ಕಳೆದೊಂದು ವರ್ಷದಿಂದ ಕಾಣೆಯಾಗಿದ್ದ 306 ಮಕ್ಕಳು ಹುಬ್ಬಳ್ಳಿಯಲ್ಲಿ ಪತ್ತೆ
ಹುಬ್ಬಳ್ಳಿ, ಜನವರಿ. 06 : ಕಳೆದೊಂದು ವರ್ಷದಿಂದ ಹುಬ್ಬಳ್ಳಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಪ್ರಕರಣಗಳಲ್ಲಿ 306 ಅಪ್ರಾಪ್ತ ಮಕ್ಕಳು ಪತ್ತೆಯಾಗಿದ್ದಾರೆ ಎಂದು ನೈಋತ್ಯ ಸುರಕ್ಷಾ ವಿಭಾಗದ ಮುಖ್ಯಸ್ಥ ದೇವೇಂದ್ರ ಕಸಾರ್ ತಿಳಿಸಿದ್ದಾರೆ.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದೊಂದು ವರ್ಷದಲ್ಲಿ ಕಾಣೆಯಾಗಿದ್ದ ಒಟ್ಟು 306 ಅಪ್ರಾಪ್ತ ಮಕ್ಕಳು ಪತ್ತೆಯಾಗಿದ್ದು. ಅವರಲ್ಲಿ 238 ಗಂಡು ಮಕ್ಕಳು ಮತ್ತು 68 ಹೆಣ್ಣು ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದರು.
103 ಮಕ್ಕಳನ್ನು ಸಂಬಂಧಿಸಿದ ಪಾಲಕರಿಗೆ ಒಪ್ಪಿಸಲಾಗಿದೆ. ಪಾಲಕರಿಲ್ಲದ ಮಕ್ಕಳನ್ನು ಸ್ವಯಂ ಸೇವಾ ಸಂಸ್ಥೆಗಳಿಗೆ ಒಪ್ಪಿಸಲಾಗಿದ್ದು. ಇನ್ನು ಕೆಲ ಮಕ್ಕಳನ್ನು ವಿವಿಧ ಕಾರಣಗಳಡಿ ಪೊಲೀಸರ ವಶದಲ್ಲಿರಿಸಿಕೊಳ್ಳಲಾಗಿದೆ ಎಂದರು.
ರೈಲ್ವೆ ಪೊಲೀಸ್ ಇಲಾಖೆಯು ಮಕ್ಕಳ ನಾಪತ್ತೆ, ಬ್ಯಾಗ್ ಕಳ್ಳತನ, ಟಿಕೆಟ್ ಇಲ್ಲದೇ ಪ್ರಯಾಣ, ರೈಲಿನಲ್ಲಿ ಅಕ್ರಮ ಪ್ರವೇಶ ಸೇರಿದಂತೆ ನೂರಾರು ಪ್ರಕರಣಗಳನ್ನು ಬೇಧಿಸಿದೆ ಎಂದು ಹೇಳಿದರು.
ನೈಋತ್ಯ ರೈಲ್ವೆ ವಲಯ ವಿಭಾಗದಲ್ಲಿ ನಾಪತ್ತೆಯಾದ ಮಕ್ಕಳಲ್ಲಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಬೆಂಗಳೂರಿನ ಬಾಲಕಿ ಪೂಜಿತಾ ನಾಪತ್ತೆ ಪ್ರಕರಣ ಹುಬ್ಬಳ್ಳಿಯಲ್ಲಿ ಸುಖಾಂತ್ಯವಾಗಿತ್ತು ಎಂದರು.
ಒಟ್ಟು 68 ಬ್ಯಾಗ್, 38 ಮೊಬೈಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚಿ 1,40,387 ರೂ. ನಗದು ಹಾಗೂ 10,56,500 ರೂ. ಮೌಲ್ಯದ ವಸ್ತುಗಳನ್ನು ರೈಲ್ವೆ ಸುರಕ್ಷಾ ಪಡೆಯ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.
ಮೈಸೂರು-ಧಾರವಾಡ ಇಂಟರ್ ಸಿಟಿ ಟ್ರೈನ್ ಯಲವಿಗಿಯಲ್ಲಿ ನಿಲುಗಡೆ: ಧಾರವಾಡದಿಂದ ಬೆಂಗಳೂರಿಗೆ ಪ್ರತಿನಿತ್ಯ ಬೆಳಗ್ಗೆ 5.30 ಕ್ಕೆ ತೆರಳುವ ಛತ್ರಪತಿ ಶಾಹು ಮಹಾರಾಜ್ ಇಂಟರ್ ಸಿಟಿ ಎಕ್ಸ್ ಪ್ರೆಸ್ ರೈಲು (ಟ್ರೈನ್ ನಂ.12725/12726) ಹಾವೇರಿ ಜಿಲ್ಲೆಯ ಯಲವಿಗಿಯಲ್ಲಿ ನಿಲ್ಲಲಿದೆ.
ಜನವರಿ 17 ರಿಂದ ನಿಲುಗಡೆಯಾಗಲಿದ್ದು, ಧಾರವಾಡದಿಂದ ಹೊರಡುವ ಬೆಳಗಿನ ರೈಲು ಯಲವಿಗಿಯಲ್ಲಿ ಬೆಳಗ್ಗೆ 6-39ಕ್ಕೆ ಹಾಗೂ ಬೆಂಗಳೂರಿನಿಂದ ಮರಳಿ ಧಾರವಾಡಕ್ಕೆ ಮರಳುವಾಗ ರಾತ್ರಿ 8-09 ಕ್ಕೆ ಯಲವಿ ನಿಲ್ದಾಣಕ್ಕೆ ಬರಲಿದೆ.