ಬೆಣ್ಣೆ ತಿಂದು ಇತರರ ಮುಖಕ್ಕೆ ಒರೆಸಬೇಡಿ: ಶೋಭಾ ಕರಂದ್ಲಾಜೆ
ಹಾಸನ, ಅಕ್ಟೋಬರ್, 25: ಶಕ್ತಿ ಕೇಂದ್ರ ವಿಧಾನಸೌಧದ ಪ್ರವೇಶ ದ್ವಾರದಲ್ಲಿ ಪತ್ತೆಯಾದ ದಾಖಲೆಯಿಲ್ಲದ 1.97ಕೋಟಿ ರೂ. ಹಣಕ್ಕೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೂ ಯಾವುದೇ ಸಂಬಧವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಲ್ಲಿನ ಹಾಸನಾಂಬೆ ದೇಗುಲಕ್ಕೆ ಮಂಗಳವಾರ ಭೇಟಿ ನಿಡಿ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. "ಎಚ್.ಡಿ. ಕುಮಾರಸ್ವಾಮಿಯವರು ಕೀಳು ಮಟ್ಟದ ರಾಜಕೀಯಕ್ಕೆ ಇಳಿದಿದ್ದಾರೆ. ಹಣಕ್ಕೂ ಯಡಿಯೂರಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ" ಎಂದು ಶೋಭಾ ಕರಂದ್ಲಾಜೆ ಅವರು ಕಿಡಿ ಕಾರಿದರು . [ವಿಧಾನಸೌಧಕ್ಕೆ ಬಂದ ಕಾರಿನಲ್ಲಿ 2.5 ಕೋಟಿ, ಸಚಿವರಿಗೆ ದಕ್ಷಿಣೆ ಕಾಸಾ?]
"ವಿಧಾನಸೌಧ ಮತ್ತು ಬಿಬಿಎಂಪಿಯ ಆಡಳಿತ ಚುಕ್ಕಾಣಿ ಹಿಡಿದಿರುವ ಪಕ್ಷಗಳು ಯಾವುವೆಂದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಲಿ, ಸಿಬಿಐ ನಿಂದ ಅಥವಾ ತೆರಿಗೆ ಅಧಿಕಾರಿಗಳಿಂದ ಸರ್ಕಾರ ತನಿಖೆ ನಡೆಸಲಿ, ನಂತರ ಸತ್ಯಾಂಶ ಹೊರಬರುತ್ತದೆ" ಎಂದು ಹೇಳಿದರು.[ವಿಧಾನಸೌಧದಲ್ಲೇ ಕೋಟಿ ಕೋಟಿ ಹಣದ ಕರ್ಮಕಾಂಡ!]
" ಈ ರೀತಿ ಕ್ಷುಲ್ಲಕ ಆರೋಪಗಳನ್ನು ಮಾಡಿ ಪ್ರಚಾರ ಗಿಟ್ಟಿಸುವುದನ್ನು ನಿಲ್ಲಿಸಬೇಕು. ಬಿಬಿಎಂಪಿಯಲ್ಲಿ ಎಲ್ಲವೂ ಕಮಿಷನ್ ವ್ಯವಹಾರ ನಡೆಯುತ್ತಿದೆ. 'ನೀವು ಬೆಣ್ಣೆ ತಿಂದು ಮತ್ತೊಬ್ಬರ ಮುಖಕ್ಕೆ ಒರೆಸಬೇಡಿ' ಎಂದು ಅವರು ಹೇಳಿದರು.
ಪತ್ತೆಯಾದ ದಾಖಲೆಯಿಲ್ಲದ ಹಣದ ಕುರಿತು ಕುಮಾರಸ್ವಾಮಿಯವರು ಪ್ರತಿಕ್ರಿಯೆ ನೀಡಿ "ಈ ಹಣದ ಸಂಪೂರ್ಣ ವಿವಿರ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಮಾತ್ರ ಗೊತ್ತಿದೆ. ಬೇರೆ ಯಾರನ್ನೂ ಪ್ರಶ್ನಿಸುವ ಅಗತ್ಯವಿಲ್ಲ' ಎಂದು ಆರೋಪಿಸಿದ್ದರು.