ಶ್ರವಣಬೆಳಗೊಳ ಮಸ್ತಕಾಭಿಷೇಕ, ವಿವಿಧ ಕಾಮಗಾರಿಗಳಿಗೆ ಚಾಲನೆ
ಮೈಸೂರು, ಫೆಬ್ರವರಿ 9 : 2018ರಲ್ಲಿ ಶ್ರವಣಬೆಳಗೊಳದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕ ನಡೆಸುವ ಹಿನ್ನಲೆಯಲ್ಲಿ ಗುರುವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಸ್ವಸ್ತಿಶ್ರೀ ಚಾರುಕಿರ್ತೀ ಭಟ್ಟಾರಕ ಸ್ವಾಮೀಜೀ ಚಿನ್ನದ ಉಳಿಯೊಂದಿಗೆ ಬೆಳ್ಳಿಯ ಸುತ್ತಿಗೆಯಿಂದ ಕಲ್ಲಿಗೆ ಹೊಡೆಯುವ ಮೂಲಕ ಮೆಟ್ಟಿಲು ಕಾಮಗಾರಿಗೆ ಅಧಿಕೃತವಾಗಿ ಚಾಲನೆ ನೀಡಿದರು. ಮಾತ್ರವಲ್ಲದೇ ಮೂಲಭೂತ ಸೌಕರ್ಯಗಳ ಕಾಮಗಾರಿಗೂ ಚಾಲನೆ ನೀಡಿದರು.
ರಾಜ್ಯ ಸರ್ಕಾರದಿಂದ 575ಕೋಟಿ ರೂ.ಪ್ರಸ್ತಾವನೆಯನ್ನು ಸಲ್ಲಿಸಲಾಗಿತ್ತು. ಇದಕ್ಕೆ ಒಪ್ಪಿಗೆ ಸೂಚಿಸಿರುವ ಸರ್ಕಾರ ಪ್ರಾಥಮಿಕವಾಗಿ 5ಕೋಟಿ.ರೂ ಬಿಡುಗಡೆ ಮಾಡಿದೆ. 12 ವರ್ಷಕ್ಕೊಮ್ಮೆ ನಡೆಯುವ ಮಹಾಮಸ್ತಕಾಭಿಷೇಕ 2018ರ ಫೆಬ್ರವರಿಯಲ್ಲಿ ನಡೆಯಲಿದೆ.
ವಿಂದ್ಯಾಗಿರಿಯ ಕೆಳ ಭಾಗದಲ್ಲಿ ಮೆಟ್ಟಿಲುಗಳಿಗೆ ಚಾಲನೆ ನೀಡಿದ ಸ್ವಾಮೀಜಿ ಬಳಿಕ ಮಾತನಾಡಿ, ಶ್ರವಣಬೆಳಗೊಳದಲ್ಲಿ ಸಮಸ್ಯೆ ಇದೆ. ಅದಕ್ಕೆ ಒಂದೊಂದೇ ಪರಿಹಾರವೂ ಸಿಗುತ್ತಿದೆ. ಪ್ರವಾಸಿಗರು ಹಾಗೂ ಭಕ್ತರಿಗೆ ಸೌಲಭ್ಯ ಒದಗಿಸುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದರು.
ಸೌಕರ್ಯ ಇದ್ದರೆ ಮಾತ್ರ ಪ್ರವಾಸಿಗರು ಬರುತ್ತಾರೆ. ಕರ್ನಾಟಕ ಮಾತ್ರವಲ್ಲದೇ ಭಾರತ ಸೇರಿದಂತೆ ಅಲೆಗ್ಸಾಂಡರ್ ನನ್ನು ಸೋಲಿಸಿದ ಮೌರ್ಯ ಗುಪ್ತರು ಬಂದು ನೆಲೆಸಿದ ಪುಣ್ಯ ನೆಲವಿಂದು ಇತಿಹಾಸದ ಪುಟ ಸೇರಿದೆ.
ಮುನಿಗಳ ತಪ್ಪಸಿಗೆ ಪ್ರಸಿದ್ದಿಯಾಗಿರುವ ಶ್ರವಣಬೆಳಗೊಳದಲ್ಲಿ 1981 ಮಾರ್ಚ್ ನಲ್ಲಿ ಪ್ರಥಮ ಅಭಿಷೇಕ ನಡೆಯಿತು. ಅಂದು ಗುಳಿಕ ಅಜ್ಜಿ ಅಭಿಷೇಕ ಮಾಡಿರುವ ಚಿತ್ರಣ ಈಗಲೂ ಬಾಹುಬಲಿಯ ಮುಂಭಾಗದಲ್ಲಿ ಚಿತ್ರಣವಿದೆ ಎಂದರು.
ಕಾಮಗಾರಿಗಳ ವಿವರ: 42 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ, 400 ನೂತನ ಮೆಟ್ಟಿಲು ಸೇರಿದಂತೆ ಬಾಹುಬಲಿ ಮೂರ್ತಿಯ ಸುತ್ತಮುತ್ತಲಿನ ಟೈಲ್ಸ್ ಕಾಮಗಾರಿ. ಇತರೆ ಮೂಲಭೂತ ಸೌಕರ್ಯಗಳನ್ನು ಮಾಡಲಾಗುತ್ತಿದೆ.
ಸುರಕ್ಷತೆ ಸಲುವಾಗಿ ಸುತ್ತಲ್ಲೂ ತಂತಿ ಬೇಲಿ ನಿರ್ಮಾಣ ಮಾಡಲಾಗುತ್ತಿದೆ. ಮತ್ತು ಹೋಂ ಗಾರ್ಡ್ಸ್ ಹಾಗೂ ಖಾಸಗಿ ಸೆಕ್ಯುರಿಟಿ ಗಾರ್ಡ್ ಗಳನ್ನು ನಿಯೋಜಿಸಲಾಗುತ್ತದೆ.
ಸಾರ್ವಜನಿಕರಿಗೆ ಹಾಗೂ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಎಂದಿನಂತೆ ಬಾಹುಬಲಿಯ ದರ್ಶನ ಇರಲಿದೆ ಎಂದರು.