ಶ್ರವಣಬೆಳಗೊಳದಲ್ಲಿ ಕಲ್ಪದ್ರುಮ ಮಹಾ ಆರಾಧನ
ಶ್ರವಣಬೆಳಗೊಳ, ಜುಲೈ 10 : ಅಷ್ಟಾಹಿನಿಕ ಪರ್ವದ ಕಲ್ಪದ್ರುಮ ಮಹಾ ಆರಾಧನಾ ಮಹೋತ್ಸವದ ಸಮಾರೋಪ ಸಮಾರಂಭದ ನಿಮಿತ್ತ 24 ತೀರ್ಥಂಕರರುಗಳ 24 ಸಮವಸರಣದ ಭವ್ಯ ಮೆರವಣಿಗೆ ಶ್ರೀಕ್ಷೇತ್ರ ಶ್ರವಣಬೆಳಗೊಳದಲ್ಲಿ ಸೋಮವಾರ ಸಂಜೆ ನೆರವೇರಿತು.
ಪೂಜ್ಯ ಆಚಾರ್ಯಶ್ರೀ ವರ್ಧಮಾನಸಾಗರ ಮಹಾರಾಜರು ಮತ್ತು ಸಂಘಸ್ಥ ತ್ಯಾಗಿಗಳು ಹಾಗೂ ಇತರೆ ಆಚಾರ್ಯುಶ್ರೀಗಳು, ಮುನಿಗಳು, ಮಾತಾಜಿಯವರ ಸಾನಿಧ್ಯದಲ್ಲಿ, ಪೂಜ್ಯ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ನೇತೃತ್ವದಲ್ಲಿ ಮೆರವಣಿಗೆ ಜರುಗಿತು.
ವಿವಿಧ ವಾದ್ಯ ವೃಂದಗಳೊಂದಿಗೆ, ಮಂಗಲ ಕಲಶ, ಧರ್ಮದ್ವಜ ಹಾಗೂ ಶ್ರಾವಕ-ಶ್ರಾವಕಿಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಅಹಿಂಸೆ, ತ್ಯಾಗ, ಸತ್ಯದ ಸಾಕಾರಮೂರ್ತಿಯಾಗಿರುವ, 57 ಅಡಿ ಎತ್ತರವಿರುವ ಗೊಮ್ಮಟೇಶ್ವರನ ಏಕಶಿಲಾ ವಿಗ್ರಹದ ಮಸ್ತಕಾಭಿಷೇಕಕ್ಕೆ ವಿಶ್ವದಾದ್ಯಂತ ಭಕ್ತಾದಿಗಳು ಬರಲಿದ್ದಾರೆ.
2018ರ ಫೆಬ್ರವರಿ 7ರಂದು, ಹನ್ನೆರಡು ವರ್ಷಗಳಿಗೊಮ್ಮೆ ನಡೆಯಲಿರುವ ಮಹಾಮಸ್ತಕಾಭಿಷೇಕ ಜರುಗಲಿದೆ. ಹಾಸನದಿಂದ ಶ್ರವಣಬೆಳಗೊಳ 53 ಕಿ.ಮೀ. ಇದ್ದು, ಮಹಾಮಸ್ತಿಕಾಭಿಷೇಕಕ್ಕೆ ಭರದ ಸಿದ್ಧತೆಗಳು ಜರುಗುತ್ತಿವೆ.
ಕಳೆದ ಶುಕ್ರವಾರ, ಜುಲೈ 7ರಂದು ಕರ್ನಾಟಕದ ರಾಜ್ಯಪಾಲ ವಜು ಭಾಯಿ ವಾಲಾ ಅವರು ಚಾತುರ್ಮಾಸ ಮಂಗಳ ಕಳಶ ಸ್ಥಾಪನಾ ಮಹೋತ್ಸವದಲ್ಲಿ ಪಾಲ್ಗೊಂಡು, ಗುಜರಾತಿ ಹಾಡಿಗೆ ನರ್ತನ ಮಾಡಿದ್ದರು.