರೆದು ಮಹದಾಯಿಗಾಗಿ ಹೋರಾಟಕ್ಕೆ ಧುಮುಕಿರುವವರ ಅಂತರಾಳದ ಕೂಗು ಇದು. ರಾಜ್ಯದಲ್ಲಿ ಅಂತರರಾಜ್ಯ ಜಲವಿವಾದಗಳಿಂದ ನೆಮ್ಮದಿಯಿಲ್ಲ. ನೆರೆಯ ರಾಜ್ಯಗಳು ಅದರಲ್ಲೂ ಗೋವಾ ಮತ್ತು ತಮಿಳುನಾಡು ನೀರು ಹಂಚಿಕೆ ವಿಷಯದಲ್ಲಿ ಸದಾ ಕಾಲು ಕರೆದುಕೊಂಡು ಜಗಳಕ್ಕೆ ಬರುತ್ತಿವೆ. ಇಂತಹದ್ದರಲ್ಲಿ ಜನರ ಭಾವನಾತ್ಮಕ ವಿಷಯವಾಗಿರುವ ಧ್ವಜವನ್ನು ಅಡ್ಡ ತಂದು ರಾಜ್ಯ ಸರ್ಕಾರ ಕ್ಷುಲ್ಲಕ ರಾಜಕಾರಣಕ್ಕೆ ಇಳಿದಿದೆ ಎಂಬುದು ಹೋರಾಟಗಾರರ ಆರೋಪವಾಗಿದೆ.
ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ: ಕ್ಯಾಬಿನೆಟ್ ಮೀಟಿಂಗ್ ನಲ್ಲಿ ನಡೆದದ್ದೇನು?
ಬೇಕು-ಬೇಡಗಳ ಬಗ್ಗೆ ಅರಿವಿಲ್ಲದ ಸರ್ಕಾರ
"ಇದೊಂದು ಜನರ ಬೇಕು-ಬೇಡಗಳ ಬಗ್ಗೆ ಅರಿವಿಲ್ಲದ ಸರ್ಕಾರ. ಜನರಿಗೆ ಅಗತ್ಯವಾಗಿರುವ ಅನ್ನ, ನೀರು, ಬಡತನ ನಿವಾರಣೆ, ಶಿಕ್ಷಣ ಹೀಗೆ ಹಲವು ಸಂಗತಿಗಳ ಹೊರತಾಗಿ ಚುನಾವಣೆ ಸಮೀಪಿಸುತ್ತಿದ್ದಂತೆ ಜನರ ಭಾವನಾತ್ಮಕ ವಿಷಯಗಳನ್ನು ಕೆದಕಲು ಶುರು ಮಾಡಿದೆ. ಪ್ರಸ್ತುತ ಅಗತ್ಯತೆ ಹಾಗೂ ಅದಕ್ಕಾಗಿ ನಿರಂತರ ಹೋರಾಟದ ಕುರಿತು ಸ್ಪಂದಿಸದ ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆದು ದಿಕ್ಕು ತಪ್ಪಿಸಲು ಮುಂದಾಗಿದೆ. ಸರ್ಕಾರದ ಈ ನಡೆಯನ್ನು ಈ ಭಾಗದ ಹೋರಾಟಗಾರರು ಹಾಗೂ ಜನರು ಎಂದಿಗೂ ಕ್ಷಮಿಸುವುದಿಲ್ಲ," ವೀರೇಶ ಸೊರಬದಮಠ, ಕರ್ನಾಟಕ ರೈತ ಸೇನೆ ಅಧ್ಯಕ್ಷ. ಮಹಾದಾಯಿಗಾಗಿ ಅಮರಣಾಂತ ಉಪವಾಸ ನಿರತ ಹೋರಾಟಗಾರರು.
ಧ್ವಜದಿಂದ ನೀರು ಬರುತ್ತಾ?
"ಇಲ್ಲದನ್ನ ಕೆದರಿ ಇರವಿ ಬಿಡ್ಕೊಂಡ್ರು ಅನ್ನೊವಾಂಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದ್ಲು ಮಹದಾಯಿ ಜಗಳ ಬಗಿ ಹರಿಸಿ ಮಲಪ್ರಭಾ ಡ್ಯಾಂಗ ನೀರು ತರೋದನ್ನು ಬಿಟ್ಟು ಧ್ವಜಾ ಕಟ್ಟಾಕ ಹೊಂಟಾರ. ಎರಡು ವರ್ಷ ಆತು, ಮನಿ-ಮಠಾ ಬಿಟ್ಟು ಬೀದಿಯೊಳಗ ಕುಂತೇವಿ. ನಮಗ ಕುಡಿಯಾಕ ನೀರು ಕೊಟ್ಟ ಜೀವಾ ಉಳಿಸೋದ ಬಿಟ್ಟು ಧ್ವಜಾ ಮಾಡಾಕ ಹೊಂಟಾರ. ಧ್ವಜದಿಂದ ನಮಗ ನೀರ ಬರತೈತಿ ಅನ್ನೊದಾದ್ರ ಅದು ಆಗೇ ಬಿಡ್ಲಿ. ನಮ್ಮ ಹೋರಾಟ ಗಮನಾ ಬ್ಯಾರೆ ಕಡೆ ಸೆಳೆಯಾಗ ಹಿಂಗ ಮಾಡಾಕತ್ಯಾರ. ಇಂಥಾ ರಾಜಕಾರಣ ಮಾಡೋ ಸಿದ್ರಾಮಯ್ಯರನ್ನ ಮಹದಾಯಿ ಸಂತ್ರಸ್ಥರು ಕ್ಷಮಿಸೋದಿಲ್ಲ," ಶ್ರೀಶೈಲ ಮೇಟಿ, ಹೋರಾಟಗಾರರು.
ಏಕತೆ ಮೂಡಿಸಲು ಅನುಕೂಲ
"ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ರಚನೆಯಿಂದ ನಾಡಿನ ಬಗ್ಗೆ ಸ್ವಲ್ಪಮಟ್ಟಿಗೆ ಅಭಿಮಾನ ಇಮ್ಮಡಿಕೊಳ್ಳುತ್ತದೆ. ಇದರಿಂದ ಉತ್ತರ ಕರ್ನಾಟಕದ ರಾಜಕಾರಣಿಗಳಿಗೆ ನಾಡು-ನುಡಿ, ಸಂಸ್ಕೃತಿ ಕುರಿತು ಅಭಿಮಾನ ಮೂಡುವ ವಿಶ್ವಾಸವಿದೆ. ಈ ರೀತಿಯ ಅಭಿಮಾನದಿಂದ ಅಂತರರಾಜ್ಯ ನದಿ ನೀರು ಹಂಚಿಕೆ ವಿಷಯದಲ್ಲಿ ರಾಜ್ಯದ ಪರ ಧ್ವನಿ ಎತ್ತಲು ರಾಷ್ಟ್ರೀಯ ಪಕ್ಷಗಳ ರಾಜ್ಯದ ಮುಖಂಡರು ಮುಂದಾಗುವ ವಿಶ್ವಾಸವಿದೆ," ಎನ್ನುತ್ತಾರೆ ಜೆಡಿಎಸ್ ಮುಖಂಡ ವಿಕಾಸ ಸೊಪ್ಪಿನ.
ಒಂದೆಡೆ ಉಪವಾಸ ಈ ಕಡೆ ಬಾವುಟ ರಾಜಕೀಯ
ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಆಗ್ರಹಿಸಿ ಆರಂಭವಾಗಿರುವ ರೈತ ಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಅವರ ಆಮರಣ ಉಪವಾಸ ಸತ್ಯಾಗ್ರಹ ಜುಲೈ 20ರಂದು ಐದನೇ ದಿನಕ್ಕೆ ಕಾಲಿಸಿರಿಸಿದೆ. ವೀರೇಶ್ ಅವರ ಆರೋಗ್ಯದ ಮೇಲೆ ನಿಗಾ ವಹಿಸಿರುವ ವೈದ್ಯರು, ಆಂಬ್ಯಲೆನ್ಸ್ ಸಿಬ್ಬಂದಿ ಕಾಲ ಕಾಲಕ್ಕೆ ಅವರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಕೇವಲ ನೀರು ಮಾತ್ರ ಸೇವಿಸುತ್ತಿರುವ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಸರಕಾರ ಇತ್ತ ಕಿಂಚಿತ್ತೂ ಗಮನ ಹರಿಸದೆ ಕೇವಲ ಬಾವುಟ ರಾಜಕೀಯದಲ್ಲೇ ಕಾಲಕಳೆಯುತ್ತಿದೆ.
|
ಗೋವಾದಿಂದ ನಕಾರಾತ್ಮಕ ಪ್ರತಿಕ್ರಿಯೆ
ಮಹಾದಾಯಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾಕ್ಕೆ ಪತ್ರ ಬರೆದಿದ್ದರು. ಆದರೆ ಗೋವಾ ನ್ಯಾಯಾಲಯದಲ್ಲೇ ಇದಕ್ಕೆ ಪರಿಹಾರ ಸಿಗಲಿ ಎಂದಿದ್ದು ಕರ್ನಾಟಕಕ್ಕೆ ಹಿನ್ನಡೆಯಾಗಿದೆ. ಇದೀಗ ಸಿದ್ದರಾಮಯ್ಯ ಮತ್ತೆ ಮಧ್ಯ ಪ್ರವೇಶಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯಲಿದ್ದಾರೆ.