ಲಿಂಗಾಯತ ಧರ್ಮ ವಿವಾದ: ಕುಮಾರಸ್ವಾಮಿ-ಹೊರಟ್ಟಿ ’ಜಗಳ್’ ಬಂದಿ
ಹುಬ್ಬಳ್ಳಿ, ಆಗಸ್ಟ್ 3: ವೀರಶೈವ ಮತ್ತು ಲಿಂಗಾಯತ ಸ್ವತಂತ್ರ್ಯ ಧರ್ಮದ ವಿವಾದದಲ್ಲಿ ಅಂತರ ಕಾಯ್ದುಕೊಳ್ಳುವ ಮೂಲಕ ಎಚ್ಚರಿಕೆ ಹೆಜ್ಜೆ ಇರಿಸಿರುವ ಜೆಡಿಎಸ್ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಅವರದ್ದೆ ಪಕ್ಷದ ಬಸವರಾಜ ಹೊರಟ್ಟಿ ನಡೆ ಮುಳ್ಳಾಗಿ ಕಾಡತೊಡಗಿದೆ.
ಲಿಂಗಾಯತ ಸ್ವತಂತ್ರ ಧರ್ಮದ ಪರವಾಗಿ ನಿಂತಿರುವ ಹೊರಟ್ಟಿ ಅವರದ್ದು ವೈಯಕ್ತಿಕ ಅಭಿಪ್ರಾಯ ಎಂದು ಹೇಳಿ ಕೈತೊಳೆದುಕೊಂಡಿದ್ದ ಕುಮಾರಸ್ವಾಮಿ ಅವರು ವಿವಾದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ ಎಂದು ವಾಗ್ದಾಳಿ ನಡೆಸಿದ್ದರು.
ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಲಿಂಗಾಯತ ವೀರಶೈವರನ್ನು ಒಡೆದು ಆಳುವ ಮೂಲಕ ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಕೀಳು ಕೆಲಸಕ್ಕೆ ಕೈಹಾಕಿದ್ದಾರೆ ಎಂದು ದೂರಿದ್ದರು.
ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಜೆಡಿಎಸ್ನ ಎಂಎಲ್ಸಿ ಬಸವರಾಜ ಹೊರಟ್ಟಿ, "ಪ್ರತ್ಯೇಕ ಧರ್ಮದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಗೂಬೆಕೂರಿಸುವುದು ಸರಿಯಲ್ಲ. ಸಿಎಂಗೆ ಮನವಿ ಬಂದ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ. ಹೀಗಾಗಿ ಲಿಂಗಾಯತರನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿಲ್ಲ," ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೇ ತಿರುಗೇಟು ನೀಡಿದ್ದಾರೆ.
ಪಕ್ಷದ ನಿಲುವನ್ನು ಧಿಕ್ಕರಿಸಿ ಧರ್ಮದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಳ್ಳುವ ಮೂಲಕ ತಮ್ಮ ಆರೋಪವನ್ನು ತಳ್ಳಿಹಾಕಿರುವ ತಮ್ಮದೇ ಪಕ್ಷದ ಬಸವರಾಜ ಹೊರಟ್ಟಿ ನಡೆಯ ಬಗ್ಗೆ ಸ್ವತಃ ಕುಮಾರಸ್ವಾಮಿ ತೀವ್ರ ಬೇಸರಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.