ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ
ಹುಬ್ಬಳ್ಳಿ, ಆಗಸ್ಟ್, 03 : ಯಮನೂರು ಗ್ರಾಮದಲ್ಲಿ ಪೊಲೀಸ್ ದೌರ್ಜನ್ಯಕ್ಕೆ ಒಳಗಾದ ಕುಟುಂಬಗಳಿಗೆ 1 ಲಕ್ಷ ರು. ಪರಿಹಾರ ನೀಡಬೇಕು ಮತ್ತು ಬಂಧಿತ ಅಮಾಯಕರನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಹಳ್ಳಿಗಳಿಗೆ ಬರುವ ಜನಪ್ರತಿನಿಧಿಗಳ ಮುಖಕ್ಕೆ ಸೆಗಣಿ ಎರಚಲಾಗುವುದು ಎಂದು ರಾಜ್ಯ ಕಬ್ಬು ಹೋರಾಟಗಾರರ ಸಂಘದ ಅಧ್ಯಕ್ಷ ಕುರುಬೂರ್ ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಅವರು ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತ, ಮಹದಾಯಿ ಕುಡಿಯುವ ನೀರಿಗಾಗಿ ಹೋರಾಟ ಮಾಡುತ್ತಿದ್ದ ರೈತರು, ಮಹಿಳೆಯರ ಮೇಲೆ ಅಮಾನುಷವಾಗಿ ವರ್ತಿಸಿರುವ ಪೊಲೀಸರ ದೌರ್ಜನ್ಯ ಖಂಡನೀಯ ಎಂದರು.
ಘಟನೆಗೆ ಕಾರಣವಾಗಿರುವ ಐಜಿಪಿ ರಾಮಚಂದ್ರರಾವ್ ಅವರನ್ನು ಕೂಡಲೇ ಅಮಾನತು ಮಾಡಬೇಕು. ಈ ಹಿಂದೆ ರಾಮಚಂದ್ರರಾವ್ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಕೇರಳಕ್ಕೆ ಹಣ ಸಾಗಿಸುತ್ತಿದ್ದ ತಂಡವೊಂದನ್ನು ಹಿಡಿದು ಅವರಿಂದ ಹಣ ಲೂಟಿ ಮಾಡಿದ್ದರು. ಈ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ರಾಮಚಂದ್ರರಾವ್ ಈಗ ಧಾರವಾಡದಲ್ಲಿ ಪೊಲೀಸರ ದೌರ್ಜನ್ಯಕ್ಕೆ ಕಾರಣವಾಗಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಹೀಗಾಗಿ ಕೂಡಲೇ ರಾಮಚಂದ್ರರಾವ್ ಅವರನ್ನು ಅಮಾನತು ಶಿಕ್ಷೆಗೊಳಿಸಬೇಕು ಎಂದು ಆಗ್ರಹಿಸಿದರು. [ಲಾಠಿ ಚಾರ್ಜ್, ಪೊಲೀಸರ ಬಗ್ಗೆ ಕ್ರಮ ಕೈಗೊಳ್ಳಿ ಎಂದ ಕೋರ್ಟ್]
ಘಟನೆಯ ಕುರಿತು ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕು. ರಾಜ್ಯದ ಎಲ್ಲ ಪಕ್ಷದವರು ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಕೂಡಲೇ ಅವರು ಮಧ್ಯ ಪ್ರವೇಶಿಸಬೇಕು ಎಂದು ಆಗ್ರಹಿಸಬೇಕು, ಇಲ್ಲವಾದಲ್ಲಿ ಸಾಮೂಹಿಕ ರಾಜೀನಾಮೆ ನೀಡುವುದಾಗಿ ರಾಜಕಾರಣಿಗಳು ಒತ್ತಾಯಿಸಬೇಕು ಎಂದು ಶಾಂತಕುಮಾರ್ ತಾಕೀತು ಮಾಡಿದರು.
ಘಟನೆಯ ಹೊಣೆ ಹೊತ್ತು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಆಗಸ್ಟ್ 8ರಿಂದ ನಾವು ಮತ್ತೊಂದು ಉಗ್ರ ಹೋರಾಟಕ್ಕೆ ಸಿದ್ಧರಾಗುತ್ತೇವೆ ಎಂದು ಎಚ್ಚರಿಸಿದರು. [ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕುಮಾರಸ್ವಾಮಿ ಪತ್ರ]
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಬನವಣ್ಣನವರ್, ಗದಗ ಜಿಲ್ಲಾಧ್ಯಕ್ಷ ವೀರನಗೌಡ ಪಾಟೀಲ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಎಸ್.ಬಿ.ಹಳ್ಯಾಳ, ಎಂ.ಜಿ.ಸಿಂದಗಿ, ಮಲ್ಲಿಕಾರ್ಜುನ ಹಣಜಿ ಮತ್ತಿತರರು ಉಪಸ್ಥಿತರಿದ್ದರು.
ಮಾಧ್ಯಮಗೋಷ್ಠಿಯ ನಂತರ ಕುರುಬೂರ್ ಶಾಂತಕುಮಾರ್ ಅವರು ಪೊಲೀಸ್ ದೌರ್ಜನ್ಯ ನಡೆದಿದೆ ಎನ್ನಲಾದ ಅರೇಕುರಹಟ್ಟಿ, ಯಮನೂರು ಮತ್ತು ಅಳಗವಾಡಿ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಸಾಂತ್ವನ ಹೇಳಿದರು. [ಮಹಿಳಾ ಆಯೋಗದ ಅಧ್ಯಕ್ಷರಿಗೆ ಯಮನೂರು ಜನರ ತರಾಟೆ]