ಅವನತಿಯತ್ತ ಅರಕಲಗೂಡಿನ ಬೈಚನಹಳ್ಳಿ ಸಸ್ಯಕ್ಷೇತ್ರ!
ಹಾಸನ ಜಿಲ್ಲೆಯಲ್ಲಿರುವ ಒಟ್ಟು 18 ಸಸ್ಯಕ್ಷೇತ್ರಗಳಲ್ಲಿ ಅವನತಿಯ ಹಾದಿ ಹಿಡಿದಿರುವ ಮೊದಲ ಸಸ್ಯಕ್ಷೇತ್ರ ಬೈಚನಹಳ್ಳಿಯದು. ತೋಟಗಾರಿಕೆ ಇಲಾಖೆಯ ದಿವ್ಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವೇ?
ಹಾಸನ, ಮೇ 22: ಈ ಬಾರಿ ಬರಗಾಲದಲ್ಲಿ ಸೂಕ್ತ ನಿರ್ವಹಣೆ ಮಾಡದ ಪರಿಣಾಮ ಅರಕಲಗೂಡು ತಾಲೂಕಿನ ಬೈಚನಹಳ್ಳಿ ಸಸ್ಯಕ್ಷೇತ್ರದಲ್ಲಿದ್ದ ತೆಂಗಿನ ಮರಗಳು ಒಣಗಿ ಸಾವನ್ನಪ್ಪಿವೆ.
ಸುಳಿ ಒಣಗಿ ತೆಂಗಿನ ಮರಗಳು ಬೋರಲಾಗಿರುವುದು ಕಂಡು ಬರುತ್ತಿದ್ದು, ಹಲವು ವರ್ಷಗಳ ಕಾಲ ಫಸಲು ನೀಡಿದ್ದ ಮರಗಳು ಇದೀಗ ಸಾವನ್ನಪ್ಪಿರುವುದು ನಷ್ಟವನ್ನುಂಟು ಮಾಡಿದೆಯಲ್ಲದೆ, ತುಕ್ಕು ಹಿಡಿದ ನಮ್ಮ ಆಡಳಿತ ವ್ಯವಸ್ಥೆಗೂ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿರುವ ಒಟ್ಟು 18 ಸಸ್ಯಕ್ಷೇತ್ರಗಳಲ್ಲಿ ಅವನತಿಯ ಹಾದಿ ಹಿಡಿದಿರುವ ಮೊದಲ ಸಸ್ಯಕ್ಷೇತ್ರ ಇದಾಗಿದ್ದು, ತೋಟಗಾರಿಕೆ ಇಲಾಖೆಯ(ಸ್ಟೇಟ್ ಸೆಕ್ಟರ್) ನಿರ್ವಹಣೆಯ ದಿವ್ಯ ನಿರ್ಲಕ್ಷ್ಯವೂ ಇದಕ್ಕೆ ಕಾರಣವಾಗಿದೆ ಎಂಬ ದೂರು ಕೇಳಿ ಬಂದಿದೆ.[ಹಸಿರು ಬೆಂಗಳೂರಿಗಾಗಿ 'ಬಿಬಿಎಂಪಿ ಗ್ರೀನ್' ಆ್ಯಪ್, ನೀವೂ ಗಿಡ ನೆಡಿ]
ನಾಲ್ಕು ದಶಕಗಳ ಹಿಂದೆ ಆರಂಭಗೊಂಡ ಸಸ್ಯಕ್ಷೇತ್ರವು ಸುಮಾರು 17 ಎಕರೆ ವಿಸ್ತೀರ್ಣ ಹೊಂದಿದೆ. ಇಲ್ಲಿ 40 ತೆಂಗಿನ ಸಸಿ, 120 ಸಪೋಟ ಮತ್ತು 200 ಮಾವಿನ ಸಸಿಗಳನ್ನು ನೆಟ್ಟು ಪೋಷಣೆ ಮಾಡಲಾಗಿತ್ತು. ಇವು ಬೆಳೆದು ಮರಗಳಾಗಿ ಫಸಲು ನೀಡುತ್ತಿದ್ದರಿಂದ ತೋಟಗಾರಿಕೆ ಇಲಾಖೆಗೆ ಒಂದಷ್ಟು ಆದಾಯವೂ ಬರುತ್ತಿತ್ತು.
ಆದರೆ ಈ ಬಾರಿಯ ಬರಕ್ಕೆ ತತ್ತರಿಸಿ ತೆಂಗಿನ ಗಿಡಗಳಿಗೆ ಸಮರ್ಪಕವಾಗಿ ನೀರು ಇನ್ನಿತರ ಔಷಧೋಪಚಾರ ಮಾಡದ ಕಾರಣದಿಂದ ತೆಂಗಿನ ಮರಗಳಿಗೆ ಸುಳಿರೋಗ ಬಂದು ಬೋಳಾಗಿ ನಿಂತಿವೆ. ಇದರ ಜತೆಗೆ ಸೀಬೆ, ಇನ್ನಿತರ ಮರಗಳು ಕೂಡ ಒಣಗಿ ನಿಂತಿವೆ. ಇವುಗಳ ಪೈಕಿ ಕೆಲವು ಮರಗಳು ಇತ್ತೀಚೆಗೆ ಸುರಿದ ಗಾಳಿ ಮಳೆಗೆ ಮುರಿದು ಬಿದ್ದಿವೆ.
ಸಸ್ಯ ಕ್ಷೇತ್ರದಲ್ಲಿದ್ದ ಮರಗಳನ್ನು ಕಾಪಾಡಲು ಏಕೆ ಸಾಧ್ಯವಾಗಿಲ್ಲವೋ ಗೊತ್ತಿಲ್ಲ. ಇದರ ಪಕ್ಕದ ಖಾಸಗಿ ಜಮೀನಿನಲ್ಲಿರುವ ಮರಗಳು ನಳನಳಿಸುತ್ತಿರುವಾಗ ಇಲ್ಲಿರುವ ಮರಗಳೇಕೆ ಸಾವನ್ನಪ್ಪಿವೆ ಎಂಬುದು ರೈತರ ಪ್ರಶ್ನೆಯಾಗಿದೆ.
ಇಲ್ಲಿ ಎರೆಹುಳ ಗೊಬ್ಬರ ತಯಾರಿಕಾ ಘಟಕವಿದ್ದರೂ ಅದು ಈಗ ಪಾಳು ಬಿದ್ದಿದೆ. ಇನ್ನು ನೀರುಣಿಸಲು ಇಲ್ಲಿರುವ ಕೊಳವೆ ಬಾವಿಯಲ್ಲಿ ಅಂತರ್ಜಲದ ಕೊರತೆಯಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಒಟ್ಟಾರೆ ದಿವ್ಯ ನಿರ್ಲಕ್ಷ್ಯದಿಂದಾಗಿ ನಾಲ್ಕು ದಶಕಗಳ ಹಿಂದೆ ರೈತರ ಹಿತದೃಷ್ಟಿಯಿಂದ ಆರಂಭವಾದ ಸಸ್ಯಕ್ಷೇತ್ರ ಅವನತಿಯ ಹಾದಿ ಹಿಡಿದಿರುವುದಂತೂ ಸತ್ಯ. ಸಂಬಂಧಿಸಿದವರು ಇನ್ನು ಮುಂದೆಯಾದರೂ ಇದರತ್ತ ಗಮನಹರಿಸಿ ಅಭಿವೃದ್ಧಿಗೆ ಮುಂದಾಗುತ್ತಾರಾ, ಕಾದು ನೋಡಬೇಕಿದೆ.
{promotion-urls}