ಕುಡಿಯುವ ನೀರು ಸರಬರಾಜಿಗೆ ಹಣದ ಕೊರತೆಯಿಲ್ಲ : ಸಿಎಂ
ಹುಬ್ಬಳ್ಳಿ, ನವೆಂಬರ್, 12: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಬಾರಿ ಭೀಕರ ಪರಿಸ್ಥತಿ ಎದುರಾಗಿದೆ. ಬರ ಪರಿಸ್ಥಿತಿ ನಿವಾರಣೆಗೆ ಸರ್ಕಾರ ಸಜ್ಜಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ಹುಬ್ಬಳ್ಳಿ ಮತ್ತು ನವಲಗುಂದ ತಾಲ್ಲೂಕುಗಳಲ್ಲಿ ಬರ ಕಾಮಗಾರಿ ಪರಿಶೀಲಿಸಿ ನಂತರ ರಾತ್ರಿ ನಗರದ ಕಾಟನ್ ಮಾರ್ಕೆಟ್ ನಲ್ಲಿರುವ ಸಾಂಸ್ಕೃತಿಕ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮತಾನಾಡಿದರು.[ಮೈಸೂರು, ಬೆಳಗಾವಿಯಲ್ಲಿ ಸಿಎಂ ಬರ ವೀಕ್ಷಣೆ: ಪರಿಹಾರ ನಿರೀಕ್ಷೆ]
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆಯಿಲ್ಲ. ಜಾನುವಾರುಗಳಿಗೆ ಅಗತ್ಯವಿರುವ ಮೇವು, ಔಷಧಕ್ಕೆ ಸಿದ್ಧತೆ ಮಾಡಿಕೊಳ್ಳಿ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಉದ್ಯೋಗ ಸೃಜನೆ ಕಾರ್ಯ ಚುರುಕುಗೊಳಿಸಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ವಾರಕ್ಕೊಮ್ಮೆ ಪರಿಶೀಲನಾ ಸಭೆ ನಡೆಸಿ ಎಂದು ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಸೂಚಿಸಿದರು.
1 ಲಕ್ಷ 92 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿ
ಧಾರವಾಡ ಜಿಲ್ಲೆಯಲ್ಲಿ ಕಳೆದ ಮುಂಗಾರಿನಲ್ಲಿ 3 ಲಕ್ಷ 33 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. 1 ಲಕ್ಷ 92 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ.
ಶೇ.33 ಕ್ಕೂ ಹೆಚ್ಚು ಕೃಷಿ ಉತ್ಪನ್ನ ನಷ್ಟವಾಗಿದೆ. ಕಂದಾಯ, ತೋಟಗಾರಿಕೆ ಹಾಗೂ ಕೃಷಿ ಇಲಾಖೆಗಳ ಜಂಟಿ ಸಮೀಕ್ಷೆ ನಡೆಸಿ 130 ಕೋಟಿ ರೂಪಾಯಿಗಳ ಬೆಳೆಹಾನಿ ಪರಿಹಾರ ಕೋರಲಾಗಿದೆ. ರಾಜ್ಯಕ್ಕೆ ಒಟ್ಟು 4,656 ಕೋಟಿ ರೂ. ಬೆಳೆ ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಿಎಂ ತಿಳಿಸಿದರು.
ಜನ ಗುಳೆ ಹೋಗುವುದನ್ನು ತಪ್ಪಿಸಿ
ಧಾರವಾಡ ಜಿಲ್ಲೆಯಲ್ಲಿ ಎಂಎನ್ಆರ್ ಇಜಿಎ ಯೋಜನೆಯಡಿ ಒಟ್ಟು 19.55 ಲಕ್ಷ ಮಾನವ ದಿನಗಳ ಸೃಜನೆಯಾಗಬೇಕಿತ್ತು ಆದರೆ ಕೇವಲ 11.25 ಲಕ್ಷ ಮಾನವ ದಿನಗಳನ್ನು ಮಾತ್ರ ಸೃಷ್ಟಿಸಲಾಗಿದೆ.
ಉದ್ಯೋಗ ಸೃಷ್ಟಿಸುವ ಕಾರ್ಯ ಚುರುಕುಗೊಳಿಸಿ ಜನರು ಗುಳೆ ಹೋಗುವದನ್ನು ತಡೆಯಬೇಕು. ಯೋಜನೆಯ ಕೂಲಿ ಹಣವನ್ನು ಕನಿಷ್ಠ 7 ರಿಂದ 10 ದಿನಗಳ ಒಳಗೆ ಕಡ್ಡಾಯವಾಗಿ ಪಾವತಿಸಲೇಬೇಕು ಎಂದು ಸಿಎಂ ಸೂಚಿಸಿದರು.
ಜಿಲ್ಲೆಯಾದ್ಯಂತ ಮೇವು ಬ್ಯಾಂಕುಗಳನ್ನು ತೆರೆದು, ಜಾನುವಾರಗಳಿಗೆ ಅಗತ್ಯವಾಗಿರುವ ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಅಸಮರ್ಪಕ ಕಬ್ಬು ಖರೀದಿಸಿ ಜಾನುವಾರುಗಳಿಗೆ ಮೇವು
ಗಣಿ, ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಮಾತನಾಡಿ, ಧಾರವಾಡದಲ್ಲಿ ಒಟ್ಟು 5 ಸಾವಿರ ಹೆಕ್ಟೇರ್ ಪ್ರದೇಶದ ಕಬ್ಬು ಮಾತ್ರ ಸಮರ್ಪಕವಾಗಿ ಬಂದಿದೆ.
ಉಳಿದ 7 ಸಾವಿರ ಹೆಕ್ಟೇರ್ ಪ್ರದೇಶದ ಕಬ್ಬು ಉತ್ತಮವಾಗಿಲ್ಲ ಅದನ್ನು ಖರೀದಿಸಿ ಜಾನುವಾರುಗಳಿಗೆ ಮೇವಾಗಿ ಒದಗಿಸಲು ಸೂಚಿಸಿದರು.
ಬರಪೀಡಿತ ಪ್ರದೇಶಗಳಿಗೆ ಭೇಟಿ
ಸಭೆಗೂ ಮುನ್ನ ಹುಬ್ಬಳ್ಳಿ ತಾಲ್ಲೂಕಿನ ಭಂಡಿವಾಡ, ಶಿರಗುಪ್ಪಿ, ಕುಂದಗೋಳ ತಾಲ್ಲೂಕಿನ ಯರಗುಪ್ಪಿ, ರೊಟ್ಟಿಗವಾಡ ಗ್ರಾಮಗಳಲ್ಲಿ ಹತ್ತಿ, ಜೋಳ, ಈರುಳ್ಳಿ ಮುಂತಾದ ಬೆಳೆಗಳ ಹಾನಿ ವೀಕ್ಷಿಸಿದರು.
ಯರಗುಪ್ಪಿಯಲ್ಲಿ ಕೆರೆ ನಿರ್ಮಾಣಕ್ಕೆ ಗುರುತಿಸಲಾಗಿರುವ ಸ್ಥಳ ಹಾಗೂ ನವಲುಂದ ತಾಲೂಕಿನ ನಲವಡಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು ವೀಕ್ಷಿಸಿದರು.
ಬರ ಪರಿಸ್ಥಿತಿ ಹಗುರ ಪರಿಗಣಿಸಿದರೆ ಕ್ರಮ: ಸಿದ್ದು ಎಚ್ಚರಿಕೆ
ರಾಜ್ಯದ ಜನತಗೆ ಬರಗಾಲ ಎದುರಿಸುತ್ತಿರುವದನ್ನು ಲಘುವಾಗಿ ಪರಿಗಣಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳಿಗೆ ಸಿಎಂ ಸಿದ್ಧರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ನಗರದ ಸರ್ಕೀಟ್ ಹೌಸ್ ನಲ್ಲಿ ಶನಿವಾರ ಬೆಳಗ್ಗೆ ಬೆಳಗಾವಿಗೆ ಹೋಗುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲಾಧಿಕಾರಿ ಮತ್ತು ಜಿ.ಪಂ. ಸಿಇಓ ಅವರೇ ಬರ ಪರಿಹಾರ ನಿರ್ಲಕ್ಷ್ಯ ಮಾಡಿದರೆ ಹೊಣೆಯಾಗುತ್ತಾರೆ ಎಂದರು.
ಹೆಸ್ಕಾಂ- ಹು.ಧಾ ಪಾಲಿಕೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಳ್ಳಿ
ಸದ್ಯ ಅವಳಿ ನಗರಗಳಿಗೆ 9 ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ. ನಗರಕ್ಕೆ ಕುಡಿಯುವ ನೀರು ಪೂರೈಸುತ್ತಿದ್ದ ನೀರಸಾಗರ ಕೆರೆ ಸಂಪೂರ್ಣ ಬತ್ತಿದೆ. ಸದ್ಯ ಮಲಪ್ರಭಾ ನದಿಯ ನೀರನ್ನು ನೀಡಲಾಗುತ್ತಿದೆ.
ಪದೇ ಪದೇ ವಿದ್ಯುತ್ ಕೈ ಕೊಡುತ್ತಿರುವುದರಿಂದ ನೀರು ಪಂಪ್ ಮಾಡಲು ಆಗುತ್ತಿಲ್ಲ ಎಂಬ ದೂರಿದೆ ಎಂದರು. ಜಲಮಂಡಳಿ, ಹೆಸ್ಕಾಂ ಮತ್ತು ಹು-ಧಾ ಪಾಲಿಕೆ ಅಧಿಕಾರಿಗಳು ಹೊಂದಾಣಿಕೆ ಮಾಡಿಕೊಂಡು ನೀರು ಪೂರೈಸುವಂತೆ ಸೂಚಿಸಿದ್ದೇನೆ ಎಂದರು.
ತನ್ವೀರ್ ಸೇಠ್ ಪ್ರಕರಣ ಹೈಕಮಾಂಡ್ ನೋಡಿಕೊಳ್ಳುತ್ತದೆ
ತನ್ವೀರ ಸೇಠ್ ಪ್ರಕರಣವನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ನಾನೂ ಕೂಡ ವರದಿ ಕೇಳಿದ್ದೇನೆ. ಇಂದು ಮತ್ತೊಮ್ಮೆ ಮಾತನಾಡುತ್ತೇನೆ ಎಂದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ, ಶಾಸಕ ಎನ್.ಎಚ್. ಕೋನರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.
ಮೇವು ಪೂರೈಕೆಗೆ ಕ್ರಮ: ಸಚಿವ ಕೃಷ್ಣಬೈರೇಗೌಡ
ಕೃಷಿ ಸಚಿವ ಕೃಷ್ಣ ಭೈರೇಗೌಡ ಮಾತನಾಡಿ, ಮೇವಿನ ಕೊರತೆಯಿರುವ ಜಿಲ್ಲೆಗಳಿಗೆ. ಮೇವು, ಭತ್ತ, ಕಬ್ಬು, ಮೆಕ್ಕೆಜೋಳ ಲಭ್ಯ ಇರುವ ಬೇರೆ ಜಿಲ್ಲೆಗಳಿಂದ ಖರೀದಿಸಿ ಮೇವು ಸಂಗ್ರಹಿಸಿಟ್ಟುಕೊಳ್ಳಬೇಕು ಸಂಪುಟ ಉಪಸಮಿತಿಯು ಶೀಘ್ರದಲ್ಲಿಯೇ ಇದಕ್ಕೆ ಒಪ್ಪಿಗೆ ನೀಡಲಿದೆ ಎಂದರು.
ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಿ
ಟ್ಯಾಂಕರುಗಳ ಮೂಲಕ ನೀರು ಪೂರೈಸುತ್ತಿರುವ ಕುಂದಗೋಳ ತಾಲ್ಲೂಕಿನ 14 ಹಾಗೂ ಹುಬ್ಬಳ್ಳಿ ತಾಲ್ಲೂಕಿನ 4 ಹಳ್ಳಿಗಳಿಗೆ ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅನುಷ್ಠಾನದಲ್ಲಿರುವ ತಾಂತ್ರಿಕ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಶಾಸಕ, ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಸಿ.ಎಸ್.ಶಿವಳ್ಳಿ ಒತ್ತಾಯಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್, ಸಂಸದ ಪ್ರಹ್ಲಾದ ಜೋಷಿ, ಮತ್ತಿತರರು ಉಪಸ್ಥಿತರಿದ್ದರು.