ಶೀಘ್ರವೇ ಮಹದಾಯಿ ಹೋರಾಟಗಾರರ ಬಿಡುಗಡೆ : ಸಚಿವ ಕುಲಕರ್ಣಿ
ಹುಬ್ಬಳ್ಳಿ, ಜುಲೈ 29 : 'ರೈತ ಬಾಂಧವರು ಶಾಂತಿಯುತವಾಗಿ ತಮ್ಮ ಹೋರಾಟ ಮುಂದುವರೆಸಬೇಕು. ಮುಖ್ಯಮಂತ್ರಿಗಳು ವಿದೇಶದಿಂದ ಬಂದ ನಂತರ ಬಳಿಕ ಬಂಧಿತರಾಗಿರುವ ರೈತರನ್ನು ಬಿಡುಗಡೆ ಮಾಡಲು ಪ್ರಯತ್ನ ನಡೆಸುತ್ತೇನೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಹೇಳಿದರು.
ಶುಕ್ರವಾರ ನಗರದ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಸಚಿವರು, ಮಹದಾಯಿ ಹೋರಾಟದಲ್ಲಿ ವಿಷ ಸೇವಿಸಿದ್ದ ನರಗುಂದದ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, 'ವಿದ್ಯಾರ್ಥಿಗಳ ಜೀವಕ್ಕೆ ಅಪಾಯವಿಲ್ಲ, ನೀರು ಎಲ್ಲರಿಗೂ ಅವಶ್ಯಕವಾದುದ್ದು, ತಾವು ಕೂಡ ಹೋರಾಟಗಾರರೊಂದಿಗೆ ಕೈ ಜೋಡಿಸುವುದಾಗಿ' ತಿಳಿಸಿದರು.[ಮಹಾದಾಯಿ ಹೋರಾಟದ ಚಿತ್ರಗಳು]
'ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ರೈತರ ಹೋರಾಟದ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡಿರುವುದು ಖಂಡನೀಯ' ಎಂದ ಸಚಿವರು, ;ಮೋದಿ ಅವರು ಬಿಜೆಪಿಯ ಮುಖಂಡರಷ್ಟೇ ಅಲ್ಲ ದೇಶದ ಪ್ರಧಾನಿ ಕೂಡ ಆಗಿದ್ದಾರೆ. ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು' ಎಂದು ಒತ್ತಾಯಿಸಿದರು.[ಮಹದಾಯಿಗಾಗಿ ಕರ್ನಾಟಕ ಬಂದ್: ಏನಿರುತ್ತೆ? ಏನಿರಲ್ಲ?]
'ರೈತರ ಹೋರಾಟ ಒಂದು ವರ್ಷದಿಂದ ನಡೆಯುತ್ತಿದ್ದರೂ ಇದುವರೆಗೂ ಗಲಾಟೆ ಆಗಿರಲಿಲ್ಲ. ಆದರೆ, ನವಲಗುಂದದಲ್ಲಿ ಸರ್ಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿದ್ದರಿಂದ ಪೊಲೀಸರು ಅನಿವಾರ್ಯವಾಗಿ ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿದ್ದಾರೆ' ಎಂದು ಸಚಿವರು ಸಮರ್ಥನೆ ನೀಡಿದರು....[ಕರ್ನಾಟಕ ಬಂದ್ : ವಾಟಾಳ್ ನಾಗರಾಜ್ ಸಂದರ್ಶನ]
ಹುಬ್ಬಳ್ಳಿಗೆ ಬಿಎಸ್ಎಫ್ ಪಡೆ ಆಗಮನ
ಮಹದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ಶನಿವಾರ ಕರ್ನಾಟಕ ಬಂದ್ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಹುಬ್ಬಳ್ಳಿ ನಗರಕ್ಕೆ ಬೆಂಗಳೂರಿನಿಂದ 130 ಬಿಎಸ್ಎಫ್ ಯೋಧರನ್ನು ಕರೆಸಲಾಗಿದೆ. ಈಗಾಗಲೇ ಕೆಎಸ್ಆರ್ಪಿ ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದ್ದು, ಅವರು ನಗರದಲ್ಲಿ ಪಥ ಸಂಚಲನ ನಡೆಸಿದರು.
ಆಗಸ್ಟ್ 3ರಿಂದ ಹೋರಾಟ
ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಉತ್ತರ ಕರ್ನಾಟಕದಲ್ಲಿ ಯಶಸ್ವಿಯಾಗುವುದು ಸಂಶಯವಾಗಿದೆ. ಈಗಾಗಲೇ ಗದಗ, ನವಲಗುಂದ, ನರಗುಂದ, ರೋಣ, ಹುಬ್ಬಳ್ಳಿ ನಗರಗಳಲ್ಲಿ ಹಲವಾರು ರೈತ ಮುಖಂಡರನ್ನು ಬಂಧಿಸಲಾಗಿದೆ. ಅಲ್ಲದೇ ಹು-ಧಾ ಪೊಲೀಸ್ ಆಯುಕ್ತರು ಕೂಡ ರೈತರಷ್ಟೇ ಹೋರಾಟದಲ್ಲಿ ಪಾಲ್ಗೊಳ್ಳಿ, ಕೆಲವೊಂದು ಸಂಘಟನೆಗಳು ದುಷ್ಕೃತ್ಯದಲ್ಲಿ ತೊಡಗಿದಲ್ಲಿ ನೀವೇ ಜವಾಬ್ದಾರಿ ಹೊರಬೇಕಾಗುತ್ತದೆ ಎಂದು ರೈತ ಮುಖಂಡರನ್ನು ಎಚ್ಚರಿಸಿದ್ದಾರೆ ಎನ್ನಲಾಗಿದೆ. 'ಆಗಸ್ಟ್ 3 ರಿಂದ ನಾವು ಅರ್ನಿರ್ಧಿಷ್ಟಾವಧಿ ಧರಣಿ ಕೂರುವುದಾಗಿ' ರೈತ ಮುಖಂಡ ಗುರು ರಾಯನಗೌಡರ್ ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.
ಸಂಸದ ಜೋಶಿ, ಮಾಜಿ ಸಿಎಂ ಶೆಟ್ಟರ್ ನಾಪತ್ತೆ
ಸಾರಿಗೆ ಸಿಬ್ಬಂದಿಗಳ ಮುಷ್ಕರದಲ್ಲಿ ಪಾಲ್ಗೊಳ್ಳಲು ನಗರದ ಕಿತ್ತೂರು ಚೆನ್ನಮ್ಮ ಮೈದಾನಕ್ಕೆ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು. ತಮ್ಮ ಕಾರ್ಯಕರ್ತರೊಬ್ಬರ ದುಬಾರಿ ಬೈಕ್ ಮೇಲೆ ಕುಳಿತುಕೊಂಡು ಫೋಟೋಗೆ ಫೋಸ್ ಕೊಟ್ಟಿದ್ದರು. ಆದರೆ, ರೈತರ ಪ್ರತಿಭಟನೆಯಲ್ಲಿ ಅವರು ಪಾಲ್ಗೊಂಡಿಲ್ಲ. ಸಂಸತ್ ಅಧಿವೇಶನ ನಡೆಯುತ್ತಿರುವುದರಿಂದ ಸಂಸದ ಪ್ರಹ್ಲಾದ್ ಜೋಶಿ ದೆಹಲಿಯಲ್ಲಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ಗುರುವಾರ ಪ್ರಹ್ಲಾದ್ ಜೋಶಿಯವರ ಪ್ರತಿಕೃತಿ ದಹನ ಮಾಡಿದರು. ಜೊತೆಗೆ ಅವರ ಕಚೇರಿಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದಾಗ ಪೊಲೀಸರು ತಡೆದಿದ್ದರು.
ಮಂಜುನಾಥ ರಾಮಪ್ಪ ರಾಜೀನಾಮೆ
ಕಳಸಾ-ಬಂಡೂರಿ ಹೋರಾಟಕ್ಕೆ ಬೆಂಬಲಿಸಿ ಅಣ್ಣಿಗೇರಿ ಪುರಸಭೆ ಮಂಜುನಾಥ ರಾಮಪ್ಪ ಮಾಯಣ್ಣವರ ಎಂಬುವವರು ತಮ್ಮ ಸದಸ್ಯತ್ವಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದರು.