ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷ ಜನಾರ್ದನ ರೆಡ್ಡಿಗೆ ಸೇರಿದ್ದಾ?
ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
ಹುಬ್ಬಳ್ಳಿ, ನವೆಂಬರ್ 14: ಮಾಜಿ ಸಚಿವ ಜನಾರ್ದನ ರೆಡ್ಡಿ ಮಗಳ ಮದುವೆಗೆ ತೆಗೆದುಕೊಂಡು ಹೋಗುತ್ತಿದ್ದ ಹಣವನ್ನು ಹುಬ್ಬಳ್ಳಿ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂಬ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಸೋಮವಾರ ಕೇಶ್ವಾಪುರ ಪೊಲೀಸರು ಹೊಸಪೇಟೆಯಿಂದ ಬರುತ್ತಿದ್ದ ವಾಹನವನ್ನು ವಶಕ್ಕೆ ಪಡೆದು, ಅದರಲ್ಲಿದ್ದ ಹಣ ಜಪ್ತಿ ಮಾಡಿದ್ದಾರೆ ಎಂಬ ಸುದ್ದಿ ನಗರದಾದ್ಯಂತ ಹರಿದಾಡುತ್ತಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ 60 ಲಕ್ಷ ರುಪಾಯಿ ಹಣವನ್ನು ನಗರದ ಕೇಶ್ವಾಪುರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಸಪೇಟೆಯಿಂದ ಬಂದ ಸ್ಕಾರ್ಪಿಯೋ (ಕೆಎ-35-ಎಂ-8395) ವಾಹನದಲ್ಲಿ ಪ್ರವೀಣ್ ಜೈನ್ ಹಾಗೂ ಶ್ರೀನಿವಾಸ ಮೂರ್ತಿ ಎಂಬುವರು ಹಣ ಸಾಗಿಸುತ್ತಿದ್ದಾಗ ಪೊಲೀಸರು ವಶಪಡಿಸಿಕೊಂಡಿದ್ದಾರೆ.[ಜನಾರ್ದನ ರೆಡ್ಡಿ ಮಗಳ ಮದುವೆ ಒಟ್ಟು ಎಷ್ಟು ದಿನ?]
ಹೊಸಪೇಟೆಯಿಂದ ಹುಬ್ಬಳ್ಳಿಯಲ್ಲಿರುವ ಸಂಬಂಧಿಕರ ಮನೆಗೆ ಹಣ ವಿನಿಮಯಕ್ಕೆ 60 ಲಕ್ಷ ರುಪಾಯಿ ತರಲಾಗುತ್ತಿತ್ತು. ಆದರೆ ಹಣದ ವಿನಿಮಯ ಸಾಧ್ಯವಾಗದಿದ್ದಾಗ ಮರಳಿ ಹೊಸಪೇಟೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಪೊಲೀಸರ ವಿಚಾರಣೆ ವೇಳೆ ಪ್ರವೀಣ್, ಶ್ರೀನಿವಾಸ ತಿಳಿಸಿದ್ದಾರೆ.
ಕೇಶ್ವಾಪುರದ ಅರಿಹಂತ ನಗರದಿಂದ ಹೊಸಪೇಟೆಗೆ ಹಣ ಸಾಗಿಸಲಾಗುತ್ತಿತ್ತು. ವಶಪಡಿಸಿಕೊಂಡ ಹಣದಲ್ಲಿ ರದ್ದಾದ 500 ಹಾಗೂ 1000 ರು. ಮುಖಬೆಲೆಯ ನೋಟುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.[ಚಿಲ್ಲರೆ ಹಣಕ್ಕೆ ಜನರ ಪರದಾಟ! ಆದರೆ ಬಳ್ಳಾರಿಯಲ್ಲಿ ಗಣಿಹಣದ ಚೆಲ್ಲಾಟ]
ಯುವತಿ ನಾಪತ್ತೆ: ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾಳಮಡ್ಡಿಯ ಗೌಳಿಗಲ್ಲಿ ನಿವಾಸಿ ವರ್ಷಾ ಪ್ರಕಾಶ ಪತ್ತಾರ (21) ಎಂಬ ಯುವತಿ ನವೆಂಬರ್ 11ರಂದು ಭರತನಾಟ್ಯ ಕ್ಲಾಸ್ ಗೆ ಹೋಗುತ್ತೇನೆ ಎಂದು ಮನೆಯಿಂದ ಹೋದವಳು ಮರಳಿ ಬಂದಿಲ್ಲ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.