ಚಿತ್ರಗಳು : ಹುಬ್ಬಳ್ಳಿಯಲ್ಲಿ ಖಾಸಗಿ ಬಸ್ ಬೆಂಕಿಗಾಹುತಿ
ಹುಬ್ಬಳ್ಳಿ, ಜುಲೈ 27 : ಒಂದು ಕಡೆ ಸಾರಿಗೆ ಇಲಾಖೆ ನೌಕರರು ಮುಷ್ಕರ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ಚಲಿಸುತ್ತಿದ್ದ ಖಾಸಗಿ ಬಸ್ಗೆ ಬೆಂಕಿ ಹೊತ್ತಿಕೊಂಡು ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. 9 ಪ್ರಯಾಣಿಕರು ಈ ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ದುರ್ಗಾಂಬ ಟ್ರಾವೆಲ್ಸ್ಗೆ ಸೇರಿದ ಬಸ್ ವರೂರು ಸಮೀಪ ಬುಧವಾರ ಮುಂಜಾನೆ ಬೆಂಕಿಗೆ ಆಹುತಿಯಾಗಿದೆ. ಹುಬ್ಬಳ್ಳಿಯಿಂದ ಸುಮಾರು 20 ಕಿ.ಮೀ ದೂರವಿರುವಾಗ ಈ ದುರಂತ ಸಂಭವಿಸಿದೆ.[ಹುಬ್ಬಳ್ಳಿ : ಖಾಸಗಿ ಬಸ್ಸಿಗೆ ಬೆಂಕಿ, ಮೂವರ ಸಜೀವ ದಹನ]
ಬೆಂಕಿಗೆ ಆಹುತಿಯಾದ ಬಸ್ಸಿನಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರಿದ್ದರು. ಇವರಲ್ಲಿ ಮೂವರು ಸಜೀವವಾಗಿ ದಹನವಾಗಿದ್ದಾರೆ. 9 ಜನರು ಗಾಯಗೊಂಡಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4 ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಆಸ್ಪತ್ರೆಗೆ ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಈ ದುರಂತದಲ್ಲಿ ಮೃತಪಟ್ಟವರ ವಿವರಗಳು ಇನ್ನೂ ಪತ್ತೆಯಾಗಿಲ್ಲ. ಶಾರ್ಟ್ ಸರ್ಕಿಟ್ನಿಂದಾಗಿ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಬಸ್ ದುರಂತದ ಚಿತ್ರಗಳು ಇಲ್ಲಿವೆ.....
ಮುಂಜಾನೆ ನಿದ್ರೆಯಲ್ಲಿದ್ದಾಗ ದುರಂತ
ಬುಧವಾರ ಮುಂಜಾನೆ ಹುಬ್ಬಳ್ಳಿ ಬಳಿ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು ಮೂವರು ಪ್ರಯಾಣಿಕರು ಸಜೀವವಾಗಿ ದಹನವಾಗಿದ್ದಾರೆ. 9 ಜನರು ಈ ದುರಂತದಲ್ಲಿ ಗಾಯಗೊಂಡಿದ್ದಾರೆ
ಶಾರ್ಟ್ ಸರ್ಕಿಟ್ನಿಂದ ಬೆಂಕಿ
ಶಾರ್ಟ್ ಸರ್ಕಿಟ್ನಿಂದ ಬಸ್ಸಿನಲ್ಲಿ ಬೆಂಕಿ ಹೊತ್ತಿಕೊಂಡಿದೆ. ಬಸ್ಸಿನಲ್ಲಿ ಕೆಲವು ರಾಸಾಯನಿಕ ವಸ್ತುಗಳು, ಸಿಗರೇಟ್ಗಳನ್ನು ಸಾಗಣೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದದೆ. ಇದರಿಂದಾಗಿ ಬೆಂಕಿ ಬೇಗನೆ ಹಬ್ಬಿದೆ ಎಂದು ಶಂಕಿಸಲಾಗಿದೆ.
ಗುರುತುಪತ್ತೆಯಾಗಿಲ್ಲ
ದುರಂತದಲ್ಲಿ ಮೃತಪಟ್ಟ ಮೂವರ ಗುರುತು ಪತ್ತೆಯಾಗಿಲ್ಲ. ಮೃತಪಟ್ಟವರ ದೇಹಗಳು ಸುಟ್ಟು ಕರಕಲಾಗಿದ್ದರಿಂದ ಅವರ ಗುರುತು ಪತ್ತೆ ಹಚ್ಚಲು ಕಾಲವಕಾಶ ಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ
ದುರಂತದಲ್ಲಿ ಗಾಯಗೊಂಡ 9 ಜನರಲ್ಲಿ ಎಂಟು ಪ್ರಯಾಣಿಕರನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಬ್ಬರು ಧಾರವಾಡ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಗೊಂಡವರ ವಿವರಗಳು
ಅಪಘಾತದಲ್ಲಿ ಗಾಯಗೊಂಡವರನ್ನು ಧಾರವಾಡದ ಸುನೀಲ ಮಾನೆ (54), ನವನಗರದ ನೇತ್ರಾ ಶೆಟ್ಟಿ (28) ಇವರ ಮಗಳು ಒಂದೂವರೆ ವರ್ಷದ ಸುಮಂತಾ ಶೆಟ್ಟಿ, ನವನಗರದ ಮಹಾಂತೇಶ ಪಾಟೀಲ (17) ಮತ್ತು ಐಶ್ವರ್ಯ ಮರದ ಎಂದು ಗುರುತಿಸಲಾಗಿದೆ.
ಆರೋಗ್ಯ ವಿಚಾರಿಸಿದ ಸಚಿವರು
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.