ಧಾರವಾಡ-ಹುಬ್ಬಳ್ಳಿಯಲ್ಲಿ ನಡೆದ ಕ್ರೈಂ ಸುದ್ದಿಗಳು
ಧಾರವಾಡ/ಹುಬ್ಬಳ್ಳಿ, ಡಿಸೆಂಬರ್, 7 : ಅವಳಿ ನಗರ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ನಡೆದಿರುವ ವಿವಿಧ ರೀತಿಯ ಕ್ರೈಂಗಳ ಸುದ್ದಿಗಳು ಇಲ್ಲಿವೆ. ಧಾರವಾಡ ಗೌಳಿ ಗಲ್ಲಿಯ ಮಹಿಳೆಯೋರ್ವಳು ನಾಪತ್ತೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧಾರವಾಡ ಗೌಳಿ ಗಲ್ಲಿಯ 30 ವರ್ಷದ ಪದ್ಮಾ ಎಂಬ ಮಹಿಳೆ ನ.26 ರಂದು ಬ್ಯಾಂಕಿಗೆ ಹೋಗಿ ಬರುತ್ತೇನೆಂದು ಮನೆಯಲ್ಲಿ ಹೇಳಿ ಹೋಗಿದ್ದು. ಪುನಃ ಮನೆಗೆ ಬಾರದೆ ನಾಪತ್ತೆಯಾಗಿದ್ದಾಳೆ.
ಈ ಕುರಿತು ಕಾಣೆಯಾದ ಪದ್ಮಾ (30) ಪತಿ ಪರಶುರಾಮ ಯಲ್ಲಪ್ಪ ಬಡ್ಲಿ ಡಿಸೆಂಬರ್ 06 ರಂದು ವಿದ್ಯಾಗಿರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ಪತ್ನಿ ಪದ್ಮಾ (30) ನ.26 ರ ಬೆಳಗ್ಗೆ 11-30 ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ವ್ಯಕ್ತಿಯ ದರೋಡೆ: ಹುಬ್ಬಳ್ಳಿ ಗದಗ ರಸ್ತೆಯ ರೈಲ್ವೆ ಕ್ವಾಟರ್ಸ್ ನಿವಾಸಿಯೊಬ್ಬರನ್ನು ನ.20 ರಂದು ಮದುವೆಗೆಂದು ಹೋದಾಗ ಅಪರಿಚಿತರು ದೋಚಿದ ಪ್ರಕರಣ ಡಿ.6 ರಂದು ಬೆಂಡಿಗೇರಿ ಪೋಲೀಸ್ ಠಾಣೆಯಲ್ಲಿ ದಾಖಲಾಗಿದೆ.
ರವಿ ಶೇಖರ ಕಾಳೆ ಎಂಬುವವರು ಬೆಂಗಳೂರು ರಸ್ತೆಯ ಬಂಕಾಪುರಗೆ ಮದುವೆಗೆಂದು ಹೋಗಿದ್ದರು. ರಾತ್ರಿ 11-30 ರ ಸುಮಾರಿಗೆ ರಸ್ತೆ ಬದಿ ಮೂತ್ರ ವಿಸರ್ಜಿಸುತ್ತಿದ್ದಾಗ ಆಟೋ ಮತ್ತು ಬೈಕ್ ನಲ್ಲಿ ಬಂದ ಐದಾರು ಅಪರಿಚಿತ ವ್ಯಕ್ತಿಗಳು ಇವರ ಬಳಿ ಇದ್ದ 38,500 ರೂ. ಮೌಲ್ಯದ ಮೊಬೈಲ್ ಹಾಗೂ 1200 ರೂ. ನಗದು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ನಾಪತ್ತೆಯಾದ ಬಾಲಕರು ಮರಳಿ ಮನೆಗೆ: ನ.25 ರಂದು ಸೋನಿಯಾ ಗಾಂಧಿ ನಗರ ಮನೆಯಿಂದ 2000 ರೂ. ಹೊಸ 6 ನೋಟುಗಳನ್ನು ಕದ್ದು ಮನೆ ಬಿಟ್ಟು ಓಡಿ ಹೋಗಿದ್ದ ಮೂವರು ಬಾಲಕರು ಬುಧವಾರ ಮರಳಿ ಮನೆಗೆ ಬಂದಿದ್ದಾರೆ.
ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿಗಳು ದುಡ್ಡ ತೆಗೆದುಕೊಂಡು ಮುಂಬಯಿ, ದೆಹಲಿ ರೈಲ್ವೆ ನಿಲ್ದಾಣಗಳಲ್ಲಿ ಓಡಾಡಿ ಬಂದಿದ್ದೇವೆ ಎಂದು ಹೇಳಿದ್ದಾರೆ. ಬಾಲಕರು ಮರಳಿ ಬಂದಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಪಾಲಕರು ಸುಮ್ಮನಾಗಿದ್ದಾರೆ.
ದಂಡ: ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಒಟ್ಟು 530 ಕೇಸ್ ದಾಖಲಿಸಿ, 62,100 ರೂ. ದಂಡವನ್ನು ಟ್ರಾಫಿಕ್ ಪೊಲೀಸರು ವಸೂಲಿ ಮಾಡಿದ್ದಾರೆ.