ಬೆಳಗಾವಿಯಲ್ಲಿ ಭಾನುವಾರ ಕುರುಬರ ಜಾಗೃತಿ ಸಮಾವೇಶ
ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವಂತೆ ಒತ್ತಾಯಿಸಲು ನವೆಂಬರ್ 6ರಂದು ಬೆಳಗಾವಿಯಲ್ಲಿ ವಿಶೇಷ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಹುಬ್ಬಳ್ಳಿ, ನವೆಂಬರ್ 5: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್ಟಿ) ಸೇರಿಸುವಂತೆ ಒತ್ತಾಯಿಸಲು ನವೆಂಬರ್ 6ರಂದು ಬೆಳಗಾವಿಯಲ್ಲಿ ವಿಶೇಷ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಹಾಲುಮತ ಮಹಾಸಭಾ ರಾಜ್ಯ ಘಟಕ ಅಧ್ಯಕ್ಷ ರುದ್ರಣ್ಣ ಗುಳಗುಳಿ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬೆಳಗಾವಿಯ ಸಿಪಿಇಡಿ ಮೈದಾನದಲ್ಲಿ ಮಧ್ಯಾಹ್ನ 1ಕ್ಕೆ ಕುರುಬರ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ. 50 ಸಾವಿರಕ್ಕೂ ಹೆಚ್ಚು ಜನರು ಸೇರಲಿದ್ದಾರೆ. ನಾಳೆ ಬೆಳಗ್ಗೆ 10ಕ್ಕೆ ಬೆಳಗಾವಿಯ ಕೋಟೆಯಿಂದ ಸಿಪಿಇಡಿ ಮೈದಾನದವರೆಗೆ ಸಾವಿರಾರು ಡೊಳ್ಳಿನ ಕುಣಿತದೊಂದಿಗೆ ಬೃಹತ್ ಮೆರವಣಿಗೆ ಜರುಗುವುದು ಎಂದರು.[ಅಹಿಂದ ಶಕ್ತಿ ಪ್ರದರ್ಶನಕ್ಕೆ ಸಜ್ಜಾದ ಕೆ.ಎಸ್.ಈಶ್ವರಪ್ಪ]
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಕುರುಬ ಜನಾಂಗ ಹಿಂದುಳಿದಿದೆ. ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕುರುಬ ಸಮಾಜದವರು ಇದ್ದರೂ ಕೆಲವರು ಮಾತ್ರ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಅಲೆಮಾರಿಗಳಾಗಿ ಕುರಿ ಕಾಯುವ ಕಸುಬನ್ನು ಮಾಡಿಕೊಂಡು ಬರುತ್ತಿರುವ ನಮ್ಮ ಸಮಾಜವನ್ನು ಎಸ್ಟಿ ಗೆ ಸೇರಿಸುವಂತೆ ದಶಕಗಳಿಂದ ಒತ್ತಾಯಿಸಲಾಗುತ್ತಿದೆ ಎಂದರು.
ಆದರೆ, ಇದುವರೆಗೂ ಯಾವ ಸರಕಾರವೂ ಗಮನ ಕೊಟ್ಟಿಲ್ಲ. ನಮ್ಮ ಸಮಾಜವನ್ನು ಎಸ್ಟಿ ಗೆ ಸೇರಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಮನವಿ ಸಲ್ಲಿಸಲಾಗುವುದು ಎಂದರು. ಸಿದ್ದು ತೇಜಿ, ರವಿರಾಜ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.[ಕುರುಬರ ಸಮಾವೇಶದಲ್ಲಿ ಸಿಎಂ ಸಿದ್ದುಗೆ 'ಕಿಸ್ ಭಾಗ್ಯ']
ವಿಶೇಷ ಪ್ಯಾಕೇಜ್ ಘೋಷಣೆ: ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಜವಳಿ ಸಚಿವರೊಂದಿಗೆ ಚರ್ಚಿಸಿ, ವಿಶೇಷ ಪ್ಯಾಕೇಜ್ ಘೋಷಿಸಿವುದಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷ ರವೀಂದ್ರ ಪಹ್ಲಾದ ಕಲಬುರ್ಗಿ ಹೇಳಿದರು. ಶನಿವಾರ ವಿದ್ಯಾನಗರದಲ್ಲಿರುವ ನಿಗಮದ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ನಿಗಮದ ಅಭಿವೃದ್ಧಿಗೆ ಮತ್ತು ಪುನಶ್ಚೇತನಕ್ಕೆ ಶ್ರಮಿಸುತ್ತೇನೆ ಎಂದು ಹೇಳಿದರು.
ಸದ್ಯ ಸರಕಾರ ಪ್ರತಿ ಮೂರು ತಿಂಗಳಿಗೆ 15 ಕೋಟಿ. ರುಪಾಯಿ ಅನುದಾನ ನೀಡುತ್ತಿದೆ. ಜೊತೆಗೆ ವಿದ್ಯಾವಿಕಾಸ ಯೋಜನೆಯಡಿ ನೇಕಾರರಿಗೆ 65 ಲಕ್ಷ ಮೀಟರ್ ಬಟ್ಟೆ ಕೂಡ ನೀಡುತ್ತಿದೆ. ಎಲ್ಲ ನೇಕಾರರಿಗೆ ಜೀವವಿಮೆ ಮಾಡಿಸುವ ಬಗ್ಗೆ ಚಿಂತನೆ ನಡೆದಿದೆ. ಸದ್ಯದಲ್ಲೇ ಈ ಯೋಜನೆ ಜಾರಿಗೊಳಿಸಲು ಇಲಾಖೆಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ ಎಂದು ಹೇಳಿದರು.
ನೇಕಾರರ ಸಂಕಷ್ಟದ ಬಗ್ಗೆ ಸ್ಪಂದಿಸಿದ ರವೀಂದ್ರ, ನಿತ್ಯ ಅವರಿಗೆ ಕಚ್ಚಾ ವಸ್ತು ಒದಗಿಸಿದರೆ ಸಮಸ್ಯೆಗಳ ಶಮನವಾಗುತ್ತವೆ. ನಿವೃತ್ತರಿಗೆ ಕೊಡಬೇಕಾಗಿರುವ 20 ಕೋಟಿ ರುಪಾಯಿ ಹಣವನ್ನು ಹಂತ ಹಂತವಾಗಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.