ನನ್ನಿಂದ ತಪ್ಪಾಗಿದೆ ಎಂದು ಸಾಬೀತಾದರೆ ಎಚ್ ಡಿಕೆ ಮನೆಗೆ ಹೋಗಿ ಕ್ಷಮೆ ಕೇಳ್ತೀನಿ
ಹುಬ್ಬಳ್ಳಿ, ಮೇ 25: ನನ್ನ ವಿರುದ್ಧ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ ವೆಂಕಟೇಶ್ ಗೌಡ ಯಡಿಯೂರಪ್ಪ ಮಾತಿನಂತೆ ನಡೆದುಕೊಂಡಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಬಿಎಸ್ ವೈ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಹಾಗೂ ವೆಂಕಟೇಶ್ ಗೌಡಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
ಇನ್ನು ಆದಾಯ ಇಲಾಖೆಗೆ ಸಲ್ಲಿಸಿದ ದೂರು ಟೈಪ್ ಆಗಿರುವುದು ಬಿಜೆಪಿ ಕಚೇರಿಯಲ್ಲಿ ಎಂದು ಆರೋಪಿಸಿದ್ದಾರೆ. ಒಂದು ವೇಳೆ ಅದನ್ನು ಸಾಬೀತು ಪಡಿಸಿದರೆ ಕುಮಾರಸ್ವಾಮಿ ಅವರ ಮನೆಗೆ ಹೋಗಿ ಕ್ಷಮೆ ಕೇಳುತ್ತೇನೆ ಎಂದು ಯಡಿಯೂರಪ್ಪ ಅವರು ಹೇಳಿದ್ದಾರೆ.
ಕುಮಾರಸ್ವಾಮಿ ಅವರಿಗೆ ಬಿಜೆಪಿ ಕಚೇರಿಯಲ್ಲಿ ನಡೆದ ವಿಚಾರ ತಿಳಿಯಲು ಎಚ್ ಡಿಕೆ ಕಡೆಯವರು ಅಲ್ಲಿದ್ದಾರೆಯೇ? ದೂರು ನೀಡಿದವರ ಕ್ರಮ ಕೈಗೊಳ್ಳಬೇಕು ಅಥವಾ ತಾವು ತಪ್ಪು ಮಾಡಿಲ್ಲ ಎಂಬುದನ್ನು ಸಾಬೀತು ಪಡಿಸಲಿ. ಅಕ್ರಮ ಗಣಿಗಾರಿಕೆ ಬಗ್ಗೆ ಪುಸ್ತಕ ಪ್ರಕಟಿಸಿರುವುದು ನಿಜ. ಆ ವಿಚಾರ ಕೋರ್ಟ್ ನಲ್ಲಿ ಫೈಸಲ್ ಆಗುತ್ತದೆ ಎಂದು ಹೇಳಿದ್ದಾರೆ.
ಪ್ರಚಾರಕ್ಕಾಗಿ ಏನೋ ಹೇಳಬೇಕು ಅಂತ ಹೇಳಿ, ಈ ರೀತಿ ಹಿಟ್ ಅಂಡ್ ರನ್ ಹೇಳಿಕೆ ನೀಡುವುದನ್ನು ಕುಮಾರಸ್ವಾಮಿ ನಿಲ್ಲಿಸಲಿ ಎಂದಿದ್ದಾರೆ.