ವಿಜಯಪುರದಲ್ಲಿ ಹಳೆ ಸಿಮ್ಗಳಿಗೆ ಆಧಾರ್ ಲಿಂಕ್ ಮಾಡಲು ’ಡಂಗುರ’
ವಿಜಯಪುರ, ಜುಲೈ 19: ಸಾಮಾನ್ಯವಾಗಿ ಹಬ್ಬ-ಹರಿದಿನ, ಗ್ರಾಮಸಭೆ, ಪಡಿತರ ವಿತರಣೆ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ 'ಡಂಗುರ' ಸಾರುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ವಿಷಯ ಮುಟ್ಟಿಸುವುದು ವಾಡಿಕೆ. ಆದರೆ, ಇಲ್ಲೊಂದು ಖಾಸಗಿ ಟೆಲಿಕಾಂ ಕಂಪೆನಿ ವಿಜಯಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಡಂಗುರ ಸಾರುವ ಮೂಲಕ ಅಚ್ಚರಿ ಮೂಡಿಸಿದೆ. ಯಾಕೆ ಅಂತಿರಾ? ಮುಂದೆ ಓದಿ..
ಖಾಸಗಿ ಟೆಲಿಕಾಂ ಸಂಸ್ಥೆ ಏರ್ಟೆಲ್ ಕಂಪನಿಯವರು ಹಳೆ ಸಿಮ್ (ಮೊಬೈಲ್ ನಂಬರ್) ಗಳಿಗೆ ಆಧಾರ್ ನಂಬರ್ ಲಿಂಕ್ ಮಾಡುವ ಸುದ್ದಿ ಮುಟ್ಟಿಸಲು ಗ್ರಾಮದಲ್ಲಿ 'ಡಂಗುರ' ಸಾರಿಸಿದೆ. ಯುವಕನೊಬ್ಬ ಗ್ರಾಮದ ಪ್ರಮುಖ ಬೀದಿ ಹಾಗೂ ವೃತ್ತಗಳಲ್ಲಿ ಜನರ ಗಮನ ಸೆಳೆಯಲು 'ಭಜನೆ ತಾಳ'ಗಳನ್ನು ಬಳಸಿಕೊಂಡು ಡಂಗುರ ಸಾರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಹೌದು, ಇತ್ತೀಚಿಗೆ ಗ್ರಾಮೀಣ ಪ್ರದೇಶದ ಶೇ 80ರಷ್ಟು ಜನರಲ್ಲಿ ಸ್ಮಾರ್ಟ್ ಫೋನ್ಗಳಿವೆ. ಸ್ಮಾರ್ಟ್ ಫೋನ್ ಹೊಂದಿದವರು ವಾಟ್ಸ್ಅಪ್, ಟೆಲಿಗ್ರಾಂ, ಫೇಸ್ಬುಕ್ ಸೇರಿದಂತೆ ಇನ್ನಿತರ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುತ್ತಾರೆ. ಇವುಗಳ ಮೂಲಕ ಏರ್ಟೆಲ್ ಕಂಪನಿಯವರು ಹಳೆ ಸಿಮ್ಗಳಿಗೆ ಆಧಾರ ಕಾರ್ಡ್ ಲಿಂಕ್ ಮಾಡುವ ಸಂದೇಶ ಕಳುಹಿಸಬಹುದಾಗಿತ್ತು.
ಕೊನೆ ಪಕ್ಷ ತಾವೇ ನೀಡಿದ ಸಿಮ್ಗೆ ಎಸ್ಎಂಎಸ್ ಕಳುಹಿಸಬಹುದಾಗಿತ್ತು. ಆದರೆ, ಈ ಕೆಲಸಕ್ಕೆ ಡಂಗುರ ಸಾರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಆದರೆ, ಈ ಮೂಲಕವಾದರೂ ನಮ್ಮ ಗ್ರಾಮೀಣ ಸಂಸ್ಕೃತಿಯನ್ನು ಜೀವಂತವಾಗಿರಿಸಿದ ಕಂಪನಿಗೆ ಥ್ಯಾಂಕ್ಸ್ ಹೇಳಲೇಬೇಕು.