ಹುಬ್ಬಳ್ಳಿ ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಬಂದ್
ಐನೂರು- ಸಾವಿರ ರು ಬ್ಯಾನ್ ನಿಂದಾಗಿ ರೈತರಿಗೆ ಹಣ ನೀಡಲು ಹಣದ ಸಮಸ್ಯೆ ಉದ್ಭವಿಸಿರುವುದರಿಂದ ಹುಬ್ಬಳ್ಳಿ ಎಪಿಎಂಸಿಯು ನ.18ರಿಂದ ಬಂದ್ ಮಾಡಲಾಗಿದೆ. ಆದ್ದರಿಂದ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ತರದಂತೆ ಅಧಿಕಾರಿಗಳು ಕೋರಿದ್ದಾರೆ.
ಹುಬ್ಬಳ್ಳಿ, ನವೆಂಬರ್,18 : ಮೊದಲೇ ಬರಗಾಲದ ಭೀತಿಯಿಂದ ಹಾಗೂ ನೋಟಿನ ರದ್ದಿನಿಂದ ಕಂಗೆಟ್ಟಿರುವ ರೈತ ಸಮುದಾಯಕ್ಕೆ ನಗರದ ಎಪಿಎಂಸಿ ಮತ್ತೊಂದು ಆಘಾತ ನೀಡಿದೆ.
ಕೇಂದ್ರ ಸರಕಾರ 500, 1000 ರೂ. ನೋಟುಗಳನ್ನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಎಪಿಎಂಸಿಯಲ್ಲಿ ಚಿಲ್ಲರೆ ಸಮಸ್ಯೆ ಉದ್ಭವಿಸುತ್ತಿರುವುದರಿಂದ ನ.18 ರಿಂದ ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳ ಮಾರಾಟವನ್ನು ಬಂದ್ ಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರು ತಮ್ಮ ಉತ್ಪನ್ನಗಳ ಮಾರಾಟಗಳಿಗೆ ಚೆಕ್ ಪಡೆಯುತ್ತಿಲ್ಲ. ನಗದು ಹಣವನ್ನೇ ಕೊಡಿ ಎಂದು ಹಠ ಮಾಡುತ್ತಿದ್ದಾರೆ ಇದರಿಂದ ಎಪಿಎಂಸಿಯಲ್ಲಿ ಮಾರಾಟ ಬಂದ್ ಮಾಡಲಾಗಿದೆ ಎಂದು ಎಪಿಎಂಸಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ, ಗೌರವ ಕಾರ್ಯದರ್ಶಿ ಬಸವರಾಜ ಯಕಲಾಸಪುರ ತಿಳಿಸಿದ್ದಾರೆ.
ವ್ಯಾಪಾರಸ್ಥರಿಗೆ ಮತ್ತು ರೈತರಿಗೆ ಹಣ ಕೊಡಲು ಬ್ಯಾಂಕ್ ನಿಂದ ಸಿಗುತ್ತಿಲ್ಲ. ಎಪಿಎಂಸಿ ಕಾರ್ಯದರ್ಶಿಗಳು ರೈತರ ಖಾತೆಗೆ ಆನ್ ಲೈನ್ ನಲ್ಲಿ ಪಾವತಿ ಮಾಡುವಂತೆ ಸೂಚಿಸಿದ್ದಾರೆ.
ಆದರೆ ರೈತರು ಆನಲೈನ್ ವರ್ಗಾವಣೆ ಬೇಡ ಚೆಕ್ ಬೇಡ ನಗದು ಹಣವನ್ನೇ ಕೊಡಿ ಎಂದು ದುಂಬಾಲು ಬೀಳುತ್ತಿದ್ದಾರೆ. ಬ್ಯಾಂಕ್ ನಿಂದ ವಾರಕ್ಕೆ ಕೇವಲ 50 ಸಾವಿರ ರೂ. ಮಾತ್ರ ತೆಗೆದುಕೊಳ್ಳಲು ಅವಕಾಶವಿದೆ. ಇದರಿಂದ ಎಲ್ಲ ರೈತರಿಗೂ ನಗದು ಕೊಡಲು ಸಾಧ್ಯವಾಗುತ್ತಿಲ್ಲ.
ಹೀಗಾಗಿ ಬ್ಯಾಂಕ್ ನಿಂದ ಸಮರ್ಪಕವಾಗಿ ನಗದು ಹಣ ಸಿಗುವವರೆಗೂ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವುದಿಲ್ಲ ಹೀಗಾಗಿ ರೈತ ಬಾಂಧವರು ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಬಾರದು ಎಂದು ಗಂಗನಗೌಡ ಕೋರಿದ್ದಾರೆ.