ಹೆಬ್ಬಳ್ಳಿ ಜಿ.ಪಂ. ಕ್ಷೇತ್ರದ ಉಪಚುನಾವಣೆಗೆ ದಿನಾಂಕ ಪ್ರಕಟ
ಹುಬ್ಬಳ್ಳಿ, ನವೆಂಬರ್, 4 : ಕಳೆದ ಜೂನ್ 18ರಂದು ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶಗೌಡ ಗೌಡರ ಕೊಲೆಯಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆಯ ದಿನಾಂಕ ಪ್ರಕಟವಾಗಿದೆ. ನವೆಂಬರ್ 7ಕ್ಕೆ ಅಧಿಸೂಚನೆ ಹೊರಡಿಸಲಿದ್ದು, ಅಂದಿನಿಂದ ನಾಮಪತ್ರ ಸಲ್ಲಿಸಬಹುದಾಗಿದೆ.
ನವೆಂಬರ್ 10 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.11ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನ.14ರಂದು ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾಗಿದ್ದು, ನ.20ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ ಎಂದು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಒಟ್ಟು 22 ಜಿ.ಪಂ. ಕ್ಷೇತ್ರಗಳನ್ನು ಹೊಂದಿರುವ ಹುಬ್ಬಳ್ಳಿ ಜಿಲ್ಲಾ ಪಂಚಾಯಿತಿ ಅಧಿಕಾರ ಚುಕ್ಕಾಣಿಯನ್ನು ಬಿಜೆಪಿ ನಡೆಸುತ್ತಿದೆ. ಯೋಗೇಶಗೌಡರ ಸಾವಿನಿಂದ ಬಹುಮತ ಕಳೆದುಕೊಂಡು ಅಧಿಕಾರಕಳೆದುಕೊಳ್ಳವ ಭೀತಿಯಲ್ಲಿದ್ದ ಬಿಜೆಪಿ ಪಕ್ಷೇತರ ಅಭ್ಯರ್ಥಿ ಶಿವಾನಂದ ಕರಿಗಾರ ಅವರ ಬೆಂಬಲದಿಂದ ಜಿ.ಪಂ. ಗದ್ದುಗೆ ಹಿಡಿದಿದ್ದು. ಮತ್ತೆ ಸ್ವತಂತ್ರವಾಗಲು ಈ ಉಪಚುನಾವಣೆಯಲ್ಲಿ ಬಿಜೆಪಿಗೆ ಗೆಲ್ಲಲೇ ಬೇಕಾದ ಪರಿಸ್ಥಿತಿ ಎದುರಾಗಿದೆ.
ಇನ್ನು ಕಾಂಗ್ರೆಸ್ 10 ಸದಸ್ಯರನ್ನು ಹೊಂದಿದ್ದು ಈ ಉಪಚುನಾವಣೆಯಲ್ಲಿ ಗೆದ್ದು ಜಿ.ಪಂ. ಗದ್ದುಗೆ ಏರುವ ಕನಸು ಕಾಣುತ್ತಿದೆ. ಹೀಗಾಗಿ ಈ ಉಪಚುನಾವಣೆಯು ಕಾಂಗ್ರೆಸ್ ಮತ್ತು ಬಿಜೆಪಿಯ ನಡುವೆ ಭಾರೀ ಜಿದ್ದಾಜಿದ್ದಿಯಾಗಲಿದೆ.
ಯೋಗೇಶಗೌಡರ ಅನುಕಂಪದ ಮತಗಳು ತಮ್ಮ ಪಕ್ಷಕ್ಕೆ ಗೆಲುವು ತಂದು ಕೊಡಲಿವೆ ಎಂದು ಬಿಜಿಪಿ ಆತ್ಮವಿಶ್ವಾದಲ್ಲಿದೆ. ಆದರೆ, ಅಂತಿಮವಾಗಿ ಗೆಲ್ಲುವ ಪಕ್ಷ ಯಾವುದು ಎನ್ನುವುದನ್ನು ಮತದಾರರೇ ನಿರ್ಧರಿಸಲಿದ್ದಾರೆ.