ಹೇಮಾವತಿ ಜಲಾಶಯಕ್ಕೆ ಮುತ್ತಿಗೆ: ಕರವೇಯ ನೂರಾರು ಕಾರ್ಯಕರ್ತರ ಬಂಧನ
ಹಾಸನ, ಸೆಪ್ಟೆಂಬರ್ 6: ತಮಿಳುನಾಡಿಗೆ ನೀರು ಹರಿಸುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಹೇಮಾವತಿ ಜಲಾಶಯಕ್ಕೆ ಮುತ್ತಿಗೆ ಹಾಕಲು ಹೋದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.
ಜಲಾಶಯದ ಎಂಜಿನಿಯರ್ ಕಚೇರಿ ಮುಂಭಾಗ ರಸ್ತೆ ಮಧ್ಯೆ ನಿಂತು, ಕರ್ನಾಟಕ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಖಂಡಿಸಿ ಘೋಷಣೆ ಕೂಗಿದರು. ನಂತರ ಮೆರವಣಿಗೆ ಮೂಲಕ ಜಲಾಶಯದ ಮುಂಭಾಗದ ಗೇಟಿನ ಬಳಿ ಸಮಾವೇಶಗೊಂಡರು. ಬ್ಯಾರಿಕೇಡ್ ಸಮೇತ ನೂರಾರು ಪೊಲೀಸರು ಮೊದಲೇ ಬಿಗಿ ಬಂದೋಬಸ್ತ್ ಮಾಡಿ, ಒಳ ನುಸುಳದಂತೆ ತಡೆಯೊಡ್ಡಿದರು.[ಬಂಗಾರಪ್ಪ ತೆಗೆದುಕೊಂಡ ನಿರ್ಧಾರ ಸಿದ್ದುರಿಂದ ಸಾಧ್ಯವೆ?]
ಗೊರೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ್ದರಿಂದ ಪೊಲೀಸರು ಕರವೇಯ ನೂರಾರು ಕಾರ್ಯಕರ್ತರನ್ನು ಬಂಧಿಸಿ, ಸಾರಿಗೆ ಬಸ್ ನಲ್ಲಿ ಕರೆದೊಯ್ದರು. ನಂತರ ಬಿಡುಗಡೆ ಮಾಡಲಾಗಿದೆ. ಮುನ್ನೆಚ್ಚರಿಕ ಕ್ರಮವಾಗಿ ಪೊಲೀಸ್ ಸಿಬ್ಬಂದಿ ರಕ್ಷಣಾ ಕವಚ ಹಾಗೂ ಜಲಫಿರಂಗಿ ಸೇರಿದಂತೆ ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದ್ದರು.['ಬಸ್ಸು ಸುಟ್ಟರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ']
ಸುಪ್ರೀಂ ಕೋರ್ಟ್ ನಿರ್ದೇಶನಕ್ಕೆ ಆಕ್ರೋಶ ವ್ಯಕ್ತಪಡಿಸಿ, ಮಂಗಳವಾರ ಗೊರೂರನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್, ಡಿವೈಎಸ್ಪಿ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.