ಮಸ್ತಕಾಭಿಷೇಕ ತಯಾರಿ ವೀಕ್ಷಿಸಿದ ಡಿಸಿ ರೋಹಿಣಿ ಸಿಂಧೂರಿ
ಶ್ರವಣಬೆಳಗೊಳ, ಜುಲೈ 24: ಮಹಾಮಸ್ತಕಾಭಿಷೇಕ ಮಹೋತ್ಸವದ ಕಾಮಗಾರಿಗಳನ್ನು ಜನವರಿ 15 ರೊಳಗೆ ಮುಗಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದು, ನಾಡಿಗೆ ಕೀರ್ತಿ ಬರುವ ರೀತಿಯಲ್ಲಿ ಈ ಮಹಾಮಸ್ತಕಾಭಿಷೇಕ ನೆರವೇರಲಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ ಭರವಸೆ ನೀಡಿದರು.
ಹಾಸನ ಜಿಲ್ಲೆ ಜಿಲ್ಲಾಧಿಕಾರಿಯಾಗಿ ನೂತನವಾಗಿ ಆಗಮಿಸಿರುವ ಅವರಿಗೆ ಶ್ರೀಕ್ಷೇತ್ರ ಶ್ರವಣಬೆಳಗೊಳ ಜೈನ ಮಠ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಆಯೋಜಿಸಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲಾಡಳಿತಕ್ಕೆ 2018 ರಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವವು ಅತಿ ದೊಡ್ಡ ಕೆಲಸವಾಗಿದೆ. ಸರ್ಕಾರದಿಂದ 175 ಕೋಟಿ ರೂಪಾಯಿ ಅನುಧಾನ ಬಿಡುಗಡೆಯಾಗಿದ್ದು, ಈಗಾಗಲೇ 43ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡವಿದ್ದು, ಇನ್ನು 5 ತಿಂಗಳ ಅವಧಿಯಲ್ಲಿ ಸರ್ಕಾರದ ವತಿಯಿಂದ ಆಗಬೇಕಾದ ಎಲ್ಲಾ ಕೆಲಸಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.
ಬಹು ಮುಖ್ಯವಾಗಿ ಅಭಿಷೇಕದ ಅಟ್ಟಣಿಗೆ ಹಾಗೂ ವೀಕ್ಷಣಾ ಗ್ಯಾಲರಿ ತುರ್ತಾಗಿ ನಿರ್ಮಾಣ ಆಗಬೇಕಾಗಿದ್ದು, ಈಗಾಗಲೇ ಟೆಂಡರ್ ಕರೆಯಲಾಗಿದೆ. ಆಗಸ್ಟ್ ಮೊದಲ ವಾರದಲ್ಲಿ ಕೆಲಸ ಪ್ರಾರಂಭಗೊಳ್ಳಲಿದೆ ಹಾಗೂ ವಿವಿಐಪಿ ಗೆಸ್ಟ್ಹೌಸ್ನಲ್ಲಿ ಹೊಸದಾಗಿ 20 ಕೊಠಡಿಗಳ ನಿರ್ಮಾಣ, ಒಳಚರಂಡಿ, ಕಲ್ಯಾಣಿ ಜೀರ್ಣೋದ್ಧಾರ, ವಿವಿಧ ಭವನಗಳ ನಿರ್ಮಾಣ, ಬಸ್ ನಿಲ್ದಾಣ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವಾರು ಶಾಶ್ವತ ಕಾಮಗಾರಿಗಳು ಆರಂಭಗೊಳ್ಳಲಿವೆ ಎಂದು ತಿಳಿಸಿದರು.
ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಆಶೀರ್ವಚನ ನೀಡಿ ಮಾತನಾಡಿ, ಸಮಯಾವಕಾಶ ಕಡಿಮೆ ಇದೆ ಎಂಬುದೇ ಸವಾಲಾಗಿದ್ದು, ಈ ಕಡಿಮೆ ಅವಧಿಯಲ್ಲಿ ಮಹೋತ್ಸವವನ್ನು ಯಶಸ್ವಿಗೊಳಿಸಲು ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಎಲ್ಲಾ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉತ್ಸುಕರಾಗಿರುವುದು ಶ್ಲಾಘನೀಯವಾಗಿದ್ದು, ಮಹಾಮಸ್ತಕಾಭಿಷೇಕ ಮಹೋತ್ಸವ ಯೋಜನೆಗಳ ಅನುಷ್ಟಾನಗೊಳಿಸಿ ಯಶಸ್ವಿಗೊಳಿಸಲು ಶಕ್ತಿ ನೀಡುವಂತೆ ಭಗವಾನ್ ಬಾಹುಬಲಿ ಸ್ವಾಮಿಯವರಲ್ಲಿ ಪ್ರಾರ್ಥಿಸುತ್ತೇವೆ ಎಂದು ತಿಳಿಸಿದರು.