ಹುಬ್ಬಳ್ಳಿ: ಸಿದ್ಧಾರೂಢಮಠದಲ್ಲಿ ಸ್ವಾಮೀಜಿಗಳ ಧರಣಿ
ಹುಬ್ಬಳ್ಳಿ, ಫೆಬ್ರವರಿ, 20 : ಸಿದ್ಧಾರೂಢಮಠದ ಜಾತ್ರಾ ಮಹೋತ್ಸವ ಅಂಗವಾಗಿ ಪೂರ್ವಭಾವಿ ಸಭೆಯಿಂದ ಹೊರಗಿಟ್ಟು ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಿದ್ಧಾರೂಢಮಠದಲ್ಲಿ ಭಾನುವಾರ ರಾತ್ರಿ ಐವರು ಸ್ವಾಮೀಜಿಗಳು ಧರಣಿ ನಡೆಸಿ ಮಠದ ಟ್ರಸ್ಟ್ ಕಮೀಟಿ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ತಮ್ಮನ್ನು ಅವಮಾನ ಮಾಡಿದ್ದಾರೆ ಎಂದು ಆಪಾದಿಸಿ ರಾಣಿಬೆನ್ನೂರು ತಾಲೂಕಿನ ಐರಣಿ ಮಠದ ಧರ್ಮದರ್ಶಿ ಬಾಬಣ್ಣ ಶೆಟ್ಟರ್ ನೇತೃತ್ವದಲ್ಲಿ ಐವರು ಸ್ವಾಮೀಜಿಗಳು ಮಠದ ಎದುರು ಧರಣಿ ಮಾಡಿದರು.
ಇದರಿಂದ ಮಠದ ಟ್ರಸ್ಟ್ ಕಮೀಟಿಯವರು ಆಯೋಜಿಸಿದ್ದ ಅಜೀವ ಸದಸ್ಯರ ವಾರ್ಷಿಕ ಸಭೆಗೆ ಬಂದ ಸದಸ್ಯರಲ್ಲಿ ಕೆಲ ಕಾಲ ಗೊಂದಲ ಉಂಟಾಯಿತು. ಇದೇ ವಾರವೇ ಶ್ರೀ ಮಠದ ಜಾತ್ರಾ ಮಹೋತ್ಸವ ಆಚರಿಸಲಾಗುತ್ತಿದ್ದು, ಈ ಸಂಬಂಧ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಆದರೆ, ಸಭೆಯಲ್ಲಿ ಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಧರಣೇಂದ್ರ ಜವಳಿ ಸಭೆಯಲ್ಲಿ ಸದಸ್ಯರು ಮಾತ್ರ ಹಾಜರಿರಬೇಕು. ಉಳಿದವರು ಹೊರಗಡೆ ನಡೆಯಿರಿ ಎಂದು ಮನವಿ ಮಾಡಿದರು. [ಫೆ.19 ರಿಂದ ಹುಬ್ಬಳ್ಳಿ ಸಿದ್ಧಾರೂಢಮಠದ ಶಿವರಾತ್ರಿ ಉತ್ಸವ]
ಇದರಿಂದ ಕೋಪಗೊಂಡ ಸ್ವಾಮೀಜಿಗಳು ನಮ್ಮನ್ನು ಅವಮಾನಿಸಲಾಗಿದೆ ಹಾಗೂ ಮಠದ ಸಂಪ್ರದಾಯವನ್ನೇ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಭೆ ಬಹಿಷ್ಕರಿಸಿದರು.
ಐರಣಿ ಹೊಳಿಮಠದ ಕಿರಿಯ ಸ್ವಾಮೀಜಿ ಚನ್ನಬಸವರಾಜ ಶ್ರೀ, ಶಿವಬಸವ ಶ್ರೀ, ಮತ್ತಿಕಟ್ಟಿ ಶ್ರೀ ಸೇರಿದಂತೆ ಇನ್ನಿತರ ಐವರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ನಂತರ ಮಠದ ಚೇರಮನ್ ಧರಣೇಂದ್ರ ಜವಳಿ ಕ್ಷಮೆ ಕೇಳಿದ ಬಳಿಕ ಸ್ವಾಮೀಜಿಗಳು ತಮ್ಮ ಧರಣಿಯನ್ನು ಹಿಂತೆಗೆದುಕೊಂಡರು.