ಬಾಲಕಿಯನ್ನು ಅಪಹರಿಸಿದ್ದ ಮದರಸ ಗುರು ಬಂಧನ
ಹೊಳೆನರಸೀಪುರ ಡಿಸೆಂಬರ್ 12: ಪಾಠ ಹೇಳಿಸಿಕೊಳ್ಳಲು ಮದರಸಕ್ಕೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಮದರಸ ಗುರುವೊಬ್ಬ ಅಪಹರಿಸಿ ಸಿಕ್ಕಿ ಬಿದ್ದಿರುವ ಘಟನೆ ತಾಲೂಕಿನ ಜಾಂದಾಳ್ ಗ್ರಾಮದಲ್ಲಿ ನಡೆದಿದೆ.
ಮಸೀದಿ ಗುರು ಮಹಮ್ಮದ್ ಅಕ್ರಂ (62) ಬಂಧಿತ ಆರೋಪಿ. ಬಾಲಕಿಯನ್ನು ಅಪಹರಿಸಿ ಬಾಂಬೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಎಂದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಬಾಲಕಿ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾಳೆ.[ಮೈಸೂರು: ಮಕ್ಕಳ ಕಳ್ಳಸಾಗಾಟ ಜಾಲ ಭೇದಿಸಿದ ಪೊಲೀಸರು]
ಶಿವಮೊಗ್ಗ ಜಿಲ್ಲೆ, ಭದ್ರಾವತಿ ತಾಲೂಕು ಕಾಗೇಕಾಡು ಮಗ್ಗು ಗ್ರಾಮದ ನಿವಾಸಿ ಮಹಮ್ಮದ್ ಅಕ್ರಂ ಕಳೆದ ನಾಲ್ಕು ವರ್ಷಗಳ ಹಿಂದೆ ಹೊಳೆನರಸೀಪುರದ ಜಾಂದಾಳು ಗ್ರಾಮಕ್ಕೆ ವಲಸೆ ಬಂದು ನೆಲೆಸಿದ್ದನು. ಈತ ಗ್ರಾಮದ ಜಾಮೀಯಾ ಮಸೀದಿಯಲ್ಲಿ ಗುರುವಾಗಿ ಕಾರ್ಯನಿರ್ವಹಿಸುತ್ತಿದ್ದನಲ್ಲದೆ ಮದರಸದಲ್ಲಿ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದನು.
ಜಾಂದಾಳು ಗ್ರಾಮದ ಉರ್ದು ಶಾಲೆಯಲ್ಲಿ ಓದುತ್ತಿದ್ದ ಬಾಲಕಿ ಪಾಠ ಹೇಳಿಸಿಕೊಳ್ಳಲು ಮದರಸದಲ್ಲಿದ್ದ ಈತನ ಬಳಿಗೆ ಹೋಗುತ್ತಿದ್ದಳು. ಆಕೆಯ ತಲೆಕೆಡಿಸಿದ ಗುರು ಮಹಮ್ಮದ್ ಅಕ್ರಂ ಡಿ.9 ರಂದು ಎಂದಿನಂತೆ ತನ್ನ ತಂಗಿಯೊಂದಿಗೆ ಶಾಲೆಗೆ ತೆರಳಿದ್ದ ಆಕೆಯನ್ನು ಪುಸಲಾಯಿಸಿ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದನು.[ತೀರ್ಥಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿ ಕೊಲೆ, ಅತ್ಯಾಚಾರ ಶಂಕೆ]
ಸಂಜೆ ಶಾಲೆಯಿಂದ ಬಾಲಕಿ ಮನೆಗೆ ಬರದಿದ್ದಾಗ ಪೋಷಕರು ಹುಡುಕಾಡಿದ್ದು, ಗ್ರಾಮದ ಕೆಲವರು ಮದರಸ ಗುರುಗಳ ಜೊತೆ ಬಸ್ಸಿನಲ್ಲಿ ಹೋಗುತ್ತಿದ್ದುದನ್ನು ನೋಡಿದ್ದಾಗಿ ಹೇಳಿದ್ದರಿಂದ ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹಮ್ಮದ್ ಅಕ್ರಂನನ್ನು ಶಿವಮೊಗ್ಗದಲ್ಲಿ ಬಂಧಿಸಿ ಬಾಲಕಿಯನ್ನು ರಕ್ಷಿಸಲಾಗಿದೆ.