ಹುಬ್ಬಳ್ಳಿ-ಧಾರವಾಡ ಪಾಲಿಕೆ: ಅಧ್ಯಯನ ಪ್ರವಾಸ ಅಂದ್ರೆ ಮೋಜು-ಮಸ್ತಿ ನಾ?
ಹುಬ್ಬಳ್ಳಿ, ಜುಲೈ 12 : ಸಧ್ಯದ ಕಿತ್ತು ತಿನ್ನುವ ಭೀಕರ ಬರಗಾದಲ್ಲೂ ಅದೇನು ವಿದೇಶ ಪ್ರವಾಸಕ್ಕೆ ಹೋಗಿ ಕಿತ್ತಿ ಗುಡ್ಡೆ ಹಾಕ್ತಾರೋ ಗೊತ್ತಿಲ್ಲ, ಆದ್ರೆ ಪ್ರತಿ ವರ್ಷ ಸರ್ಕಾರದ ಲಕ್ಷ-ಲಕ್ಷಟ್ಟಲೇ ಹಣ ಪೋಲಾಗುತ್ತಿರುವುದರಂತೂ ಸತ್ಯ...ಇದಕ್ಕೆ ನಿದರ್ಶನ ಎಂಬಂತೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹೊರತಾಗಿಲ್ಲ.
ಹು-ಧಾ ಪಾಲಿಕೆ ವಾರ್ಡ್ ಗಳ ಸಂಖ್ಯೆ 67 ರಿಂದ 82ಕ್ಕೆ ಏರಿಕೆ!
ಹೌದು..ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಪ್ರತಿವರ್ಷವೂ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಾಲ್ಕು ಸ್ಥಾಯಿ ಸಮಿತಿ ಸದಸ್ಯರನ್ನು ಕಸ ವಿಲೇವಾರಿ, ರಸ್ತೆ, ಒಳಚರಂಡಿ, ಸ್ವಚ್ಛತೆ ಸೇರಿದಂತೆ ಹಲವು ಮೂಲಸೌಕರ್ಯಗಳ ಅಧ್ಯಯನಕ್ಕೆ ಅಂತನೇ ರಾಜ್ಯ, ಅಂತಾರಾಜ್ಯ ಹಾಗೂ ವಿದೇಶ ಪ್ರವಾಸ ಸುತ್ತುತ್ತಲೇ ಇರ್ತಾರೆ.
ಹುಬ್ಬಳ್ಳಿ 9 ಕೋಟಿ ಬಾಕಿ ಆಸ್ತಿ ತೆರಿಗೆ ಸಂಗ್ರಹಕ್ಕೆ ಪಾಲಿಕೆ ಪರದಾಟ
ದುರದೃಷ್ಟ ಅಂದ್ರೆ ಇಲ್ಲಿನ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಗಳು ಅಧ್ಯಯನ ನೆಪದಲ್ಲಿ ಕೈಗೊಂಡಿರುವ ದೇಶ-ವಿದೇಶಗಳ ಪ್ರವಾಸಗಳ ವರದಿ ಈವರೆಗೂ ಪಾಲಿಕೆಗೆ ಸಲ್ಲಿಕೆಯಾಗಿಲ್ಲ. ಇದರ ಬೆನ್ನಲ್ಲೇ ಸ್ಥಾಯಿ ಸಮಿತಿ ಸದಸ್ಯರು ಇದೇ ನೆಪ ಇಟ್ಟುಕೊಂಡು ಮತ್ತೆ ದೇಶ-ವಿದೇಶ ಪ್ರವಾಸ ಕೈಗೊಳ್ಳಲು ತೆರೆಮರೆಯಲ್ಲಿ ಕಸರತ್ತು ನಡೆಸಿದ್ದಾರೆ. ಇದು ಎಷ್ಟು ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆ.
ವರದಿ ಸಲ್ಲಿಸುವುದು ಕಡ್ಡಾಯ
10ಕ್ಕಿಂತ ಅಧಿಕ ಬಾರಿ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರು ಮತ್ತು ಅಧಿಕಾರಿಗಳ ತಂಡ ಮಹಾರಾಷ್ಟ್ರ, ಗುಜರಾತ್, ಅಹ್ಮದಾಬಾದ್, ಚಂಡಿಗಢ, ದೆಹಲಿ, ರಾಜಸ್ಥಾನ, ವಿಜಯವಾಡ, ಕೊಲ್ಕತ್ತಾ, ಶಿಮ್ಲಾ, ಕುಲುಮನಾಲಿ, ನೇಪಾಳ ಸೇರಿದಂತೆ ಹಲವು ದೇಶ-ವಿದೇಶಗಳನ್ನು ಸುತ್ತಾಡಿ ಬಂದಿದ್ದಾರೆ. ಪ್ರವಾಸದ ನಂತರ ಸಮಿತಿಗಳು ಅಧ್ಯಯನ ಪ್ರವಾಸದ ವರದಿ ಸಲ್ಲಿಸುವುದು ಕಡ್ಡಾಯ. ಆದರೆ ಇದುವರೆಗೂ ಅಧ್ಯಯನಕ್ಕೆ ತೆರಳಿರುವ ನಾಲ್ಕರಲ್ಲಿ ಒಂದೇ ಒಂದು ಸಮಿತಿ ನಾಮಕಾವಸ್ತೆಗೂ ವರದಿ ನೀಡಿಲ್ಲ.
ಐಷಾರಾಮಿ ಅಧ್ಯಯನ ಪ್ರವಾಸ
2008-09ನೇ ಸಾಲಿನಿಂದ ಇತ್ತೀಚಿನವರೆಗೂ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧಿಕಾರಿಗಳು ಅಧ್ಯಯನ ಪ್ರವಾಸವನ್ನು ವಿಮಾನದಲ್ಲಿಯೇ ಮಾಡಿರುವುದು ಬೆರಗು ಮೂಡಿಸುವಂತಿದೆ. ಎರಡು ಬದಿಯಿಂದ ಬಹುತೇಕ ವಿಮಾನ ಪ್ರಯಾಣ ಮಾಡುವ ಸದಸ್ಯರು, ಪ್ರವಾಸಿ ಸ್ಥಳಗಳಲ್ಲಿ ಉಳಿದುಕೊಳ್ಳಲು ಸುಸಜ್ಜಿತ ಕಟ್ಟಡ, ಓಡಾಟಕ್ಕೆ ವಾಹನದ ವ್ಯವಸ್ಥೆ ಸೇರಿದಂತೆ ಇತರೆ ಖರ್ಚು-ವೆಚ್ಚಕ್ಕಾಗಿ ಪ್ರತಿ ಸ್ಥಾಯಿ ಸಮಿತಿಗೂ ಕನಿಷ್ಠ ನಾಲ್ಕು ಲಕ್ಷ ರೂಪಾಯಿಗಳನ್ನು ಪಾಲಿಕೆ ಅನುದಾನದಲ್ಲಿ ನೀಡಲಾಗುತ್ತಿದೆ. ಖರ್ಚು ಅಧಿಕವಾದರೂ ಪಾಲಿಕೆಯಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡಿಕೊಳ್ಳುವ ಸಂಪ್ರದಾಯವೂ ನಿರಂತರವಾಗಿದೆ.
ಯೋಜನೆ ಉದ್ದೇಶ ಬುಡಮೇಲು
ರಸ್ತೆ, ಉದ್ಯಾನ, ಮಾರುಕಟ್ಟೆ ಪ್ರದೇಶಗಳು, ಪಾರ್ಕಿಂಗ್ ವ್ಯವಸ್ಥೆ, ಬೃಹತ್ ವಾಣಿಜ್ಯ ಕಟ್ಟಡಗಳು, ನಿರುಪಯುಕ್ತ ವಸ್ತುಗಳ ಬಳಕೆ, ಒಳಚರಂಡಿ, ನೀರು ಶುದ್ಧೀಕರಣ ಘಟಕ, ಘನತ್ಯಾಜ್ಯ ವಿಲೇವಾರಿ ಸಂಗ್ರಹ ಘಟಕ, ನಗರಗಳ ಸೌಂದರ್ಯ ಮತ್ತು ಅಭಿವೃದ್ಧಿ, ಅಲ್ಲಿನ ಮೇಯರ್ ಮತ್ತು ಅಧಿಕಾರಿಗಳೊಂದಿಗೆ ಚರ್ಚೆ, ಮಾಹಿತಿ ಸಂಗ್ರಹ, ಮೂಲ ಸೌಕರ್ಯ ಕಲ್ಪಿಸುವುದು ಒಳಗೊಂಡ ಅಧ್ಯಯನವನ್ನು ಸ್ಥಾಯಿ ಸಮಿತಿಗಳು ಕೈಗೊಳ್ಳುವುದು ಸಹಜವಾಗಿದೆ. ಆದರೆ, ಇದಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಸ್ಥಾಯಿ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳ ವರ್ತನೆಯಿಂದ ಯೋಜನೆಯ ಉದ್ದೇಶ ಬುಡಮೇಲಾಗಿದೆ.
Image courtesy : Goudar
ಅಧ್ಯಯನ ಪ್ರವಾಸ ಅಂದ್ರೆ ಮೋಜು-ಮಸ್ತಿ
ಅಧ್ಯಯನ ಪ್ರವಾಸ ಅಂದ್ರೆ ಅಲ್ಲಿನ ವಿಶೇಷ ಅಧುನಿಕ ತಂತ್ರಜ್ಞಾನ ಹಾಗೂ ಅಲ್ಲಿ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ಬಂದು. ಆ ಮಾದರಿಗಳನೆಲ್ಲ ಇಲ್ಲಿ ಅಳವಡಿಸುವುದಾಗಿದೆ. ಆದರೆ, ಅದ್ಯಾವುದಕ್ಕೂ ಮಾಡದ ಸ್ಥಾಯಿ ಸಮಿತಿಗಳ ಅಧ್ಯಯನ ಪ್ರವಾಸ ಕೇವಲ ಕುಟುಂಬ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಮೋಜು ಮಸ್ತಿಗೆ ಸೀಮಿತ ಎಂಬಂತಾಗಿದೆ.