ಹುಬ್ಬಳ್ಳಿಯಲ್ಲಿ ಹುಡುಗಿಗಾಗಿ ಚಾಕು ಇರಿತ, ಇನ್ನಿತರ ಕ್ರೈಂ ಸುದ್ದಿಗಳು
ಹುಡುಗಿಗಾಗಿ ಯುವಕನಿಗೆ ಚಾಕು ಇರಿತ, ಎರಡು ಸರಗಳ್ಳತನ, ಪತಿಯನ್ನೇ ಹತ್ಯೆ ಮಾಡಿದ ಪತ್ನಿ ಇವೆಲ್ಲ ಕ್ರೈಂ ಸುದ್ದಿಗಳು ಅವಳಿ ನಗರ ಧಾರವಾಡ ಮತ್ತು ಹುಬ್ಬಳ್ಳಿಯಲ್ಲಿ ನಡೆದಿವೆ.
ಹುಬ್ಬಳ್ಳಿ, ನವೆಂಬರ್, 17 : ನಗರದ ಮಂಟೂರ ರಸ್ತೆಯಲ್ಲಿ ಹುಡುಗಿಯ ವಿಷಯದಲ್ಲಿ ಎರಡು ಕುಟುಂಬಗಳು ಹೊಡೆದಾಡಿಕೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಎರಡೂ ಕುಟುಂಬದ 10 ಜನರು ಗಾಯಗೊಂಡಿದ್ದಾರೆ.
ಮಹ್ಮದ್ ಜಮೀವುಲ್ಲಾ (32) ಎಂಬಾತನಿಗೆ ಆಶೀಫ್ ಎಂಬಾತನು ಎರಡೂ ಕುಟುಂಬಗಳ ನಡುವೆ ನಡೆಯುತ್ತಿದ್ದ ಘರ್ಷಣೆಯ ಸಂದರ್ಭದಲ್ಲಿ ಚಾಕುವಿನಿಂದ ಇರಿದಿದ್ದಾನೆ. ಇರಿತದಿಂದ ಗಂಭೀರ ಗಾಯಗೊಂಡ ಮಹ್ಮದನನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೆರಡು ಸರಗಳ್ಳತನ: ನ.16 ರಂದು ಸಂಜೆ 5ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೇಶವನಗರದ ನಿವಾಸಿ ಸುಧಾ ವೇದವ್ಯಾಸ ಕೊರಲಹಳ್ಳಿ ಎನ್ನುವರ 12 ಗ್ರಾಂ ಚೈನ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ನ.16 ಇದೇ ಪೊಲೀಸ್ ಠಾಣೆ ವ್ಯಾಪ್ತಿಯ ಶಾಂತಿನಗರ ದಾಸನಕೊಪ್ಪ ಸರ್ಕಲ್ ನಿವಾಸಿ ಮಂಗಲಾ ಶಾಂತವೀರಪ್ಪ ಕೋಟೂರ ಅವರ 40 ಗ್ರಾಂ ತೂಕದ ಬಂಗಾರದ ಮಂಗಳಸೂತ್ರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಪತ್ನಿಯಿಂದ ಪತಿಯ ಕೊಲೆ: ಪ್ರತಿನಿತ್ಯ ಮನೆಗೆ ಕುಡಿದು ಬರುತ್ತಿರುವುದರಿಂದ ಬೇಸತ್ತ ಪತ್ನಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯ ವ್ಯಾಪ್ತಿಯ ಉಣಕಲ್ ವಡ್ಡರಗೇರಿಯಲ್ಲಿ ನಡೆದಿದೆ.
ಕಂದಿಲು, ಕಲ್ಲಿನಿಂದ ಹೊಡೆದು ಕತ್ತು ಹಿಚುಕಿ ಕೊಲೆ ಮಾಡಲಾಗಿದೆ ಎಂದು ಭೈರಿದೇವರಕೊಪ್ಪದ ಕರಿಯಪ್ಪ ಭೀಮಪ್ಪ ಶಿಶುವಿನಹಳ್ಳಿ ಎನ್ನುವರು ಪೊಲೀಸರಿಗೆ ದೂರ ನೀಡಿದ್ದಾರೆ.
ದಂಡ: ಸಂಚಾರ ನಿಯಮ ಉಲ್ಲಂಘನೆ ಮಾಡಿದ 717 ಕೇಸ ದಾಖಲಿಸಿ 80,200 ರೂ.ದಂಡ ವಸೂಲಿ ಮಾಡಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.