ಹಾಸನ: ಏಳು ಮಂದಿ ಚಾಲಾಕಿ ಸರಗಳ್ಳರ ಬಂಧನ
ಹಾಸನ, ಜೂನ್ 18 : ಒಂಟಿ ಮಹಿಳೆಯರ ಮಾಂಗಲ್ಯ, ಚಿನ್ನದ ಸರವನ್ನು ಕಸಿದು ಪರಾರಿಯಾಗುತ್ತಿದ್ದ ಏಳು ಮಂದಿ ಚಾಲಾಕಿ ಕಳ್ಳರ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಅವರು, ಯಶಸ್ವಿ ಕಾರ್ಯಾಚರಣೆ ನಡೆಸಿ ಏಳು ಮಂದಿ ಚಲಾಕಿ ಕಳ್ಳರನ್ನು ಬಂಧಿಸಿರುವುದಾಗಿ ತಿಳಿಸಿದರು.
ಬಂಧಿತರು ನಗರದ ಹಳೆಮಟನ್ ಮಾರ್ಕೆಟ್ ಬಳಿಯ ನಿವಾಸಿ ಹಣ್ಣಿನ ವ್ಯಾಪಾರಿ ಮಹಮದ್ ಮುದಾಸೀರ್ (22), ಮಾರ್ಕೆಟ್ ನಿವಾಸಿ ಮುದಾಸೀರ್ ಅಹಮದ್ (20), ಶಾಕಿಬ್ (20), 1ನೇ ಕ್ರಾಸ್ ಆದರ್ಶ ನಗರ ನಿವಾಸಿ ಗುಜರಿ ವ್ಯಾಪಾರಿ ಸುಹೇಬ್ ಖಾನ್ (20), ಕುಂಬಾರ ಬೀದಿ ನಿವಾಸಿ ಫೈರೋಜ್ (20), ಇಲಾಹಿ ನಗರ ನಿವಾಸಿ ಶಾಹಿದ್ (22) ಮತ್ತು ಪೆನ್ಷನ್ ಮೊಹಲ್ಲಾ ನಿವಾಸಿ ಗುಜರಿ ವ್ಯಾಪಾರಿ ಮಹಮದ್ ಅಪ್ಲಲ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 8ಲಕ್ಷ 25 ಸಾವಿರ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿರುವುದಾಗಿ ತಿಳಿಸಿದ್ದಾರೆ.
ಆರೋಪಿಗಳು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮೋಟಾರ್ ಬೈಕಿನಲ್ಲಿ ಹಿಂಬಾಲಿಸಿ ಚಿನ್ನದ ಸರಗಳನ್ನು ದೋಚಿಕೊಂಡು ಹೋಗುತ್ತಿದ್ದರು. ಈ ಸಂಬಂಧ ಹಲವು ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಬೇಧಿಸಿ ಆರೋಪಿಗಳ ಪತ್ತೆಗೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಂಡ ರಚಿಸಿ ಕಾರ್ಯಾಚರಣೆ ನಡೆಸಿದ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಹಾಸನ ನಗರ ವೃತ್ತ ವ್ಯಾಪ್ತಿಯಲ್ಲಿ ನಗರ ಪೊಲೀಸ್ ಠಾಣೆಯ ಭಾಗದಲ್ಲಿ 4 ಪ್ರಕರಣ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 3, ಬಡಾವಣೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಹೀಗೆ ಹಲವು ಪ್ರಕರಣಗಳಲ್ಲಿ ಸರಗಳ್ಳÀತನ ಮಾಡಿರುವುದು ಬೆಳಕಿಗೆ ಬಂದಿರುವುದಾಗಿ ತಿಳಿಸಿದರು.
ಸರಗಳ್ಳರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಎಸ್ಪಿ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶ್ಲಾಘಿಸಿದ್ದಾರೆ.