ಕುರಿ ಮಾರ್ತೀವಿ ಎಂದು ಬಂದವರು ಕೊಲೆ ಮಾಡಿ ಆಭರಣ ದೋಚಿ ಪರಾರಿ
ಹಾಸನ, ಆಗಸ್ಟ್ 23: ವೃದ್ಧೆಯೊಬ್ಬರನ್ನು ಕೊಲೆ ಮಾಡಿ, ಅವರ ಮೈಮೆಲಿದ್ದ ಆಭರಣ ಹಾಗೂ ಹಣ ದೋಚಿ ಪರಾರಿಯಾದ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ನಗರದ ಹೊರವಲಯ ಹೊಸಕೊಪ್ಪಲು ಬಡಾವಣೆ ನಿವಾಸಿ ಅಕ್ತರ್ ಬಾನು (61) ಹಂತಕರಿಗೆ ಬಲಿಯಾದ ದುರ್ದೈವಿ.
'ನಮ್ಮ ಬಳಿ ಕುರಿ ಇದೆ, ಕಡಿಮೆ ಬೆಲೆಗೆ ನೀಡುತ್ತೇವೆ' ಎಂದು ಎರಡು ದಿನಗಳ ಹಿಂದೆ ಇಬ್ಬರು ಮಹಿಳೆಯರು ವೃದ್ಧೆಯನ್ನು ಕರೆದೊಯ್ದಿದ್ದರು ಎನ್ನಲಾಗಿದೆ. ಆ ನಂತರ ಆಕೆ ಹಿಂತಿರುಗಿ ಬಂದಿರಲಿಲ್ಲ. ಇದಾದ ಬಳಿಕ ವೃದ್ಧೆ ಮನೆಯವರು ಪೊಲೀಸ್ ಠಾಣೆಗೆ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದರು. ನಂತರ ಆಕೆ ಶವವಾಗಿ ಪತ್ತೆಯಾಗಿದ್ದಾರೆ.[ಮರಳಿಗಾಗಿ ಕೊಲೆ: ಬಸ್ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಪ್ರಮುಖ ಆರೋಪಿ]
ಇದೀಗ ಮನೆಯಿಂದ ಸ್ವಲ್ಪ ದೂರದಲ್ಲಿ ಶವ ಪತ್ತೆಯಾಗಿದ್ದು, ಹಗ್ಗದಿಂದ ಕುತ್ತಿಗೆ ಬಿಗಿದು ಸಾಯಿಸಿರುವ ರೀತಿಯಲ್ಲಿ ಶವ ದೊರೆತಿದೆ. ಮೈಮೇಲಿದ್ದ ಒಡವೆ ಮತ್ತು ಕುರಿ ಖರೀದಿಸಲೆಂದು ಇಟ್ಟುಕೊಂಡಿದ್ದ ಸುಮಾರು 20 ಸಾವಿರ ರು. ಹಣವನ್ನು ದೋಚಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಂತಕರ ಪತ್ತೆಗಾಗಿ ಕ್ರಮ ಕೈಗೊಂಡಿದ್ದಾರೆ.