ಹಾಸನದಲ್ಲಿ ಸೆಲ್ಫಿ ತೆಗೆಯುವಾಗ ನದಿಗೆ ಬಿದ್ದು ವ್ಯಕ್ತಿ ಸಾವು
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಉದಯಗಿರಿ ಬಡಾವಣೆಯ ನಿವಾಸಿ ಕುಮಾರ್(37) ಸಾವನ್ನಪ್ಪಿದ ದುರ್ದೈವಿ. ಇವರು ತನ್ನ ಪತ್ನಿ ರೂಪ ಮತ್ತು 12 ವರ್ಷದ ಪುತ್ರ ಜ್ಞಾನೇಶ್ ನೊಂದಿಗೆ ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಬಂದಿದ್ದರು.
ಕೆ.ಆರ್.ನಗರ, ಮೇ 11: ವ್ಯಕ್ತಿಯೊಬ್ಬರು ಮೊಬೈಲ್ನಲ್ಲಿ ಸೆಲ್ಫಿ ತೆಗೆದುಕೊಳ್ಳುವ ವೇಳೆ ಕಾಲು ಜಾರಿ ಕಾವೇರಿ ನದಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಚುಂಚನಕಟ್ಟೆಯಲ್ಲಿ ಬುಧವಾರ ನಡೆದಿದೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಉದಯಗಿರಿ ಬಡಾವಣೆಯ ನಿವಾಸಿ ಕುಮಾರ್(37) ಸಾವನ್ನಪ್ಪಿದ ದುರ್ದೈವಿ. ಇವರು ತನ್ನ ಪತ್ನಿ ರೂಪ ಮತ್ತು 12 ವರ್ಷದ ಪುತ್ರ ಜ್ಞಾನೇಶ್ ನೊಂದಿಗೆ ಚುಂಚನಕಟ್ಟೆ ಶ್ರೀರಾಮ ದೇವಾಲಯಕ್ಕೆ ಬಂದಿದ್ದರು.
ದೇವಾಲಯಕ್ಕೆ ಭೇಟಿ ನೀಡಿ ಪೂಜಾಕೈಂಕರ್ಯ ಮುಗಿದ ಬಳಿಕ ಮಧ್ಯಾಹ್ನ ಸುಮಾರು 3ರ ಸಮಯದಲ್ಲಿ ಕಾವೇರಿ ನದಿ ಬಳಿಗೆ ತೆರಳಿದ ಜ್ಞಾನೇಶ್ ಅಲ್ಲಿ ಸೆಲ್ಪಿ ತೆಗೆಯಲು ಮುಂದಾಗಿದ್ದಾರೆ. ಈ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದು, ಈಜು ಬಾರದೆ ಮುಳುಗಿದ್ದಾನೆ.
ಗಂಡ ನದಿಗೆ ಬಿದ್ದು ಮುಳುಗುತ್ತಿದ್ದುದನ್ನು ಕಂಡ ಹೆಂಡತಿ ಮತ್ತು ಮಗ ಜೋರಾಗಿ ಬೊಬ್ಬೆ ಹೊಡೆಯುತ್ತಾ ಯಾರಾದರೂ ಕಾಪಾಡಿ ಎಂದು ಕೂಗಿದ್ದಾರೆ. ಅವರ ಚೀರಾಟ ಕೇಳಿ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದರಾದರೂ ಅಷ್ಟರಲ್ಲಿ ಕುಮಾರ್ ನೀರು ಪಾಲಾಗಿದ್ದರು.
ಕೂಡಲೇ ಮಾಹಿತಿ ತಿಳಿದ ಚುಂಚನಕಟ್ಟೆ ಪೊಲೀಸ್ ಉಪಠಾಣೆಯ ಮುಖ್ಯಪೇದೆ ವೆಂಕಟೇಶ್ಮೂರ್ತಿ ಮತ್ತು ಸಿಬ್ಬಂದಿ ಅರವಿಂದ ಸ್ಥಳಕ್ಕಾಗಮಿಸಿ ಕೆ.ಆರ್.ನಗರದ ಅಗ್ನಿಶಾಮಕ ಠಾಣೆಯವರಿಗೆ ವಿಷಯ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಶವವನ್ನು ನೀರಿನಿಂದ ಹೊರತೆಗೆದು ಕೆ.ಆರ್.ನಗರ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ವಾರಾಸುದಾರರಿಗೆ ಶವವನ್ನು ಹಸ್ತಾತರಿಸಲಾಗಿದೆ. ಈ ಸಂಬಂಧ ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.