'ಚಲೋ ಉಡುಪಿ'ಗೆ ರಾಘವೇಶ್ವರ ಶ್ರೀ ಅಸಮಾಧಾನ
ಹುಬ್ಬಳ್ಳಿ, ಅಕ್ಟೊಬರ್, 15: ಅಕ್ಟೋಬರ್ 4ರಿಂದ 9ರ ವರೆಗೆ ಉಡುಪಿಯಲ್ಲಿ ಹಮ್ಮಿಕೊಂಡಿದ್ದ 'ಚಲೋ ಉಡುಪಿ' ಜಾಥಾಗೆ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ಇಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 'ಚಲೋ ಉಡುಪಿ' ಜಾಥಾವನ್ನು ತೀವ್ರವಾಗಿ ಖಂಡಿಸಿದರು. "ಇಂಥ ಜಾಥಾಗಳನ್ನು ಆಯೋಜಿಸಿ, ಮಠ ಮಾನ್ಯಗಳ ವಿರುದ್ಧ ಹೋರಾಡುವ ಬದಲು ರಚನಾತ್ಮಕ ಕಾರ್ಯಗಳನ್ನು ಮಾಡುವುದು ಉತ್ತಮ" ಎಂದು ಸಲಹೆ ನೀಡಿದರು.
" ಜಾಥಾ ಆಯೋಜಿಸಿದ್ದ ಸಂಘಟನೆಗಳು ಪೇಜಾವರ ಮಠದ ವಿಶ್ವೇಶ್ವತೀರ್ಥ ಶ್ರೀಗಳನ್ನು ನೇರವಾಗಿ ಗುರಿಯಾಗಿಸಿಕೊಂಡು ಪ್ರತಿಭಟನೆ ಮಾಡಿದವು" ಎಂದು ಅವರು ಆರೋಪಿಸಿದರು.[ರಾಘವೇಶ್ವರ ಸ್ವಾಮೀಜಿಗೆ ಬೆದರಿಕೆ : ದಂಪತಿ ಬಂಧನ]
"ವಿಶ್ವೇಶ್ವತೀರ್ಥ ಶ್ರೀಗಳನ್ನು ಸಮಾಜದ ಎಲ್ಲ ಸಮುದಾಯಗಳು ಆದರದಿಂದ ಗೌರವಿಸುತ್ತವೆ. ಅಷ್ಟೇ ಅಲ್ಲದೇ ಇಳಿ ವಯಸ್ಸಿನಲ್ಲೂ ಎಲ್ಲ ಸಮುದಾಯಗಳ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ, ಅವರ ವಿರುದ್ಧ ಟೀಕೆಗಳನ್ನು ಮಾಡುವುದು ಸರಿಯಲ್ಲ" ಎಂದು ಹೇಳಿದರರು.
ಅಷ್ಟೇ ಅಲ್ಲದೇ ಮಹಾಬಲೇಶ್ವರ ಗೋಕರ್ಣ ದೇವಸ್ಥಾನಕ್ಕೆ ಆಡಾಳಿತಾಧಿಕಾರಿಯನ್ನು ನೇಮಿಸಲು ಹೊರಟಿರುವ ಸರ್ಕಾರದ ನಡೆಯನ್ನು ಅವರು ತೀವ್ರವಾಗಿ ಖಂಡಿಸಿದರು.[ಪೇಜಾವರ ಶ್ರೀಗಳ ಬಗ್ಗೆ ಯೋಗೇಶ್ ಮಾಸ್ಟರ್ ಹೀನಾಯ ವಿಡಂಬನೆ]
"ಮಠ-ಮಾನ್ಯ, ದೇವಸ್ಥಾನಗಳ ಆಡಳಿತ ಹೇಗೆ ನಡೆಸಬೇಕೆಂಬುದು ನಮಗೆ ಗೊತ್ತಿದೆ. ರಾಜ್ಯದ ಆಡಳಿತ ಹೇಗೆ ನಡೆಸಬೇಕೆಂದು ಸರ್ಕಾರಕ್ಕೆ ಗೊತ್ತಿದೆ. ಆದ್ದರಿಂದ ನಮ್ಮ ಕೆಲಸ ನಮಗೆ ಮಾಡಲು ಮಾಡಿ, ಮೂಗು ತೂರಿಸಬೇಡಿ ಎಂದು ಅವರು ಹೇಳಿದರು.