ಕೆಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಹುಬ್ಬಳ್ಳಿಯಲ್ಲಿ ನಾಲ್ವರ ಬಂಧನ
ಹುಬ್ಬಳ್ಳಿ, ಸೆಪ್ಟೆಂಬರ್, 23 : ನಗರದಲ್ಲಿ ನಡೆಯುತ್ತಿರುವ 5ನೇ ಆವೃತ್ತಿಯ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಬೆಟ್ಟಿಂಗ್ ಜ್ವರ ಶುರುವಾಗಿದ್ದು, ಈ ಸಂಬಂಧ ಈಗಾಗಲೇ ಜೂಜಾಟದಲ್ಲಿ ತೊಡಗಿದ್ದ ನಾಲ್ವರನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ರಾಜನಗರದಲ್ಲಿರುವ ಕೆಎಸ್ ಸಿಎ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ ಹರಿಯಾಣ ಮೂಲದ ನಾಲ್ವರನ್ನು ಅಶೋಕ ನಗರ ಪೊಲೀಸ್ ಠಾಣೆಯ ಪಿಐ ಜಗದೀಶ ಹಂಚಿನಾಳ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ.
ದೂರರವಾಣಿ ಮುಖಾಂತರ ಬೆಟ್ಟಿಂಗ್ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯೊಂದಿಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಬಂಧಿತರನ್ನು ಹರಿಯಾಣ ರಾಜ್ಯದ ಫತ್ಹೇಬಾದ್ ಜಿಲ್ಲೆಯ ಟೋಹ್ನಾ ನಿವಾಸಿಗಳಾದ ದಿವಾಕರ್ ಮೋದಿ, ವಿಕಾಸ ವರ್ಮ, ಸಂಜಯಕುಮಾರ್ ಆರೋರಾ ಹಾಗೂ ಪಂಕಜ್ ಕುಮಾರ್ ಆರೋರಾ ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ 24 ಸಾವಿರ ರೂ. ನಗದು ಮತ್ತು ನಾಲ್ಕು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ತಂಗಿದ್ದ ಹೋಟೇಲ್ ನಲ್ಲಿಯೂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬೆಟ್ಟಿಂಗ್ ರಾಜಧಾನಿ : ಕ್ರಿಕೆಟ್ ಬೆಟ್ಟಿಂಗ್ ರಾಜಧಾನಿ ಹುಬ್ಬಳ್ಳಿಯಲ್ಲಿ ಈ ಹಿಂದೆ ಐಪಿಎಲ್ ಟೂರ್ನಿ ನಡೆದಾಗ ಡಿಸಿಪಿಯೊಬ್ಬರು ಸುದ್ದಿ ವಾಹಿನಿಯೊಂದರ ಚುಟುಕು ಕಾರ್ಯಾಚರಣೆಯಲ್ಲಿ ಲಂಚದ ಹಗರಣದಲ್ಲಿ ಸಿಲುಕಿಕೊಂಡು ಅಮಾನತ್ತಾಗಿದ್ದರು. ಇವರೊಂದಿಗೆ ನಗರದ ಸುಮಾರು 7 ಕ್ಕೂ ಹೆಚ್ಚು ಕಾರ್ಯನಿರತ ಪತ್ರಕರ್ತರನ್ನೂ ಸಿಐಡಿ ವಿಚಾರಣೆಗೊಳಪಡಿಸಿತ್ತು.