ಹಾಸನದಲ್ಲಿ ಬೀದಿ ನಾಯಿಗಳ ದಾಳಿಗೆ ಕುರಿ, ಕರು ಬಲಿ
ಹಾಸನ, ಸೆಪ್ಟೆಂಬರ್ 19: ಬೀದಿ ನಾಯಿಗಳು ದಾಳಿ ಮಾಡಿದ ಪರಿಣಾಮ ಮೂರು ಕುರಿ, ಒಂದು ಕರು ಬಲಿಯಾಗಿ, ಹಲವು ಕುರಿಗಳು ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
ನಗರದ ಹುಣಸಿನಕೆರೆ ಸಮೀಪದ ಮೆಹಬೂಬ್ ನಗರದಲ್ಲಿ ಬೀದಿ ನಾಯಿಗಳ ಗುಂಪೊಂದು ಇಮ್ರಾನ್ ಎಂಬುವರಿಗೆ ಸೇರಿದ ಮೂರು ಕುರಿಗಳ ಮೇಲೆ ಆಕ್ರಮಣ ಮಾಡಿ, ಅವುಗಳ ಕುತ್ತಿಗೆ ಹಾಗೂ ದೇಹಕ್ಕೆ ವಿವಿಧ ಭಾಗಕ್ಕೆ ಕಚ್ಚಿದ್ದರಿಂದ ಮೂರು ಕುರಿಗಳು ಸ್ಥಳದಲ್ಲಿಯೇ ಸಾವನಪ್ಪಿವೆ. ಇನ್ನುಳಿದ ಕುರಿಗಳು ಗಾಯಗೊಂಡಿವೆ. ಅಷ್ಟೇ ಅಲ್ಲ, ಅಲ್ಲಿದ್ದ ಕರುವಿನ ಮೇಲೂ ದಾಳಿ ಮಾಡಿ ಕಚ್ಚಿ, ಗಾಯಗೊಳಿಸಿವೆ.[ನಾಯಿಗಾಗಿ ಮದುವೆ ಮುರಿದುಕೊಂಡ ಬೆಂಗಳೂರು ಹುಡುಗಿ]
ನಾಯಿಗಳ ಹಾವಳಿ: ಮೆಹಬೂಬ್ ನಗರ ವ್ಯಾಪ್ತಿಯಲ್ಲಿ ಕಸಾಯಿಖಾನೆಗಳಿದ್ದು, ಮಾಂಸವನ್ನು ಶುಚಿಗೊಳಿಸುವ ಕಾರ್ಯ ಮಾಡುವುದರಿಂದ ತ್ಯಾಜ್ಯಗಳನ್ನು ಎಸೆಯುತ್ತಿದ್ದರು. ಅದನ್ನು ತಿನ್ನಲು ಬೀದಿನಾಯಿಗಳು ಗುಂಪುಗೂಡುತ್ತವೆ. ಮೆಹಬೂಬ್ ನಗರದ 80 ಅಡಿ ರಸ್ತೆಯಲ್ಲಿ ನಿತ್ಯ ನೂರಾರು ಬೀದಿ ನಾಯಿಗಳು ಓಡಾಡುತ್ತವೆ. ಈ ಹಿಂದೆ ಬೀದಿ ನಾಯಿಗಳು ಅನೇಕ ಮಕ್ಕಳಿಗೆ ಮತ್ತು ದೊಡ್ಡವರಿಗೆ ಕಚ್ಚಿ ಗಾಯ ಮಾಡಿವೆ.
ಮಾಂಸದ ತ್ಯಾಜ್ಯ ಸಿಗದಿದ್ದಾಗ ದನ ಕರು, ಕುರಿಗಳ ಮೇಲೆ ದಾಳಿ ಮಾಡಿ ಕೊಂದು ತಿನ್ನುತ್ತಿವೆ. ಕಷ್ಟಪಟ್ಟು ಸಾಕಿದ ಕುರಿಗಳನ್ನು ಕಳೆದುಕೊಂಡಿರುವ ಮಾಲಿಕರು ಆತಂಕಗೊಂಡಿದ್ದಾರೆ. ನಾಯಿಗಳನ್ನು ಸಾಯಿಸಲು ಮುಂದಾದರೆ ಪ್ರಾಣಿದಯಾ ಸಂಘದವರು ನಮ್ಮ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇರುವ ನಾಯಿಗಳನ್ನು ಹಿಡಿದು ದೂರ ಬಿಡುತ್ತಿಲ್ಲ. ನಗರಸಭೆ ಮುಂದಾದರೆ ಅವರ ಮೇಲೂ ಕ್ರಮ ಕೈಗೊಳ್ಳುತ್ತಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.[ಸರಕಾರಿ ಆಸ್ಪತ್ರೆಗೆ ನುಗ್ಗಿ ಭ್ರೂಣ ಹೊತ್ತೊಯ್ದ ನಾಯಿ!]
ಈಗಾಗಲೇ ನಗರಸಭೆ ಆಯುಕ್ತರಿಗೆ ನೋಟಿಸ್ ಕೂಡ ನೀಡಿದ್ದಾರೆ ಎಂದು ನಗರಸಭೆ ಸದಸ್ಯರಾದ ಅಬ್ದುಲ್ ಖಯಿಂ, ಇಮ್ರಾನ್ ಅಸಹಾಯಕತೆ ತೋಡಿಕೊಂಡಿದ್ದಾರೆ.
ಸ್ಥಳೀಯರ ಆಕ್ರೋಶ: ಹುಣಸಿನಕೆರೆ ಬಳಿ ಇರುವ ಮೆಹಬೂಬ್ ನಗರ 80 ಅಡಿ ರಸ್ತೆಯಲ್ಲಿ ನಿತ್ಯ ದನ-ಕರುಗಳ ಮೂಳೆ ತುಂಬಿದ ಚೀಲವನ್ನು ರಸ್ತೆ ಬದಿಯಲ್ಲಿಯೇ ಎಸೆಯುತ್ತಾರೆ. ಮಾಂಸದ ತ್ಯಾಜ್ಯವನ್ನು ಕೆರೆಗೆ ಬಿಡುವುದರಿಂದ ಕೆರೆ ಮಲೀನಗೊಂಡಿದೆ ಎಂದು ಸ್ಥಳೀಯರು ದೂರಿದ್ದಾರೆ.