ಕುಮಾರಸ್ವಾಮಿ-ಅನಿತಾ ದಂಪತಿಯಿಂದ ಹುಬ್ಬಳ್ಳಿಯಲ್ಲಿ ಗೃಹಪ್ರವೇಶ
ಹುಬ್ಬಳ್ಳಿ, ನವೆಂಬರ್ 18: ಶುಕ್ರವಾರ ಬೆಳಗ್ಗೆ 8.10ರ ಶುಭ ಮುಹೂರ್ತದಲ್ಲಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾರೊಂದಿಗೆ ಏಕದಂತ ಕೃಪಾ ಮನೆಯ ಗೃಹ ಪ್ರವೇಶ ಮಾಡಿದರು.
ನಗರದ ಭೈರಿದೇವರಕೊಪ್ಪದ ಮುಖ್ಯರಸ್ತೆಯಿಂದ ಗಾಮನಗಟ್ಟಿ ರಸ್ತೆಯಲ್ಲಿ 5 ಕಿ.ಮೀ. ಒಳಗೆ ಇರುವ ಮಾಯಕಾರ್ಸ್ ಕಾಲೋನಿಯಲ್ಲಿ ತಮ್ಮ ಮನೆಯೊಂದಿಗೆ ಗೃಹ ಕಚೇರಿ 'ಬೆನಕ ಕೃಪಾ'ಗೆ ಎಚ್ ಡಿಕೆ ಅಧಿಕೃತವಾಗಿ ಪ್ರವೇಶಿಸಿದರು. ಇಡೀ ಮನೆಯನ್ನು ಹೂ ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.[ಕುಮಾರಣ್ಣನ ಹುಬ್ಬಳ್ಳಿ ಮನೆಯ ಅಂತರಂಗ-ಬಹಿರಂಗ]
ಶುಕ್ರವಾರ ಬೆಳಗ್ಗೆ 5 ಗಂಟೆಯಿಂದ ಪೂಜೆ, ಹೋಮ, ಹವನ, ಪ್ರಾರ್ಥನೆ, ಸತ್ಯನಾರಾಯಣ ಪೂಜೆಯನ್ನು ಉಡುಪಿ ಮತ್ತು ಯಲ್ಲಾಪುರದಿಂದ ಬಂದಿರುವ ಅರ್ಚಕರು ನೇರವೇರಿಸಿದರು. ಗಣಹೋಮ, ನವಗ್ರಹ ಹೋಮ, ವಾಸ್ತು ಹೋಮ, ರುದ್ರಾಭಿಷೇಕಗಳನ್ನು ಮಾಡಲಾಗುತ್ತಿದೆ ಎಂದು ಯಲ್ಲಾಪುರದ ಅರ್ಚಕ ಪಂಡಿತ ವಿದ್ವಾನ್ ಪ್ರದೀಪ ಭಟ್ ತಿಳಿಸಿದರು.
ವಾಸ್ತು ಪ್ರಕಾರ
ಇಡೀ ಮನೆ ವಾಸ್ತುಪ್ರಕಾರ ಇದೆ, ನನಗೆ ಈ ಮನೆ ತುಂಬಾ ಹಿಡಿಸಿದೆ ಎಂದು ಅನಿತಾ ಕುಮಾರಸ್ವಾಮಿ ಒನ್ ಇಂಡಿಯಾಗೆ ತಿಳಿಸಿದರು. ಯಾರಿಗೂ ಅಧಿಕೃತವಾಗಿ ಆಮಂತ್ರಣ ನೀಡಿರಲಿಲ್ಲ. ಆದರೆ ಎಲ್ಲರೂ ಅಭಿಮಾನದಿಂದ ಬಂದಿದ್ದಾರೆ. ಈಗಾಗಲೇ ಧಾರವಾಡ, ಹಾವೇರಿ, ಗದಗ, ವಿಜಯಪುರ, ಬೆಳಗಾವಿ, ಬಾಗಲಕೋಟೆ, ರಾಯಚೂರು, ಸಿಂಧನೂರ, ಕೊಪ್ಪಳ, ದಾವಣಗೆರೆಯಿಂದ ಸಾಕಷ್ಟು ಅಭಿಮಾನಿಗಳು ಬಂದಿದ್ದಾರೆ. ಇದು ಸಂತಸ ನೀಡಿದೆ ಎಂದು ಕುಮಾರಸ್ವಾಮಿ ಒನ್ಇಂಡಿಯಾಗೆ ಹೇಳಿದರು.
ವಿವಿಧ ಧರ್ಮಗುರುಗಳು
ಶಿರಹಟ್ಟಿಯ ಫಕ್ಕೀರೇಶ್ವರ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಭಾಗದ ಮಠಾಧೀಶರು, ಮುಸ್ಲಿಂ ಧರ್ಮಗುರುಗಳು, ಪಾದ್ರಿಗಳು, ವಿವಿಧ ಸಂಘಟನೆಗಳ ಮುಖಂಡರು, ರೈತ ಧುರೀಣರು, ಹೋರಾಟಗಾರರು ಸೇರಿದಂತೆ ಅನೇಕರು ಗೃಹಪ್ರವೇಶ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕುಮಾರಸ್ವಾಮಿಯವರಿಗೆ ಶುಭ ಕೋರಿದರು.
ಸಾರ್ವಜನಿಕ ಸಭೆ
ಶುಕ್ರವಾರ ಮಧ್ಯಾಹ್ನ 12ರ ನಂತರ ಸಾರ್ವಜನಿಕ ಸಭೆಯನ್ನು ಏರ್ಪಡಿಸಲಾಗಿದೆ. ಇದಕ್ಕಾಗಿ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸಾವಿರಾರು ಕುರ್ಚಿಗಳು ತರಿಸಲಾಗಿದೆ. ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ.
ಧೂಳಿನ ಮಜ್ಜನ
ಭೈರಿದೇವರಕೊಪ್ಪ ಮುಖ್ಯರಸ್ತೆಯಿಂದ ಕುಮಾರಸ್ವಾಮಿ ಮನೆಯವರೆಗೂ ಕೆಲವೆಡೆ ಮಣ್ಣಿನ ರಸ್ತೆಯಿದೆ. ರಸ್ತೆಯುದ್ದಕ್ಕೂ ತಗ್ಗು- ದಿಣ್ಣೆಗಳಿವೆ. ಮಣ್ಣಿನ ರಸ್ತೆಯಿಂದಾಗಿ ಇಡೀ ಪ್ರದೇಶ ಧೂಳುಮಯವಾಗಿದೆ.
ಧಾರ್ಮಿಕ ವಿಧಿ-ವಿಧಾನ
ನವಲಗುಂದ ಶಾಸಕ ಎನ್.ಎಚ್.ಕೋನರೆಡ್ಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಅಲ್ತಾಫ್ ಕಿತ್ತೂರು, ಫಹಮೀದಾ ಕಿಲ್ಲೇದಾರ ಸೇರಿದಂತೆ ಹಲವಾರು ಧುರೀಣರು ಉಪಸ್ಥಿತರಿದ್ದು, ಸಂಪೂರ್ಣ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಪಂಚೆ ತೊಟ್ಟು ಪೂಜಾ ಕಾರ್ಯಗಳಲ್ಲಿ ಭಾಗವಹಿಸಿದ ಕುಮಾರಸ್ವಾಮಿ, ಧಾರ್ಮಿಕ ವಿಧಿವಿಧಾನ ನೇರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ
ಈ ಭಾಗದ ಜನರ ನೇರ ಸಂಪರ್ಕದಲ್ಲಿ ಇರಬೇಕು ಎನ್ನುವ ಉದ್ದೇಶದಿಂದ ಇಲ್ಲಿ ಮನೆ ಮಾಡಿದ್ದೇನೆ. ಇಲ್ಲಿಂದ ಹೊಸ ರಾಜಕೀಯ ಪುನರಾರಂಭವಾಗಿದೆ. ಕಷ್ಟ ಹೇಳಿಕೊಂಡು ಬರುವವರಿಗೆ ನಮ್ಮ ಮನೆ ಬಾಗಿಲು ಸದಾ ತೆರೆದಿರುತ್ತದೆ. ನಮ್ಮೆಲ್ಲ ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿದೆ ಎಂದರು.
40 ಸ್ಥಾನಗಳಲ್ಲಿ ಗೆಲುವು
ಉತ್ತರ ಕರ್ನಾಟಕದಲ್ಲಿ ಮನೆ ಮಾಡಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ. ಕನಿಷ್ಠ 40 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ರಾಜ್ಯ ಸರಕಾರ ರೈತರನ್ನು ಸಂಪೂರ್ಣ ನಿರ್ಲಕ್ಷಿಸಿದೆ. ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ಜನರ ಸಂಕಷ್ಟಗಳ ಕುರಿತು ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದ ರೈತರು ಸಂಕಷ್ಟದಲ್ಲಿ
ಬರಗಾಲದಿಂದ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆಹಾನಿಯಿಂದ ಸಾಕಷ್ಟು ನಷ್ಟ ಸಂಭವಿಸಿದೆ. ಅತಿವೃಷ್ಟಿ ಮತ್ತು ಅನಾವೃಷ್ಟಿ ನಿರ್ವಹಣೆಯ ಕುರಿತು ಪ್ರಸ್ತಾಪಿಸಲಾಗುತ್ತದೆ. ಆಧಿವೇಶನದಲ್ಲಿ ಮಹದಾಯಿ ಯೋಜನೆ ಜಾರಿ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದರು.