ಹುಬ್ಬಳ್ಳಿ: ಪತ್ನಿಯ ಕಿರುಕುಳಕ್ಕೆ ಪತಿ ಆತ್ಮಹತ್ಯೆ, ಇನ್ನಿತರ ಕ್ರೈಂಗಳು
ಹುಬ್ಬಳ್ಳಿ, ನವೆಂಬರ್, 4 : ಹೆಂಡತಿಯ ಮಾನಸಿಕ ಕಿರುಕುಳ ತಾಳಲಾರದೆ ಗಂಡನೇ ನೇಣಿಗೆ ಶರಣಾಗಿರುವ ಅಮಾನುಷ ಘಟನೆ ಶುಕ್ರವಾರ ಧಾರವಾಡದ ಸಪ್ತಾಪುರದಲ್ಲಿ ಶುಕ್ರವಾರ ಜರುಗಿದೆ.
ಕೀರ್ತಿಕುಮಾರ್ ಪೂಜಾರ (32) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈತನ ಹೆಂಡತಿ ಅರ್ಚನಾ ನಿತ್ಯ ಕಿರುಕುಳ ನೀಡುತ್ತ ಸಾಯಬೇಕು ನೀನು ಎಂದು ಪ್ರೇರೇಪಿಸುತ್ತಿದ್ದಳೆಂದು ಕೀರ್ತಿಕುಮಾರ್ ಅವರ ಸಹೋದರಿ ವಿಜಯಲಕ್ಷ್ಮೀ ಅವರು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
15 ಸಜೀವ ಗುಂಡು ಸಾಗಾಟ: ಮೂವರ ಬಂಧನ: ಅಕ್ರಮವಾಗಿ ಸಜೀವ ಗುಂಡು ಸಾಗಿಸುತ್ತಿದ್ದ ಮೂವರನ್ನು ಸ್ಥಳೀಯ ಉಪನಗರ ಪೊಲೀಸರು ಗುರುವಾರ ರಾತ್ರಿ ಬಂಧಿಸಿ ಅವರಿಂದ 15 ಸಜೀವ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ರೋಣ ನಿವಾಸಿ ಜಯವಂತ್ ಲಾವಣ್ಯ, ಹುಬ್ಬಳ್ಳಿಯ ಗುರುಕೃಪಾ ಅಪಾರ್ಟ್ ಮೆಂಟನ ರಾಮಚಂದ್ರ ಬಾಬ್ಕರ್, ವಿಜಯನಗರದ ಪ್ರತೀಶಕುಮಾರ್ ದೊಡ್ಡಮನಿ ಬಂಧಿತ ಆರೋಪಿಗಳು.
ಇನ್ನೋರ್ವ ಆರೋಪಿ ಉಳ್ಳಾಗಡ್ಡಿ ಓಣಿಯ ಶಶಿಧರ್ ಉಳ್ಳಾಗಡ್ಡಿಮಠ ಪರಾರಿಯಾಗಿದ್ದು. ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಜಯವಂತ್ ಬೇರೆಯವರ ಹೆಸರಿನಲ್ಲಿ ಪರವಾನಗಿ ಇಲ್ಲದೇ ನಗರದ ಉಳ್ಳಾಗಡ್ಡಿ ಓಣಿಯಲ್ಲಿರುವ ಬಂದೂಕು ಅಂಗಡಿಯಿಂದ ಸಜೀವ ಗುಂಡುಗಳನ್ನು ಖರೀದಿಸಿ ಸಾಗಿಸುವಾಗ ಪೊಲೀಸರಿಗೆ ಕೈಗೆ ಸಿಕ್ಕಿ ಬಿದ್ದಿದ್ದಾನೆ. ಈತನನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಿಸಿದಾಗ ಇನ್ನಿತರ ತನ್ನ ಸಹಚರರ ಬಗ್ಗೆ ಮಾಹಿತಿ ನೀಡಿದ್ದಾನೆ.
ಬೈಕ್ ಸವಾರ ಬೆಂಕಿಗಾಹುತಿ: ಬೈಕ್ ಗಳ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಬೆಂಕಿಗಾಹುತಿಯಾದ ಘಟನೆ ಗುರುವಾರ ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ್ ರಸ್ತೆಯ ತಾರಿಹಾಳ ಸಮೀಪ ಜರುಗಿದೆ. ಅಪರಿಚಿತ ಬೈಕ್ ವೊಂದು ಎದುರಿಗೆ ಬರುತ್ತಿದ್ದ ಧಾರವಾಡ ಕೆಲಗೇರಿ ನಿವಾಸಿ ಸುನೀಲ ಮುರಾರಿರಾವ್ ಮಾನೆ ಎಂಬರ ಬೈಕ್ ಗೆ ಡಿಕ್ಕಿ ಹೊಡೆದಿದೆ.
ಇದರಿದಂದ ಡಿಕ್ಕಿ ಹೊಡೆದ ಬೈಕ್ ಗೆ ಬೆಂಕಿ ಹತ್ತಿದೆ. ಬೆಂಕಿಯಲ್ಲಿ ಅಪರಿಚಿತ ಬೈಕ್ ಸವಾರ ಮೃತಪಟ್ಟಿದ್ದಾನೆ. ಈ ಅಪಘಾತದಿಂದ ತೀವ್ರ ಗಾಯಗೊಂಡ ಸುನೀಲ ಮತ್ತು ಹಿಂಬದಿ ಸವಾರ ಆರ್. ಶಾಂತಿಲಾಲ್ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ : ಸಂಚಾರ ನಿಯಮ ಉಲ್ಲಂಘನೆ ಮಾಡಿದ 1030 ಕೇಸ ದಾಖಲಿಸಿ 1,50,500 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.