ಹುಬ್ಬಳ್ಳಿ: '2-3 ದಿನಗಳಲ್ಲಿ ಕೇಂದ್ರಕ್ಕೆ ಬರ ಅಧ್ಯಯನ ವರದಿ ಸಲ್ಲಿಕೆ'
ಹುಬ್ಬಳ್ಳಿ, ಫೆಬ್ರವರಿ, 13 : ಕೇಂದ್ರ ಬರ ಅಧ್ಯಯನ ತಂಡ ಸೋಮವಾರ ಗದಗ ಮತ್ತು ಹುಬ್ಬಳ್ಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಆಗಿರುವ ಬೆಳೆಹಾನಿ, ಬರಪರಿಸ್ಥಿತಿಯ ಗಂಭೀರತೆ, ಜನ- ಜಾನುವಾರುಗಳಿಗೆ ಉಂಟಾಗಿರುವ ಕುಡಿಯುವ ನೀರಿನ ಅಭಾವದ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಕೇಂದ್ರಗ್ರಾಮೀಣಾಭಿವೃದ್ಧಿ ಮಂತ್ರಾಲಯದ ಅಧೀನ ಕಾರ್ಯದರ್ಶಿ ಎಸ್.ಬಿ.ತಿವಾರಿ, ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯದ ಸಹಾಯಕ ಸಲಹೆಗಾರ ಸಲೀಂ ಹೈದರ್ ಹಾಗೂ ಕೇಂದ್ರ ವಿದ್ಯುಚ್ಛಕ್ತಿ ಉಪ ನಿರ್ದೇಶಕ ಕಮಲ್ ಚವಾಣ್ ಅವರನ್ನು ಒಳಗೊಂಡ ತಂಡ ವಿವಿದ ಹಳ್ಳಿಗಳಿಗೆ ಭೇಟಿ ನೀಡಿ ಬರ ಪರಿಶೀಲನೆ ಮಾಡಿತು..
ಬರ ಅಧ್ಯಯನ ತಂಡಗಳ ವರದಿಗಳನ್ನು ಕ್ರೋಢೀಕರಿಸಿ ನಂತರದ 2-3 ದಿನಗಳಲ್ಲಿ ಕೇಂದ್ರ ಸರಕಾರಕ್ಕೆಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಂಡ ತಿಳಿಸಿತು.
ಈ ವೇಳೆ ಮಾತನಾಡಿ ಸಂಸದ ಪ್ರಹ್ಲಾದ್ ಜೋಶಿ, ಕೇಂದ್ರ ಸರಕಾರವು 450 ಕೋಟಿ ರೂ.ಬರಪರಿಹಾರವನ್ನು ಈಗಾಗಲೇ ಬಿಡುಗಡೆಮಾಡಿದೆ 1600 ಕೋಟಿ ರೂ. ನರೇಗಾ ಯೋಜನೆಯಡಿ ನೀಡಿದ್ದು, ರಾಜ್ಯ ಸರಕಾರವು ಈ ಹಣವನ್ನು ಕೂಡಲೇ ಜಿಲ್ಲಾವಾರು ಹಂಚಿಕೆ ಮಾಡಿ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು.
ನಲವಡಿಯ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ
ಹುಬ್ಬಳ್ಳಿ ತಾಲ್ಲೂಕಿನ ಶಿರಗುಪ್ಪಿಯ ಮೇವು ಕೇಂದ್ರ, ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ವ್ಯವಸ್ಥೆ, ನವಲಗುಂದ ತಾಲ್ಲೂಕಿನ ನಲವಡಿಯ ಜೋಳ ಬೆಳೆ ಹಾನಿ ಪ್ರದೇಶಕ್ಕೆ ತಂಡ ಭೇಟಿ ನೀಡಿತು.
2-3 ದಿನಗಳಲ್ಲಿ ಕೇಂದ್ರ ಸರಕಾರಕ್ಕೆಅಂತಿಮ ವರದಿ
ಸತತ ಬರಗಾಲದಿಂದ ಕಂಗೆಟ್ಟಿರುವ ರೈತರು ಹಾಗೂ ಜಾನುವಾರಗಳ ಸ್ಥಿತಿ ಕಷ್ಟಕರವಾಗಿದೆ.ಬರದ ಭೀಕರತೆಯನ್ನುಕಂಡರೆ ಖೇದವೆನಿಸುತ್ತದೆ ಎಂದು ಕೇಂದ್ರ ಬರ ಅಧ್ಯಯನ ತಂಡದ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದರು. ವರದಿಗಳನ್ನು ಕ್ರೋಢೀಕರಿಸಿ ನಂತರದ 2-3 ದಿನಗಳಲ್ಲಿ ಕೇಂದ್ರ ಸರಕಾರಕ್ಕೆಅಂತಿಮ ವರದಿ ಸಲ್ಲಿಸಲಾಗುವುದು ಎಂದು ತಂಡ ತಿಳಿಸಿತು.
ವಿವಿಧ ಗ್ರಾಮಗಳಿಗೆ ಬರ ತಂಡ ಭೇಟಿ
ನವಲಗುಂದ ತಾಲ್ಲೂಕಿನ ಭದ್ರಾಪುರ,ಕೊಂಡಿಕೊಪ್ಪ ಹಾಗೂ ಕುಂದಗೋಳ ತಾಲ್ಲೂಕಿನ ಕೊಂಕಣಕುರಹಟ್ಟಿ ಗ್ರಾಮಗಳಲ್ಲಿ ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳನ್ನು, ರೊಟ್ಟಿಗವಾಡ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆಯ ಸ್ಥಿತಿಯನ್ನು ಕೇಂದ್ರದ ಬರ ಅಧ್ಯಯನ ತಂಡ ಖುದ್ದಾಗಿ ಪರಿಶೀಲಿಸಿತು.ಸಂಶಿ ಗ್ರಾಮದ ಮೇವು ಕೇಂದ್ರಕ್ಕೆ ಭೇಟಿ ನೀಡಿ 3 ರೂ. ಗೆ ಕುಡಿಯುವ ನೀರಿನ ಅಭಾವ,ಕೆ.ಜಿ.ಮೇವು ವಿತರಿಸುತ್ತಿರುವ ಕಾರ್ಯ ವೀಕ್ಷಿಸಿದರು.
ಜಿಲ್ಲೆಗೆ 104 ಕೋಟಿ ರೂ.ಬೆಳೆ ಪರಿಹಾರ
ಈ ಎಲ್ಲಾ ಬರ ಅಧ್ಯಾಯನವನ್ನು ಮಾಡಿ ಜಿಲ್ಲೆಗೆ 104 ಕೋಟಿ ರೂ.ಬೆಳೆ ಪರಿಹಾರ ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು.