'ವೈಜ್ಞಾನಿಕ ಶಿಕ್ಷಣದಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ'
ಹುಬ್ಬಳ್ಳಿ, ಫೆಬ್ರವರಿ, 19 : ವೈಜ್ಞಾನಿಕ ಮನೋಭಾವ,ವೈಚಾರಿಕ ಪ್ರಜ್ಞೆ ಹಾಗೂ ಸಮಾಜಮುಖಿ ಶಿಕ್ಷಣ ಕ್ರಮದಿಂದ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿ ತಾಲ್ಲೂಕಿನ ನೂಲ್ವಿಯ ಶ್ರೀ ಜಗದ್ಗುರು ರೇಣುಕಾಚಾರ್ಯ ಗ್ರೂಪ್ ಎಜುಕೇಷನ್ ಸೊಸೈಟಿಯ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, 1966 ರಲ್ಲಿ ಸ್ಥಾಪನೆಯಾದ ಶ್ರೀ ಜಗದ್ಗುರು ರೇಣುಕಾಚಾರ್ಯ ಗ್ರೂಪ್ ಎಜುಕೇಷನ್ ಸೊಸೈಟಿಯು ಹಳ್ಳಿಗಾಡಿನ ಶಿಕ್ಷಣಕ್ಕೆ ಒತ್ತು ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಶತಮಾನಗಳಿಂದ ಬಹುಸಂಖ್ಯಾತ ಜನ ಅಕ್ಷರದಿಂದ ವಂಚಿತರಾದ ಪರಿಣಾಮವಾಗಿ ಸಾಮಾಜಿಕ ಮತ್ತು ಆರ್ಥಿಕವಾಗಿ ಕಂದರ ನಿರ್ಮಾಣವಾಗಿದೆ. ಒಂದು ಹಂತದಲ್ಲಿ ಸಮಾಜ ಚಲನಶೀಲತೆಯನ್ನು ಕಳೆದುಕೊಂಡಿತ್ತು.
ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಮೂಲಕ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವದ ಗುರಿ ಮುಟ್ಟುವ ನಿಟ್ಟಿನಲ್ಲಿ ಈಗ ಸಾಗುತ್ತಿದ್ದೇವೆ. ನೂಲ್ವಿ ಗ್ರಾಮದ ಈ ಶಿಕ್ಷಣ ಸಂಸ್ಥೆಯು ನೂರಾರು ವರ್ಷಗಳ ಅಂತಹ ಶ್ರೇಷ್ಠ ಕಾರ್ಯಗಳನ್ನು ಮುಂದುವರೆಸಿಕೊಂಡು ಸಾಗಲಿ ಎಂದು ಶುಭ ಹಾರೈಸಿದರು.
ಜಗದ್ಗುರು ರೇಣುಕಾಚಾರ್ಯ ಗ್ರೂಪ್ ಎಜುಕೇಷನ್
1966 ರಲ್ಲಿ ಸ್ಥಾಪನೆಯಾದ ಜಗದ್ಗುರು ರೇಣುಕಾಚಾರ್ಯ ಗ್ರುಪ್ ಎಜುಕೇಷನ್ ಸೊಸೈಟಿಯು ನೂಲ್ವಿಯ ಭಾನುವಾರ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿಕೊಂಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಿ.ಬಿ.ಎಸ್.ಚಾರಿಟೇಬಲ್ ಫೌಂಡೇಷನ್ನಿನ ದಶಮಾನೋತ್ಸವ
ಸಿ.ಬಿ.ಎಸ್.ಚಾರಿಟೇಬಲ್ ಫೌಂಡೇಷನ್ನಿನ ದಶಮಾನೋತ್ಸವ ಉದ್ಘಾಟಿಸಿದ ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವದು ಸಾಮಾಜಿಕ ಕಾರ್ಯವಾಗಿದೆ. ಈ ಪ್ರವೃತ್ತಿ ಎಲ್ಲರಲ್ಲಿ ಬೆಳೆಯಬೇಕು ಎಂದರು.
ಸ್ಮರಣ ಸಂಚಿಕೆ ಬಿಡುಗಡೆ
ಗಣಿ, ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ,ಶಾಸಕ ಸಿ.ಎಸ್.ಶಿವಳ್ಳಿ ಹಾಗೂ ಸಂಸದ ಪ್ರಲ್ಹಾದ ಜೋಷಿ ಶ್ರೀ ಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಗಳ ವೆಬ್ ಸೈಟ್ ಉದ್ಘಾಟಿಸಿದರು.
ಆಶಾ ಸಿದ್ಧನಗೌಡ್ರ ಕವನ ಸಂಕಲನ ಬಿಡುಗಡೆ
ಇದೆ ವೇಳೆ ಆಶಾ ಸಿದ್ಧನಗೌಡ್ರ ರಚಿಸಿದ ಕವನ ಸಂಕಲನ ಬಿಡುಗಡೆಗೊಳಿಸಲಾಯಿತು. ಉಜ್ಜಯಿನಿ ಸದ್ಧರ್ಮ ಪೀಠದ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ವಿಧಾನಸಭೆ ಅಧ್ಯಕ್ಷ ಕೆ.ಬಿ.ಕೋಳಿವಾಡ ಅಧ್ಯಕ್ಷತೆ ವಹಿಸಿದ್ದರು.