ನಾರಿಮನ್ ರನ್ನು ವೃದ್ಧರು ಎಂದಿದ್ದ ಸಿದ್ದು, ಈಗ ಬದಲಾಯಿಸಲಿ
ಹುಬ್ಬಳ್ಳಿ, ಸೆಪ್ಟೆಂಬರ್ 8: ಈ ಹಿಂದೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ವಕೀಲ ಫಾಲಿ ನಾರಿಮನ್ ಅವರನ್ನು 87 ವರ್ಷದ ವೃದ್ಧರು ಎಂದು ವ್ಯಂಗ್ಯವಾಡಿದ್ದರು. ಈಗ ತಾವೇ ಮುಖ್ಯಮಂತ್ರಿಗಳಾಗಿದ್ದಾರೆ. ಆದ್ದರಿಂದ ಮೊದಲು ನಾರಿಮನ್ ಅವರನ್ನು ಬದಲಾಯಿಸಬೇಕು ಎಂದು ಸಂಸದ, ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರತಾಪ ಸಿಂಹ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಅವರು ಮಾತನಾಡಿದರು. ಮೂರೂವರೆ ವರ್ಷಗಳ ಹಿಂದೆ ನೀಡಿದ್ದ ಹೇಳಿಕೆ ಈಗೇಕೆ ಸಿಎಂ ಸಿದ್ದುಗೆ ನೆನಪಾಗುತ್ತಿಲ್ಲ ಎಂದು ವ್ಯಂಗ್ಯವಾಡಿದ ಸಂಸದ ಪ್ರತಾಪ ಸಿಂಹ, ರಾಜ್ಯವನ್ನು ಪ್ರತಿನಿಧಿಸುತ್ತಿರುವ ವಕೀಲರಿಂದ ಕಾವೇರಿ ನೀರಿನ ಸಮಸ್ಯೆ ಉಲ್ಬಣವಾಗಿದೆ. ನಾಳಿನ ಕರ್ನಾಟಕ ಬಂದ್ ಗೆ ಪಕ್ಷದಿಂದ ಸಂಪೂರ್ಣ ಬೆಂಬಲ ನೀಡಲಾಗುವುದು ಎಂದರು.[ಕಾವೇರಿ ಕೇಸ್ : ನಾರಿಮನ್ ಆಯ್ಕೆ ಮಾಡಿದ್ದು ಯಾರು?]
ಚಿತ್ರನಟಿ, ಮಾಜಿ ಸಂಸದೆ ರಮ್ಯಾ ನೀಡಿದ ಹೇಳಿಕೆ ಕುರಿತು ಮಾತನಾಡಿ, ಅವರನ್ನು ಮಂಡ್ಯದ ಜನರೇ ತಿರಸ್ಕರಿಸಿದ್ದಾರೆ. ಅವರ ಬಗ್ಗೆ ಮಾತನಾಡಲು ಯೋಗ್ಯರಲ್ಲ ಎಂದರು. ಬಿಜೆಪಿ ಮಹಾನಗರ ವಕ್ತಾರ ಹನುಮಂತ ದೊಡ್ಡಮನಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಒಕ್ಕೂಟ ಬೆಂಬಲ: ನಾಳಿನ ಕರ್ನಾಟಕ ಬಂದ್ ಗೆ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟ ಬೆಂಬಲ ನೀಡಿದೆ ಎಂದು ಒಕ್ಕೂಟದ ಅಧ್ಯಕ್ಷ ಕುಮಾರಸ್ವಾಮಿ ಹಿರೇಮಠ, ಪ್ರಧಾನ ಕಾರ್ಯದರ್ಶಿ ವಿನಯಕುಮಾರ ಪಾಟೀಲ ಹೇಳಿದ್ದಾರೆ.[ಗಣಪತಿ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ : ಪ್ರತಾಪ್]
ನಗರದ ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳಸಾ- ಬಂಡೂರಿ ಹೋರಾಟದ ಸಮಯದಲ್ಲಿ ಕಾವೇರಿ ಪ್ರದೇಶದ ರೈತರು ಬೆಂಬಲ ಸೂಚಿಸಿದ್ದರು. ಆದ್ದರಿಂದ ಸೆ.9ರ ಶುಕ್ರವಾರದಂದು ಬೆಳಗ್ಗೆ 6ರಿಂದ ಮಧ್ಯಾಹ್ನ 1 ಗಂಟೆಯವರೆಗೂ ಬಂದ್ ಮಾಡಲಾಗುವುದು ಎಂದರು.[ಮೈಸೂರಿನಲ್ಲಿ ಇನ್ನಷ್ಟು 5ಜಿ ಹಾಟ್ ಸ್ಪಾಟ್ ಗಳು : ಪ್ರತಾಪ್ ಸಿಂಹ]
ರಾಷ್ಟ್ರೀಯ ಹೆದ್ದಾರಿಯನ್ನು ಸಂಪೂರ್ಣ ಬಂದ್ ಮಾಡುತ್ತೇವೆ ಎಂದ ಅವರು, ವಿವಿಧ ಸಂಘಟನೆಗಳು ನಮಗೆ ಬೆಂಬಲ ನೀಡಿವೆ ಎಂದರು. ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಮಧ್ಯ ಪ್ರವೇಶಕ್ಕೆ ಒತ್ತಾಯಿಸಬೇಕು ಎಂದರು.