ಹುಬ್ಬಳ್ಳಿ-ಧಾರವಾಡ ಪೌರಕಾರ್ಮಿಕರಿಗೆ ನಿವೇಶನ ಹಂಚಿಕೆ
ಹುಬ್ಬಳ್ಳಿ,ಜನೇವರಿ, 3 : ಹುಬ್ಬಳ್ಳಿ -ಧಾರವಾಡವಂತಹ ಮಹಾನಗರದ ಪೌರಕಾರ್ಮಿಕರಿಗೆ ಉಚಿತ ನಿವೇಶನ ಪತ್ರಗಳನ್ನು ವಿತರಿಸಲಾಯಿತು. ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ವಿತರಿಸಿದರು.
ನವನಗರದ ಡಾ. ಬಿ. ಅರ್.ಅಂಬೇಡ್ಕರ್ ಭವನದಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಖಾಯಂ ಪೌರಕಾರ್ಮಿಕರಿಗೆ ಉಚಿತ ನಿವೇಶನಗಳ ಹಕ್ಕುಪತ್ರ ವಿತರಣಾ ಸಮಾರಂಭ ಉದ್ಛಾಟಿಸಿ ಮಾತನಾಡಿ, ಹುಬ್ಬಳ್ಳಿ -ಧಾರವಾಡವಂತಹ ಮಹಾನಗರದಲ್ಲಿ ನಗರದ ಸ್ವಚ್ಛತೆಗಾಗಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಕೆಲಸವನ್ನು ನಾವುಗಳು ಯಾರೂ ಮರೆಯುವಂತಿಲ್ಲ.
ಇಂತಹ ಪೌರ ಕಾರ್ಮಿಕರು ನಿಜವಾದ ಕಾಯಕಯೋಗಿಗಳು ಇವರ ಅಭ್ಯುದಯಕ್ಕಾಗಿ ಇಂದು ಉಚಿತ ನಿವೇಶನಗಳನ್ನು ಹಂಚುತ್ತಿರುವದು ಸಂತಸದ ವಿಷಯವಾಗಿದೆ ಎಂದು ಅವರು ಹೇಳಿದರು.
ಪೌರಕಾರ್ಮಿಕರ ವೇತನವನ್ನು 7000 ದಿಂದ 18,000 ರುಗೆ ಹೆಚ್ಚಿಸಲಾಗಿದೆ. ಅಲ್ಲದೆ ಪೌರ ಕಾರ್ಮಿಕರಿಗೆ ಲಘು ಉಪಹಾರ ಹಾಗೂ ಬಿಸಿಯೂಟ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಹಿಂದುಳಿದ ವರ್ಗಗಳ ಜನರು ಮಾಡಿರುವ ವಿವಿಧ ಸಾಲಗಳನ್ನು ಸರಕಾರ ಮನ್ನಾಮಾಡಿದೆ ಎಂದು ಅವರು ತಿಳಿಸಿದರು.
ಪೌರ ಕಾರ್ಮಿಕರಿಗೆ ಹಂಚಿರುವ ನಿವೇಶನಗಳಿಗೆ ಮನೆ ಕಟ್ಟಲು ಸರಕಾರ 7.50 ಲಕ್ಷ ಹಣವನ್ನು ನೀಡಲಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಿ. ಅಲ್ಲದ ಮನೆ ನಿರ್ಮಿಸಲು ಅಲ್ಪ ಬಡ್ಡಿದರದಲ್ಲಿ 20 ಲಕ್ಷದ ವರೆಗೂ ಸಾಲ ತೆಗೆಯಲು ಮಹಾನಗರ ಪಾಲಿಕೆ ಸಹಾಯ ಮಾಡಲಿದೆ ಎಂದು ಅವರು ಹೇಳಿದರು.
ಹುಬ್ಬಳ್ಳಿ- ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಅಬ್ಬಯ್ಯ ಪ್ರಸಾದ ಮಾತನಾಡಿ, ಪೌರಕಾರ್ಮಿಕರು ನಗರಕ್ಕೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಸೇವೆ ಇಲ್ಲದಿದ್ದರೆ ನಗರ ಸುಂದರವಾಗಿ ಶುಭ್ರವಾಗಿ ಇರುತ್ತಿರಲಿಲ್ಲ. ಇಂತಹ ಪೌರ ಕಾರ್ಮಿಕರು ವಿವಿಧ ಕಠಿಣ ಪರಿಸ್ಥಿತಿಗಳಲ್ಲಿ ಕಾರ್ಯ ನಿರ್ವನಿಸುತ್ತಿದ್ದಾರೆ.
ಇವರಿಗೆ ಇದರಿಂದ ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಇವರ ಜೀವನಾವಧಿಯು ಕಡಿಮೆಯಾಗುತ್ತದೆ. ಇಂತಹ ಕಾರ್ಮಿಕರ ಬಗ್ಗೆ ನಮಗೆ ಗೌರವಿದೆ. ಇಂದು 122 ನಿವೇಶನಗಳ ಪೈಕಿ 94 ನಿವೇಶನಗಳನ್ನು ಇವರಿಗಾಗಿ ಹಂಚಲಾಗುತ್ತಿದೆ.
ಹಾಗೆಯೇ ಇತರ ಪೌರಕಾರ್ಮಿಕಕರ ಕುಟುಂಬಗಳಿಗೆ ಆಶ್ರಯ ಯೋಜನೆಯಡಿಯಲ್ಲಿ 320 ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ. ಇದಕ್ಕಾಗಿ 2 ಎಕರೆ ಜಮೀನನ್ನು ಸಹ ಗುರುತಿಸಿದ್ದು ಆಶ್ರಯ ಕಮಿಟಿಯ ರೆಜುಲ್ಯೂಷನ್ ಪಾಸು ಮಾಡಿದೆ ಎಂದು ತಿಳಿಸಿದರು.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯಕ್ತ ಸಿದ್ದಲಿಂಗಯ್ಯ ಮಾತನಾಡಿ, ಹುಬ್ಬಳ್ಳಿ ನವನಗರದ ಸರ್ವೇನಂ. 84 ರಲ್ಲಿನ 3 ಎಕರೆ 13 ಗುಂಟೆ ಜಾಗದಲ್ಲಿ ಒಟ್ಟು 122 ಜನ ಪೌರ ಕಾರ್ಮಿಕರಿಗೆ ನಿವೇಶನಗಳು ಹಂಚಿಕೆಯಾಗಿದ್ದು.
ಇದರಲ್ಲಿ 94 ಜನರಿಗೆ ನಿವೇಶನಗಳ ಹಕ್ಕು ಪತ್ರಗಳನ್ನು ನೀಡಲಾಗುತ್ತಿದೆ. ನಿವೇಶನವು 20=30 ಅಡಿಗಳಾಗಿರುತ್ತದೆ. ಪೌರ ಕಾರ್ಮಿಕರ ಜೇಷ್ಠತೆಯ ಆದಾರದ ಮೇಲೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ.
ಅಲ್ಲದೆ ಮುಂದಿನ ದಿನಮಾನಗಳಲ್ಲಿ ಪೌರ ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು ಅನುಕೂಲಕರವಾಗುವಂತೆ ಗೃಹ ಸಾಲಗಳು ಬ್ಯಾಂಕಿನಿಂದ ಒದಗುವಂತೆ ಮಾಡಲಾಗುವುದು ಎಂದು ತಿಳಿಸಿದರು.